ಪದ್ಮಶ್ರೀ ಪುರಸ್ಕೃತ ಯೋಗ ಗುರು ಸ್ವಾಮಿ ಶಿವಾನಂದ ಬಾಬಾ ನಿಧನ

ಪದ್ಮಶ್ರೀ ಪುರಸ್ಕೃತ 128 ವರ್ಷದ ಯೋಗ ಗುರು ಸ್ವಾಮಿ ಶಿವಾನಂದ ಬಾಬಾ ಅವರು ನಿಧನರಾದರು.
ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ವಾರಾಣಸಿಯ ಬಿಎಚ್ಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶನಿವಾರ ರಾತ್ರಿ ಅವರು ಮೃತರಾಗಿದ್ದು, ಹರಿಶ್ಚಂದ್ರ ಘಾಟ್ನಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.
ಯೋಗಕ್ಕಾಗಿಯೇ ಜೀವನವನ್ನು ಮುಡಿಪಾಗಿಟ್ಟಿದ್ದ ಶಿವಾನಂದ ಅವರಿಗೆ 2022ರಲ್ಲಿ ಕೇಂದ್ರ ಸರ್ಕಾರ ಪದ್ಮಶ್ರೀ ಪುರಸ್ಕಾರ ನೀಡಿತ್ತು. ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಪ್ರಶಸ್ತಿ ಪ್ರದಾನ ಮಾಡಿದ್ದರು.
ಇಂದಿನ ಬಾಂಗ್ಲಾದೇಶದ ಸಿಲ್ಹೆಟ್ ಜಿಲ್ಲೆಯಲ್ಲಿ ಆ. 8, 1896 ರಂದು ಜನಿಸಿದ್ದ ಬಾಬಾ ಶಿವಾನಂದ ಅವರು ಆರು ವರ್ಷದವನಿದ್ದಾಗ ಹಸಿವಿನಿಂದ ತಮ್ಮ ಹೆತ್ತವರನ್ನು ಕಳೆದುಕೊಂಡರು. ಅಂದಿನಿಂದ, ಅವರು ಕಠಿಣ ಮತ್ತು ಶಿಸ್ತಿನ ಜೀವನವನ್ನು ನಡೆಸಿದರು, ಅರ್ಧ ಹೊಟ್ಟೆ ಆಹಾರವನ್ನು ಸೇವಿಸುತ್ತಿದ್ದರು. ಅವರ ಹೆತ್ತವರು ಮೃತಪಟ್ಟ ಬಳಿಕ, ಓಂಕಾರಾನಂದ ಸ್ವಾಮಿ ಎನ್ನುವವರು ನೋಡಿಕೊಳ್ಳುತ್ತಿದ್ದರು. ಅವರಿಂದ ಶಿವಾನಂದ ಅವರು ಆಧ್ಯಾತ್ಮಿಕ ಶಿಕ್ಷಣ ಮತ್ತು ಜೀವನ ಬೋಧನೆಗಳನ್ನು ಪಡೆದಿದ್ದರು.