ದೇಶ ವಿಭಜನೆ ಮಾಡಿದ ಪಾಪದ ‘ಪ್ರಾಯಶ್ಚಿತ್ತ ಯಾತ್ರೆ’ ವಿನಹ ಭಾರತವನ್ನು ಜೋಡಿಸುವ ಯಾತ್ರೆಯಲ್ಲ: ಕುಯಿಲಾಡಿ ಸುರೇಶ್ ನಾಯಕ್

ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನದಿಂದ ನಮ್ಮ ಭಾರತಕ್ಕೆ ದೊರೆತ ಸ್ವಾತಂತ್ರ್ಯವನ್ನು ಕಾಂಗ್ರೆಸ್ ಪಕ್ಷ ತನ್ನದೇ ಸಾಧನೆ ಎಂಬಂತೆ ಬಿಂಬಿಸುವ ಪ್ರಯತ್ನದ ಮೂಲಕ ಸ್ವಾತಂತ್ರ್ಯ ಯೋಧರನ್ನು ಅವಮಾನಿಸುವುದು ಹಾಗೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಅಪಪ್ರಚಾರ ಮಾಡುವುದು ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆಯ ಪ್ರಮುಖ ಉದ್ದೇಶವಾಗಿದೆ. ಕಾಂಗ್ರೆಸ್ ಅನೇಕ ಹಿರಿಯ ಮುಖಂಡರು ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯವರ ವೈಫಲ್ಯದ ಗುಣಗಾನ ಮಾಡಿ ಕಾಂಗ್ರೆಸ್ನ್ನು ಅವ್ಯಾಹತವಾಗಿ ತೊರೆಯುತ್ತಿರುವ ಸಂದಿಗ್ಧ ಸನ್ನಿವೇಶದಲ್ಲಿ ಗೊಂದದ ಗೂಡಾಗಿರುವ ಕಾಂಗ್ರೆಸ್ ಇದೀಗ ನಡೆಸುತ್ತಿರುವುದು ದೇಶ ವಿಭಜನೆ ಮಾಡಿದ ಪಾಪದ ಪ್ರಾಯಶ್ಚಿತ್ತ ಯಾತ್ರೆ ವಿನಹ ಭಾರತವನ್ನು ಜೋಡಿಸುವ ಯಾತ್ರೆಯಲ್ಲ. ಕಾಂಗ್ರೆಸ್ ಪ್ರಾರಂಭಿಸಿದ ಭಾರತ್ ಜೋಡೋ ಯಾತ್ರೆಯಿಂದಾಗಿ ದೇಶಕ್ಕೆ ಯಾವುದೇ ಪ್ರಯೋಜನ ಇಲ್ಲದೇ ಇದ್ದರೂ, ಕಾಂಗ್ರೆಸ್ ಮುಖಂಡರ ಕಾಂಗ್ರೆಸ್ ಚೋಡೋ ಅಭಿಯಾನಕ್ಕೆ ಹೆಚ್ಚಿನ ವೇಗ ಸಿಗಲಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.

ಕೇವಲ ಒಂದೇ ಕುಟುಂಬದ ಹಿತವನ್ನು ಬಯಸಿ, ವಿಭಜನೆ ರಾಜಕೀಯದಲ್ಲೇ ತೊಡಗಿಸಿಕೊಂಡಿದ್ದು ಕಾಂಗ್ರೆಸ್ ಇತಿಹಾಸವಾಗಿದೆ. ನೆಹರೂ ಅಧಿಕಾರದ ಹಪಾಹಪಿಯ ಫಲವಾಗಿ ೧೯೪೭ರಲ್ಲಿ ಅಖಂಡ ಭಾರತ ವಿಭಜನೆಗೊಂಡಿತು. ಅಂದು ನಡೆದ ಅಸಂಖ್ಯಾತ ಹಿಂದೂಗಳ ಹಿಂಸಾಚಾರ, ಅತ್ಯಾಚಾರ, ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನದಿಂದ ಕಾಶ್ಮೀರಿ ಪಂಡಿತರ ನರಮೇಧ, ಸ್ವಾತಂತ್ರ್ಯದ ನಂತರ ಸುದೀರ್ಘ ಅವಧಿ ಕಾಂಗ್ರೆಸ್ ದುರಾಡಳಿತ, ಬ್ರಹ್ಮಾಂಡ ಬ್ರಷ್ಟಾಚಾರ, ಒಂದೇ ವರ್ಗದ ಓಲೈಕೆ, ಇವೆಲ್ಲವನ್ನೂ ಕಾಂಗ್ರೆಸ್ ವರಿಷ್ಠರು ಮತ್ತು ಕಾಂಗ್ರೆಸ್ ಮುಖಂಡರು ಮೆಲುಕು ಹಾಕಲಿದು ಸಕಾಲವಾಗಿದೆ.

