ಪುತ್ತೂರಿನ ವಿವೇಕಾನಂದ ಶಿಶು ಮಂದಿರ : 24ನೇ ವರ್ಷದ ಶ್ರೀಕೃಷ್ಣಲೋಕ

ಪುತ್ತೂರು: ಪುತ್ತೂರಿನ ವಿವೇಕಾನಂದ ಶಿಶು ಮಂದಿರದ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಠಮಿ ಸಮಿತಿಯ ವತಿಯಿಂದ ಹಿಂದೂ ಸನಾತನ ಸಂಸ್ಕೃತಿಯ ಪ್ರತಿರೂಪವಾಗಿ ನಡೆಯುವ `ಶ್ರೀಕೃಷ್ಣ ಲೋಕ’ 24ನೇ ವರ್ಷದ ಕಾರ್ಯಕ್ರಮವು ಜರುಗಿತು. ಬೆಳಿಗ್ಗೆ ಮಕ್ಕಳಿಂದ ಪ್ರಾರ್ಥನೆ ನಡೆದ ಬಳಿಕ ಕೃಷ್ಣ, ರಾಧೆಯರ ನೊಂದಾವಣೆಯು ಪ್ರಾರಂಭಗೊಂಡಿತು.

ಬಳಿಕ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಹಾಗೂ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಂದ ಭಜನೆ ಜರುಗಿತು. ನಂತರ ತೊಟ್ಟಲ ಸಂಭ್ರಮದ ಮಗುವಿನ ಅಮ್ಮನಿಗೆ ಆರತಿ ಬೆಳಗಿ ಬಾಗಿನ ನೀಡಿ, ಆರು ತಿಂಗಳ ಮಗುವನ್ನು ತೊಟ್ಟಿಲಲ್ಲಿ ತೂಗಿ, ಬೆಣ್ಣೆ ತಿನ್ನಿಸಿ, ಮಾತೆಯರು ಜೋಗುಲ ಹಾಡಿ ಸಂಭ್ರಮಿಸಿದರು.

ನಂತರ ಶ್ರೀಕೃಷ್ಣ, ರಾಧೆಯ ವೇಷಧಾರಿ ಪುಟಾಣಿಗಳ ಶೋಭಾಯಾತ್ರೆಯ ಪ್ರಾರಂಭಗೊಂಡಿತು. ಸುಮಾರು 1300 ಕ್ಕೂ ಮಿಕ್ಕಿ ಶ್ರೀ ಕೃಷ್ಣ ಹಾಗೂ ರಾಧೆಯರ ವೇಷ ಧರಿಸಿದ ಪುಟಾಣಿಗಳು ಶೋಭಾಯಾತ್ರೆಯಲ್ಲಿ ಹೆಜ್ಜೆಹಾಕಿದರು. ಕಾರ್ಯಕ್ರಮವನ್ನು ಶಾಸಕ ಸಂಜೀವ ಮಠಂದೂರು ದೀಪ ಬೆಳಗಿಸಿ ಉದ್ಘಾಟಿಸಿದರು. ಗಣೇಶೋತ್ಸವ ಸಮಿತಿ ಅಧ್ಯಕ್ಷ ಶಶಾಂಕ ಕೊಟೇಚಾ ತೆಂಗಿನಕಾಯಿ ಒಡೆದು ಶೋಭಾಯಾತ್ರೆ ಉದ್ಘಾಟಿಸಿದರು. ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆ, ವಿವೇಕಾನಂದ ವಿದ್ಯಾ ವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಧ್ವಜ ಹಸ್ತಾಂತರಿಸಿ ಶೋಭಾಯಾತ್ರೆಗೆ ಚಾಲನೆ ನೀಡಿದರು. ನಗರ ಸಭಾ ಉಪಾಧ್ಯಕ್ಷೆ ವಿದ್ಯಾ ಗೌರಿ, ಡಾ.ಕಮಲ ಪ್ರಭಾಕರ ಭಟ್ ಕಲ್ಲಡ್ಕ ಸೇರಿದಂತೆ ನೂರಾರು ಮಂದಿ ಉಪಸ್ಥಿತರಿದ್ದರು.

Related Posts

Leave a Reply

Your email address will not be published.