ಉಳ್ಳಾಲದಲ್ಲಿ ಕಾರು ಚಾಲಕನ ಅವಾಂತರ: ಸರಣಿ ಅಪಘಾತ:ರಿಕ್ಷಾ ಚಾಲಕಗೆ ಗಾಯ
ಉಳ್ಳಾಲ: ಕಾರು ಚಾಲಕನ ಅವಾಂತರದಿಂದ ರಿಕ್ಷಾ ಸಹಿತ ಕಾರೊಂದು ಜಖಂಗೊಂಡು ಸರಣಿ ಅಪಘಾತ ನಡೆದು, ರಿಕ್ಷಾ ಚಾಲಕ ಗಾಯಗೊಂಡಿರುವ ಘಟನೆ ಕುತ್ತಾರು ಮದನಿನಗರ ಸಮೀಪ ತಡರಾತ್ರಿ ಸಂಭವಿಸಿದೆ.
ದೇರಳಕಟ್ಟೆ ಕಡೆಯಿಂದ ಮಂಗಳೂರು ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಹೋಂಡ ಸಿವಿಕ್ ಕಾರೊಂದು ಧಾವಿಸಿ ಎದುರಿನಿಂದ ಬರುತ್ತಿದ್ದ ರಿಕ್ಷಾಗೆ ಢಿಕ್ಕಿ ಹೊಡೆದು ಬಳಿಕ ವೈದ್ಯ ವಿದ್ಯಾರ್ಥಿಗಳಿದ್ದ ಕಾರಿಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ರಿಕ್ಷಾ ಚಾಲಕ ಬದ್ಯಾರು ನಿವಾಸಿ ನೌಷಾದ್ (30) ಗಂಭೀರ ಗಾಯಗೊಂಡು, ರಿಕ್ಷಾ ಸಂಪೂರ್ಣ ನುಜ್ಜುಗುಜ್ಜಾಗಿದೆ. ವೈದ್ಯ ವಿದ್ಯಾರ್ಥಿನಿಯರಿದ್ದ ಕಾರು ಕೂಡಾ ಪೂರ್ಣ ಜಖಂಗೊಂಡು ಹಾನಿಯಾಗಿದೆ. ಆದರೆ ವಿದ್ಯಾರ್ಥಿಗಳು ಪವಾಡಸದೃಶ ಪಾರಾಗಿದ್ದಾರೆ. ಘಟನೆಗೆ ಕಾರಣವಾದ ಕಾರು ಚಾಲಕ ಕಾರನ್ನು ಲಾಕ್ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ. ಕುಡಿತದ ಮಂಪರಿನಲ್ಲಿದ್ದ ಕಾರು ಚಾಲಕನ ಆವಾಂತರದಿಂದ ಘಟನೆ ನಡೆದಿದೆ ಅನ್ನುವ ಆರೋಪ ಸ್ಥಳೀಯರು ಮಾಡಿದ್ದಾರೆ. ಕಾರನ್ನು ನಾಗುರಿ ಸಂಚಾರಿ ಠಾಣಾ ಪೊಲೀಸರು ವಶ ಪಡೆದುಕೊಂಡಿದ್ದಾರೆ.
ಹೊಂಡದಿಂದ ಕೂಡಿರುವ ರಸ್ತೆ ತೊಕ್ಕೊಟ್ಟು ದೇರಳಕಟ್ಟೆ ರಸ್ತೆ ಸಂಪೂರ್ಣ ಹೊಂಡದಿಂದ ಕೂಡಿದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲೂ ರಸ್ತೆ ಹೊಂಡದ ಕುರಿತು ಟ್ರೋಲ್ ಗಳು ವ್ಯಕ್ತವಾಗಿತ್ತು. ಅಪಘಾತ ನಡೆದ ಸ್ಥಳದಲ್ಲೂ ಹಲವು ಹೊಂಡಗಳೂ ಇವೆ. ಇದೂ ಅಪಘಾತಕ್ಕೆ ಕಾರಣವಾಗಿದೆ ಅನ್ನುವ ಆರೋಪ ಕೇಳಿಬಂದಿದೆ.