HomeFresh Newsಮೈಕಲ್ ಡಿ'ಸೋಜಾ ಮತ್ತು ಕುಟುಂಬ ಶಿಕ್ಷಣ ದತ್ತಿ ನಿಧಿ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ

ಮೈಕಲ್ ಡಿ’ಸೋಜಾ ಮತ್ತು ಕುಟುಂಬ ಶಿಕ್ಷಣ ದತ್ತಿ ನಿಧಿ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ

ಮಂಗಳೂರು ಧರ್ಮಪ್ರಾಂತ್ಯದ ಸಿಓಡಿಪಿ ಸಂಸ್ಥೆಯು ನಿರ್ವಹಿಸುವ ಮೈಕೆಲ್ ಡಿ’ಸೋಜಾ ಮತ್ತು ಕುಟುಂಬ ಶಿಕ್ಷಣ ದತ್ತಿ ನಿಧಿಯ ಅಡಿಯಲ್ಲಿ ಆಯೋಜಿಸಲಾದ ಪ್ರೇರಣಾ ಕಾರ್ಯಕ್ರಮವು ಅಕ್ಟೋಬರ್ 5 ರ ಭಾನುವಾರದಂದು ಮಂಗಳೂರಿನ ರೊಸಾರಿಯೋ ಚರ್ಚ್ ಹಾಲ್‌ನಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಡಾ. ಪೀಟರ್ ಪೌಲ್ ಸಲ್ಡಾನಾ ಅವರು , ಎಜುಕೇರ್ ಎಂಡೋಮೆಂಟ್ ಫಂಡ್‌ನ ದೃಷ್ಟಿಕೋನ, ಉದ್ದೇಶ ಮತ್ತು ಮಹತ್ವದ ಸಾಧನೆಗಳನ್ನು ವಿವರಿಸಿದರು. ಮೈಕೆಲ್ ಡಿ’ಸೋಜಾ ಮತ್ತು ಕುಟುಂಬದವರಿಗೆ ಶಿಕ್ಷಣದ ಮೇಲಿರುವ ಗೌರವ, ಅಚಲವಾದ ಉದಾರತೆ ಮತ್ತು ಬದ್ಧತೆಗಾಗಿ ಅವರು ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಮುಖ್ಯ ಅತಿಥಿಗಳಾಗಿ ಸಿಲ್ವಿಯಾ ಡಿ’ಸೋಜಾ ಮತ್ತು ವಿನ್ಸೆಂಟ್ ಡಿ’ಸಿಲ್ವಾ ಭಾಗವಹಿಸಿ ಶುಭಾಶಯಗಳನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಖ್ಯಾತ ಕೊಂಕಣಿ ಬರಹಗಾರ ಮತ್ತು ಶಿಕ್ಷಣ ನಿರ್ವಹಣಾ ಸಮಿತಿ ಸದಸ್ಯ ರಿಚರ್ಡ್ ಅಲ್ವಾರೆಸ್ ಅವರು ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಗುರಿಗಳನ್ನು ಉತ್ಸಾಹ ಮತ್ತು ಪರಿಶ್ರಮದಿಂದ ಅನುಸರಿಸಲು ಪ್ರೋತ್ಸಾಹಿಸುವ ಮೂಲಕ ಕಾರ್ಯಕ್ರಮಕ್ಕೆ ಚೈತನ್ಯ ನೀಡಿದರು.

ವಿದ್ಯಾರ್ಥಿ ಫಲಾನುಭವಿಗಳಾದ ಸಾನಿಯಾ ಲೋಬೊ ಮತ್ತು ಕ್ಲೇಸಿಯಾ ಫೆರ್ನಾಂಡಿಸ್, ಎಜುಕೇರ್ ಫಂಡ್ ತಮ್ಮ ಉನ್ನತ ಶಿಕ್ಷಣವನ್ನು ಮುಂದುವರಿಸಲು ಹೇಗೆ ಅನುವು ಮಾಡಿಕೊಟ್ಟಿತು, ಅವರ ಶೈಕ್ಷಣಿಕ ಪ್ರಯಾಣ ಹಾಗು ಭವಿಷ್ಯದ ಕನಸುಗಳಿಗೆ ಹೇಗೆ ನೆರವಾಯಿತು ಎಂದು ತಮ್ಮ ಅನಿಸಿಕೆ ಹಂಚಿಕೊಂಡರು.

ಕಾರ್ಯಕ್ರಮದಲ್ಲಿ 250 ವಿದ್ಯಾರ್ಥಿಗಳಿಗೆ 2,52,19,000 ರೂ.ಗಳನ್ನು ವಿತರಿಸಿದ್ದು ಗಮನಾರ್ಹ. ಈ ವರ್ಷದ ಆರಂಭದಲ್ಲಿ, 218 ವಿದ್ಯಾರ್ಥಿಗಳಿಗೆ 1,90,10,000 ರೂ.ಗಳನ್ನು ವಿತರಿಸಲಾಗಿದ್ದು, 2025 ರ ಒಟ್ಟು ವಿತರಣೆಯನ್ನು 4,42,29,000 ರೂ.ಗಳಿಗೆ ಹೆಚ್ಚಿಸಲಾಗಿದೆ. ಇಲ್ಲಿಯವರೆಗೆ, ನಿಧಿಯು 30 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ವಿತರಿಸಿದ್ದು, ಸಾವಿರಾರು ಯುವ ಪ್ರತಿಭೆಗಳ ಶೈಕ್ಷಣಿಕ ಸಾಧನೆಗೆ ದಾರಿಯಾಗಿದೆ.

ಸಿಒಡಿಪಿ ನಿರ್ದೇಶಕರಾದ ವಿನ್ಸೆಂಟ್ ಡಿ’ಸೋಜಾ ಅವರು ಗಣ್ಯರು, ವಿದ್ಯಾರ್ಥಿಗಳು ಮತ್ತು ಅತಿಥಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡರು. ರೀನಾ ಡಿ’ಕೋಸ್ಟಾ ಅವರು ಧನ್ಯವಾದಗಳನ್ನು ಅರ್ಪಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು. ಶೈನಿ ಪಿಂಟೊ ಕಾರ್ಯಕ್ರಮವನ್ನು ನಿರೂಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments