ಮಂಗಳೂರು : ಕಾರು ಅಪಘಾತಕ್ಕೀಡಾಗಿ ಅಡ್ಯಾರ್ ಬಾಳಿಕೆ ಮನೆ ನಿವಾಸಿ ಕೊರಗಪ್ಪ ಸಾಲ್ಯಾನ್ (65) ಎಂಬವರು ಮೃತಪಟ್ಟಿರುವ ಘಟನೆ ಅಡ್ಯಾರ್ ಸಹ್ಯಾದ್ರಿ ಕಾಲೇಜು ಮುಂಭಾಗ ಸಂಭವಿಸಿದೆ. ಅಡ್ಯಾರ್ ಗಾರ್ಡನ್ ಎದುರುಗಡೆಯ ಸಂತೋಷ್ ಹೇರ್ ಡ್ರೆಸ್ಸಸ್೯ ಎಂಬ ಸೆಲೂನಿನ ಮಾಲಕರಾಗಿದ್ದ ಇವರು ಸೈಕಲ್ ಮೂಲಕ ರಸ್ತೆ ದಾಟುವಾಗ ಬಿ.ಸಿ.ರೋಡ್ ಕಡೆಯಿಂದ ಅಮಿತ ವೇಗದಲ್ಲಿ ಬಂದ ಸ್ವಿಫ್ಟ್ ಕಾರು ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ದೂರಕ್ಕೆ ಎಸೆಯಲ್ಪಟ್ಟು, ತಲೆಗೆ ಗಂಭೀರ ರೀತಿಯಲ್ಲಿ ಗಾಯಗೊಂಡಿದ್ದರು. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.ಮೃತರು ಯುವ ವಯಸ್ಸಿನಲ್ಲಿ ಕಬ್ಬಡ್ಡಿ ಆಟಗಾರರೂ ಹಾಗೂ ತಾಲೀಮಿನಲ್ಲಿ ಸಕ್ರಿಯವಾಗಿ ತನ್ನನ್ನು ತಾನು ತೊಡಗಿಸಿಕೊಂಡಿದ್ದವರು. ಮೃತರು ಪತ್ನಿ ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಾರು ಚಾಲಕ ಬೆಳ್ತಂಗಡಿಯ ಮಹಮ್ಮದ್ ಆಶೀಕ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ

