ಉಡುಪಿ : ಉದ್ಯಾವರದಲ್ಲಿ ಈಚರ್ ಲಾರಿ, ಬೈಕ್ ನಡುವೆ ಢಿಕ್ಕಿ – ಬೈಕ್ ಸವಾರ ಮೃತ್ಯು
ಉದ್ಯಾವರ ಗುಡ್ಡೆ ಅಂಗಡಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ನಸುಕಿನ ವೇಳೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಈಚರ್ ಲಾರಿ ಹೊತ್ತಿ ಉರಿದಿದ್ದು ಬೈಕ್ ಸವಾರ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಬೈಕ್ ಸವಾರ ಕೊರಂಗ್ರಪಾಡಿ ನಿವಾಸಿ ಅವಿನಾಶ್ ಆಚಾರ್ಯ( 19 ) ಎಂದು ಗುರುತಿಸಲಾಗಿದೆ. ಗುಜರಾತ್ ಕಡೆಯಿಂದ ಕೇರಳ ಕಡೆಗೆ ಬರುತ್ತಿದ್ದ ಈಚರ್ ಲಾರಿ ಎದುರಿನಲ್ಲಿ ಹೋಗುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಸವಾರ ಅವಿನಾಶ್ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ.
ಇದೇ ವೇಳೆ ಈ ಲಾರಿಯು ಬೈಕನ್ನು ರಸ್ತೆಯಲ್ಲಿ ಎಳೆದುಕೊಂಡು ಹೋದ ಪರಿಣಾಮ ಬೆಂಕಿ ಕಾಣಿಸಿಕೊಂಡಿತ್ತು. ಈ ಬೆಂಕಿ ಲಾರಿಗೆ ತಗಲಿದ್ದು ಬಳಿಕ ಬೆಂಕಿಯ ಕೆನ್ನಾಲಿಗೆ ಇಡೀ ಲಾರಿ ಮತ್ತು ದ್ವಿಚಕ್ರ ವಾಹನವನ್ನು ಸುಟ್ಟು ಭಸ್ಮ ಮಾಡಿದೆ. ಸ್ಥಳಕ್ಕೆ ಉಡುಪಿ ಸಂಚಾರ ಪೋಲೀಸರು ಆಗಮಿಸಿ ಪರಿಶೀಲ ನಡೆಸಿದ್ದಾರೆ.