ಮಂಗಳೂರು: ಹಿರಿಯ ವಿದ್ವಾಂಸ ಡಾ. ವಾಮನ ನಂದಾವರ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಕರಾವಳಿ ಲೇಖಕಿಯರ ವಾಚಕಿಯರ ಸಂಘ, ಹೇಮಾಂಶು ಪ್ರಕಾಶನ, ಆಕೃತಿ ಆಶಯ ಪಬ್ಲಿಕೇಶನ್ಸ್ ವತಿಯಿಂದ ಇತ್ತೀಚೆಗೆ ನಿಧನರಾದ ಹಿರಿಯ ವಿದ್ವಾಂಸರಾದ ಡಾ. ವಾಮನ ನಂದಾವರ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವು ನಗರದ ತುಳು ಅಕಾಡೆಮಿಯ ಸಿರಿ ಚಾವಡಿಯಲ್ಲಿ ನಡೆಯಿತು. ಆರದ ಎಣ್ಣೆ, ಮಾಸದ ಬತ್ತಿ, ಆರದ ದೀಪ ಎಂಬ ಹೆಸರಿನಲ್ಲಿ ನುಡಿನಮನ ಕಾರ್ಯಕ್ರಮವನ್ನು ಹಮ್ಮಿಕೊಂಡರು.
ಕಾರ್ಯಕ್ರಮದ ಮೊದಲಿಗೆ ವಾಮನ ನಂದಾವರ ಅವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ ಗಟ್ಟಿಯವರು ಪ್ರಾಸ್ತಾವಿಕವಾಗಿ ಮಾತನಾಡಿ, ವಾಮನ ನಂದಾವರ ಅವರ ಜನಪದ ಶಕ್ತಿಯನ್ನು ಎತ್ತಿ ಹೇಳಿದರು.
ತುಳು ಅಕಾಡೆಮಿಯ ಮೊದಲ ಅಧ್ಯಕ್ಷರಾದ ವಿವೇಕ ರೈ ಅವರು ಮಾತನಾಡಿ, ವಾಮನ ನಂದಾವರರ ಜೊತೆಗಿನ ಆರಂಭಿಕ ಒಡನಾಟ ಹಾಗೂ ನಿಧನರಾಗುವ ಹೊತ್ತಿನ ಭೇಟಿಯ ಬಗೆಗೆ ಸ್ಮರಿಸಿಕೊಂಡರು. ಡಾ. ವಾಮನ ನಂದಾವರ ಅವರು, ಸಂಶೋಧಕ, ಕವಿ, ಸಾಹಿತಿ, ಜನಪದ ತಜ್ಞ, ಗಣಿತದ ಉಪಾಧ್ಯಾಯರು. ಅವರು ಎಲ್ಲರ ನೆಂಟ ಹಾಗೂ ಬಂಧು ಎಂದು ಹೇಳಿದರು.
ಚಂದ್ರಕಲಾ ವಾಮನ ನಂದಾವರ ಅವರು ಮಾತನಾಡಿ, ತುಳು ಪುಸ್ತಕಗಳ ಪ್ರಕಾಶನದಲ್ಲಿ ದೊಡ್ಡ ಸಾಧನೆ ಮಾಡಿದವರು. ಡಾಕ್ಟರೇಟ್ ಅಧ್ಯಯನವಾದ ಕೋಟಿ ಚೆನ್ನಯ ಒಂದು ಸಾರ್ವಕಾಲಿಕ ಪುಸ್ತಕ ಎಂದರು.
ಈ ಸಂದರ್ಭದಲ್ಲಿ ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