ಇಂದು ಭಾರತವು ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೆ ಸಂಘಟಿತವಾಗಿ ಸುಭದ್ರವಾಗಿ ಸಮೃದ್ಧವಾಗಿದೆ. ಆದರೆ ಕಾಂಗ್ರೆಸ್ ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆ ಯಾವ ಪುರುಷಾರ್ಥ ಸಾಧನೆಗಾಗಿ ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ದೇಶದೆಲ್ಲೆಡೆ ಬಹುತೇಕ ರಾಜ್ಯಗಳಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವವನ್ನು ಕಳೆದುಕೊಂಡು ಇತಿಹಾಸದ ಪುಟಗಳನ್ನು ಸೇರಿಯಾಗಿದೆ. ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ನ್ಯಾಷನಲ್ ಹೆರಾಲ್ಡ್ ಹಗರಣ ಪ್ರಕರಣದಲ್ಲಿ .ಡಿ. ವಿಚಾರಣೆಯನ್ನು ಎದುರಿಸಿರುವುದು ಜಗಜ್ಜಾಹೀರಾಗಿದೆ. ಜನರು ಸಾಮಾಜಿಕ ಜಾಲಾತಾಣಗಳ ಮೂಲಕ ಬೆರಳ ತುದಿಯಲ್ಲೇ ಕಾಂಗ್ರೆಸ್ ಹಗರಣಗಳ ಸರಮಾಲೆಯನ್ನು ಅರಿತುಕೊಂಡಿದ್ದಾರೆ. ವಿಶ್ವ ನಾಯಕರೆನಿಸಿದ ಪ್ರಧಾನಿ ನರೇಂದ್ರ ಮೋದಿಯವರ ಶ್ರೇಷ್ಠ ನಾಯಕತ್ವದಲ್ಲಿ ನಮ್ಮ ದೇಶವು ಸುಭದ್ರವಾಗಿದೆ. ಇವೆಲ್ಲವನ್ನೂ ಅರಗಿಸಿಕೊಳ್ಳಲಾಗದ ಭ್ರಷ್ಟ ಕಾಂಗ್ರೆಸ್ ದೇಶವಾಸಿಗಳ ಗಮನವನ್ನು ಬೇರೆ ಕಡೆಗೆ ಸೆಳೆಯಲು ನಿಷ್ಟ್ರಯೋಜಕ ಭಾರತ್ ಜೋಡೋ ಯಾತ್ರೆ ಎಂಬ ಹೊಸ ನಾಟಕವನ್ನಾಡುತ್ತಿರುವುದು ಜನಜನಿತವಾಗಿದೆ.

ರಾಷ್ಟ್ರ ಧ್ವಜವನ್ನು ಮರೆತ ಕಾಂಗ್ರೆಸಿಗರಿಗೆ ಪ್ರಧಾನಿ ಮೋದಿಯವರು ಹರ್ ಘರ್ ತಿರಂಗಾ ಎಂಬ ಕರೆ ನೀಡಿದಾಗ ರಾಷ್ಟ್ರ ಧ್ವಜದ ನೆನಪಾಗುತ್ತದೆ. ದೇಶದೆಲ್ಲೆಡೆ ಅಶಾಂತಿಯ ವಾತಾವರಣವನ್ನು ಸೃಷ್ಟಿಸಿ ದೇಶ ವಿರೋಧಿ ಕೃತ್ಯಗಳಿಗೆ ಬೆಂಬಲಿಸುವ ಕಾಂಗ್ರೆಸಿಗರು ಚುನಾವಣೆ ಸಮೀಪಿಸುತ್ತಿದ್ದಂತೆ ದೇಶವನ್ನು ಜೋಡಿಸುವ ಕನಸು ಕಾಣುತ್ತಾರೆ. ಆದರೆ ದೇಶವಾಸಿಗಳು ಪ್ರಬುದ್ಧರಾಗಿದ್ದು, ಕಾಂಗ್ರೆಸ್ ಸಮಯಸಾಧಕ ಕೃತ್ಯಗಳನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅಖಂಡ ಭಾರತವನ್ನು ತುಂಡರಿಸಿದ ಕಾಂಗ್ರೆಸ್ಗೆ ಭಾರತವನ್ನು ಜೋಡಿಸುವ ಬಗ್ಗೆ ಸೊಲ್ಲೆತ್ತುವ ಕಿಂಚಿತ್ತೂ ನೈತಿಕತೆಯೂ ಇಲ್ಲ. ಸಂಘಟಿತ ಭಾರತವನ್ನು ಮರು ಜೋಡಿಸಲು ಸಾಧ್ಯವೂ ಇಲ್ಲ ಎಂದು ಕುಯಿಲಾಡಿ ಸುರೇಶ್ ನಾಯಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Posts

Leave a Reply

Your email address will not be published.