ಮೂಡುಬಿದಿರೆಯ ಹೋಲಿ ರೋಸರಿ ಪ್ರೌಢಶಾಲೆಯ ಕನ್ನಡ ಅಧ್ಯಾಪಕ ಡಾ. ರಾಮಕೃಷ್ಣ ಶಿರೂರು ಅವರು ಕರ್ನಾಟಕ ಸಿರಿಗನ್ನಡ ಸಿರಿ ರಾಜ್ಯಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ ಎಂದು ದಾವಣಗೆರೆಯ ಕರ್ನಾಟಕ ರಾಜ್ಯ ಕಲಾ ಕುಂಚ ಸಾಂಸ್ಕೃತಿಕ ಸಂಸ್ಥೆಯ ರಾಜ್ಯಾಧ್ಯಕ್ಷರಾದ ಸಾಲಿಗ್ರಾಮ ಗಣೇಶ್ ಶೆಣೈ ಅವರು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ. 2025 ನವಂಬರ್ 23 ರಂದು ದಾವಣಗೆರೆಯಲ್ಲಿ ಇರುವ ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲಾ ಕಲ್ಯಾಣ ಮಂಟಪದಲ್ಲಿ ನಡೆಯುವ ರಾಜ್ಯ ಮಟ್ಟದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿರುತ್ತಾರೆ.
ಎಂ. ಎ. ಬಿ. ಎಡ್. ಪದವೀಧರರಾದ ಡಾ.ರಾಮಕೃಷ್ಣ ಶಿರೂರು ಹಿಂದಿ ಭಾಷೆಯಲ್ಲಿ ರಾಜಭಾಷಾ ವಿದ್ವಾನ್ ಪದವಿಯನ್ನು ಪಡೆದಿರುತ್ತಾರೆ. ಇವರು ಮೂಲತ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು ಮೇಲ್ಪಂಗ್ತಿಯ ಶಾನುಭೋಗರ ಮನೆತನಕ್ಕೆ ಸೇರಿದ ಭವಾನಿ ಶಂಕರ ಶಾನುಭೋಗ ಮತ್ತು ಸರೋಜಿನಿ ಶಾನುಭೋಗ ಅವರ ಪುತ್ರ. 1994ರಲ್ಲಿ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಶ್ರೀಮಂಗಲ ಪದವಿ ಪೂರ್ವ ಕಾಲೇಜಿನಲ್ಲಿ ಒಂದು ವರ್ಷ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿ, 1995 ರಿಂದ ಮೂಡುಬಿದಿರೆಯ ಹೋಲಿ ರೋಸರಿ ಪ್ರೌಢಶಾಲೆಯಲ್ಲಿ ಕನ್ನಡ ಅಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಾ ಬಂದಿದ್ದಾರೆ.
