ನೈತಿಕ ಸ್ಥೈರ್ಯವನ್ನು ಕುಗ್ಗಿಸುವುದಕ್ಕಾಗಿ ಡಿಕೆಶಿಯ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸಲಾಗಿದೆ : ಅಮಳ ರಾಮಚಂದ್ರ

ಪುತ್ತೂರು: ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಇಡಿ, ಐಟಿ ಮತ್ತು ಸಿಬಿಐಗಳನ್ನು ತನ್ನ ಸ್ವ ರಕ್ಷಣೆಯ ಸೊತ್ತುಗಳಾಗಿ ಬಳಸಿಕೊಳ್ಳುತ್ತಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನೈತಿಕ ಸ್ಥೈರ್ಯವನ್ನು ಕುಗ್ಗಿಸುವುದಕ್ಕಾಗಿ ಅವರ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಆರೋಪಿಸಿದ್ದಾರೆ.

ಅವರು ಬುಧವಾರ ಪುತ್ತೂರು ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಬೆಳಗಾವಿ ಅಧಿವೇಶನವು ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಇಂತಹ ಸಂದರ್ಭದಲ್ಲಿ ತನ್ನ ಮೇಲೆ ವಿಪಕ್ಷಗಳು ನಡೆಸುವ ಪ್ರಹಾರವನ್ನು ತಡೆಯಲು ಸಾಧ್ಯವಾಗದ ಬಿಜೆಪಿಯು ಇಂತಹ ದಾಳಿ ಮೂಲಕ ಅತ್ಮಸ್ಥೈರ್ಯವನ್ನು ಕುಗ್ಗಿಸುವ ಪ್ರಯತ್ನ ನಡೆಸುತ್ತಿದೆ. 2017ರಲ್ಲಿ ಗುಜರಾತ್ ರಾಜ್ಯದ ಕಾಂಗ್ರೆಸ್ ಎಂಎಲ್‍ಎಗಳು ಬಿಜೆಪಿಯ ಆಪರೇಶನ್ ಕಮಲಕ್ಕೆ ಒಳಗಾಗದಂತೆ ತಡೆಯಲು ಡಿಕೆಶಿ ಅವರು ರಾಜ್ಯದಲ್ಲಿ ಅವರಿಗೆ ವ್ಯವಸ್ಥೆ ಮಾಡಿದ್ದರು. ಇದನ್ನು ಸಹಿಸದೆ ಅಂದು ಅವರ ಮನೆಯ ಮೇಲೆ ದಾಳಿ ನಡೆಸಲಾಗಿತ್ತು. ಬಳಿಕ ಅದನ್ನು ಕಾಕತಾಳೀಯ ಎಂದು ಬಿಂಬಿಸಲಾಯಿತು. ಅದು ಕಳೆದು 5 ವರ್ಷಗಳಾದರೂ ಇಂದಿಗೂ ದಾಳಿ ಮುಗಿದಿಲ್ಲ. 2019ರಲ್ಲಿ ಡಿಕೆಶಿ ಅವರನ್ನು ಬಂಧಿಸಲಾಯಿತು. 2020ರ ಉಪಚುನಾವಣೆಯ ಸಂದರ್ಭದಲ್ಲಿ ಮತ್ತೊಮ್ಮೆ ದಾಳಿ ನಡೆಸಲಾಯಿತು. ರಾಹುಲ್ ಗಾಂಧಿಯ ಜೋಡೋ ಯಾತ್ರೆಯ ಸಂದರ್ಭದಲ್ಲಿಯೂ ದಾಳಿ ನಡೆಯಿತು. ಇದೀಗ 2022ರಲ್ಲಿ ಬೆಳಗಾವಿ ಅಧಿವೇಶನ ನಡೆಯುವ ಸಂದರ್ಭದಲ್ಲಿ ದಾಳಿ ನಡೆಸಿ ಅವರ ವ್ಯಕ್ತಿತ್ವ ಹರಣಕ್ಕೆ ಮತ್ತು ರಾಜಕೀಯ ಪಕ್ಷವನ್ನು ಅನೈತಿಕವಾಗಿ ಮುಗಿಸುವ ಪ್ರಯತ್ನ ನಡೆಸಲಾಗುತ್ತಿದೆ.

ಬಿಜೆಪಿಯು ದೇಶದಲ್ಲಿ ಈ ತನಕ 277 ಇತರ ಪಕ್ಷದ ಶಾಸಕರನ್ನು ಖರೀದಿ ನಡೆಸಿದೆ. ಇದಕ್ಕಾಗಿ ವ್ಯಯಿಸಿದ ಕೋಟ್ಯಾಂತರ ಹಣ ಎಲ್ಲಿಂದ ಬಂತು, 40% ಕಮೀಷನ್ ಬಗ್ಗೆ ಗುತ್ತಿಗೆದಾರರೇ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ರಫೇಲ್ ಖರೀದಿ ಅವ್ಯವಹಾರ ಇವುಗಳ ಬಗ್ಗೆ ತನಿಖೆ ನಡೆಸುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿದ ಅವರು ಬಿಜೆಪಿ ಸರ್ಕಾರವು ತನ್ನ ಮೇಲಿನ ಆರೋಪಗಳನ್ನು ಮುಚ್ಚಿಹಾಕಲು ಈ ದಾಳಿ ನಡೆಸುತ್ತಿದೆ. ಮತದಾರರ ಹೆಸರು ತೆಗೆಯುವ, ನಕಲಿ ಗುರುತು ಚೀಟಿ ಮಾಡುವ ಮೂಲಕ ತನ್ನ ಅಸ್ಥಿತ್ವವನ್ನು ಉಳಿಸಿಕೊಳ್ಳುವ ಅಡ್ಡ ದಾರಿ ಹಿಡಿದಿರುವ ಬಿಜೆಪಿಯು ವಿಧಾನ ಸೌಧದಲ್ಲಿ ಸಾವರ್ಕರ್ ಭಾವಚಿತ್ರವನ್ನು ಅಳವಡಿಸಲು ಮುಂದಾಗಿರುವುದು ಅವರ ಮೇಲಿನ ಪ್ರೀತಿಯಿಂದಲ್ಲ. ಬದಲಿಗೆ ಗೊಂದಲ ಸೃಷ್ಠಿಸಿ, ವಿಪಕ್ಷಗಳನ್ನು ಕೆರಳಿಸಿ, ತನ್ನ ಮೇಲಿರುವ ಭ್ರಷ್ಟಾóಚಾರ ಇನ್ನಿತರ ಜನವಿರೋಧಿ ನಡೆಯಿಂದ ಜಾರಿಕೊಳ್ಳವ ಪ್ರಯತ್ನ ಇದಾಗಿದೆ. ಬಿಜೆಪಿ ಸರ್ಕಾರವು ಇಂತಹ ಗೊಂದಲಗಳನ್ನು ಸೃಷ್ಟಿಸುವ ಮೂಲಕ ಜನರ ನೈಜ ಸಮಸ್ಯೆಗಳನ್ನು ಮರೆ ಮಾಚುತ್ತಿರುವುದು ಖಂಡನೀಯವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೌರಿಸ್ ಮಸ್ಕರೇನಸ್, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ರಿಯಾಝ್, ಹಿಂದುಳಿದ ವರ್ಗಗಳ ಅಧ್ಯಕ್ಷ ಹರೀಶ್ ಕೋಟ್ಯಾನ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published.