ಉಳ್ಳಾಲ ಮತ್ತು ಸೋಮೇಶ್ವರ ಸಮುದ್ರದಲ್ಲಿ ಹೆಚ್ಚಾದ ಅಬ್ಬರ: ಅಪಾರ ಹಾನಿ
ಉಳ್ಳಾಲ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಗಾಳಿ ಮಳೆಗೆ ಉಳ್ಳಾಲ ಮತ್ತು ಸೋಮೇಶ್ವರದಲ್ಲಿ ಸಮುದ್ರದ ಅಬ್ಬರ ಹೆಚ್ಚಾಗಿದ್ದು, ಸೋಮೇಶ್ವರ ಉಚ್ಚಿಲ ಬಟ್ಟಪ್ಪಾಡಿಯಲ್ಲಿ ಒಳರಸ್ತೆ ಸಮುದ್ರದ ಅಲೆಗಳ ಪಾಲಾದರೆ, ಉಳ್ಳಾಲ ಮತ್ತು ಸುತ್ತಮುತ್ತಲಿ ವ್ಯಾಪ್ತಿಯಲ್ಲಿ ಕಂಪೌಂಡ್ ಕುಸಿತ ಸೇರಿದಂತೆ ಸಣ್ಣಪುಟ್ಟ ಅವಘಡಗಳು ಸಂಭವಿಸಿದೆ.
ಸೋಮೇಶ್ವರ ಬೀಚ್ ರಸ್ತೆ ಬಟ್ಟಪ್ಪಾಡಿ ಬಳಿ ಹಾನಿಗೀಡಾಗಿದ್ದು ಸಂಚಾರ ಅಸ್ತವ್ಯಸ್ತವಾಗಿದೆ. ಉಚ್ಚಿಲದಲ್ಲಿ ತಗ್ಗು ಪ್ರದೇಶ ಜಲಾವೃತಗೊಂಡಿದ್ದು ಸ್ಥಳಕ್ಕೆ ಪುರಸಭಾ ಮುಖ್ಯಾಧಿಕಾರಿ ವಾಣಿ ಆಳ್ವ ಭೇಟಿ ನೀಡಿದ್ದಾರೆ. ಉಳಿದಂತೆ ಉಳ್ಳಾಲ ನಗರಸಭಾ ವ್ಯಾಪ್ತಿಯ ಉಳ್ಳಾಲದಲ್ಲಿ ಸಮುದ್ರದ ಅಲೆಗಳು ಮನೆಗಳಿಗೆ ಅಪ್ಪಳಿಸುತ್ತಿದ್ದು ಯಾವುದೇ ಹಾನಿಯಾಗಲಿಲ್ಲ. ಪೆರ್ಮನ್ನೂರು ಗ್ರಾಮದ ಗಂಡಿ ಎಂಬಲ್ಲಿ ಶಾರದಾ ಅವರ ಮನೆಯ ಕಂಪೌಂಡ್ ಕುಸಿದು ಹಾನಿಯಾದರೆ ಅಂಬ್ಲಮೊಗರು ಗ್ರಾಮದ ಮದನಿನಗರ ಇವಾಸಿ ಗಣೇಶ್ ಅವರ ಮನೆಗೆ ಪಕ್ಕದ ಮನೆಯ ಕಪೌಂಡ್ ಕುಸಿದು ಹಾನಿಯಾಗಿದೆ. ಕುರ್ನಾಡು ಗ್ರಾಮದ ಮುಡಿಪು ಕಾಯರ್ಗೋಳಿ ಬಳಿ ಗುಡ್ಡೆ ಕುಸಿದು ಮುಖ್ಯ ರಸ್ತೆಗೆ ಬಿದ್ದಿದ್ದು ಅದನ್ನು ತೆರವುಗೊಳಿಸಲಾಗಿದೆ. ಕೈರಂಗಳ ಗ್ರಾಮ ಪಂಚಾಯತ್ ವ್ಯಾಪ್ತಿಯ ನಡುಪದವು ಬಳಿ ತೋಡಿಗೆ ಕಟ್ಟಿದ್ದ ಕಲ್ಲು ಕುಸಿತಗೊಂಡಿದೆ. ಉಳಿದಂತೆ ಸಣ್ಣಪುಟ್ಟ ಹಾನಿಯಾದ ಘಟನೆ ನಡೆದಿದೆ.