ದ.ಕ. ಜಿಲ್ಲಾ ಕಾಂಗ್ರೆಸ್ : ನಮ್ಮ ನಡೆ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವದೆಡೆಗೆ

ದ.ಕ. ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ವತಿಯಿಂದ ನಮ್ಮ ನಡೆ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವದೆಡೆಗೆ’ ಎಂಬ ಘೋಷ ವಾಕ್ಯದೊಂದಿಗೆ ಹಮ್ಮಿಕೊಳ್ಳಲಾಗಿರುವ ಗುರು ಸಂದೇಶ ಯಾತ್ರೆಗೆ ಮಂಗಳೂರಲ್ಲಿ ಚಾಲನೆ ಸಿಕ್ಕಿತು.ವಿಧಾನ ಪರಿಷತ್ ವಿಪಕ್ಷನಾಯಕ ಬಿ.ಕೆ. ಹರಿಪ್ರಸಾದ್ ಚಾಲನೆ ನೀಡಿದರು. ಬ್ರಹ್ಮಶ್ರೀ ನಾರಾಯಣ ಗುರುಗಳ 168ನೆ ಜನ್ಮ ಜಯಂತಿ ಆಚರಣೆಯ ನಿಮಿತ್ತ ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದಿಂದ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದವರೆಗಿನ ಸಂದೇಶ ಯಾತ್ರೆಯಲ್ಲಿ ನಾರಾಯಣ ಗುರುಗಳ ಭಾವಚಿತ್ರದ ರಥಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ದೊರೆಯಿತು. ಈ ಸಂದರ್ಭ ಮಾತನಾಡಿದ ಬಿ.ಕೆ. ಹರಿಪ್ರಸಾದ್, ದಕ್ಷಿಣ ಕನ್ನಡಕ್ಕೆ ಪ್ರಥಮ ಬಾರಿಗೆ ಮಂಗಳೂರು ರೈಲ್ವೇ ನಿಲ್ದಾಣಕ್ಕೆ ಆಗಮಿಸಿದ್ದ ನಾರಾಯಣ ಗುರುಗಳು ಶೋಷಿತ ವರ್ಗವನ್ನು ಮೇಲೆತ್ತುವ ಸಂದೇಶವನ್ನು ಸಾರಿದ್ದರು ಎಂದರು.

ಕೇರಳದಲ್ಲಿ ಶಾಂತಿಯುತ ಕ್ರಾಂತಿ ಮೂಲಕ ಶೋಷಿತ ವರ್ಗಕ್ಕೆ ಧ್ವನಿಯಾದ ನಾರಾಯಣ ಗುರುಗಳ ತತ್ವ ಸಂದೇಶಗಳು ಕರ್ನಾಟಕದ ಕರಾವಳಿ ಜಿಲ್ಲೆಗಳು, ದೇಶ ಮತ್ತು ವಿದೇಶಗಳಲ್ಲಿಯೂ ಪಸರಿಸಿದೆ. ಶೋಷಿತ ವರ್ಗವನ್ನು ಮೇಲೆತ್ತುವ ಅವರ ರಕ್ತರಹಿತ ಕ್ರಾಂತಿ ಇಂದಿನ ಸಮಾಜಕ್ಕೆ ಮಾದರಿಯಾಗಿದೆ ಅಂತಾ ಹೇಳಿದರು. ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಜನರು ಹಾಗೂ ಧರ್ಮಗಳ ನಡುವೆ ಅಪನಂಬಿಕೆ, ದ್ವೇಷವನ್ನು ಹುಟ್ಟಿ ಹಾಕಲಾಗುತ್ತಿರುವ ಇಂದಿನ ದಿನಗಳಲ್ಲಿ ಸಮಾನತೆಯ ಸಂದೇಶ ಸಾರಿ, ಅಸ್ಪಶ್ಯತೆಯನ್ನು ತೊಡೆದು ಹಾಕಿ, ಒಂದೇ ಜಾತಿ ಒಂದೇ ಮತ ಒಂದೇ ದೇವರು ಎಂದು ಸಾರಿದ ಬ್ರಹ್ಮಶ್ರೀ ನಾರಾಯಣಗುರುಗಳ ಸಂದೇಶ ಪ್ರಸ್ತುತವಾಗಿದೆ ಎಂದು ಅವರು ಹೇಳಿದರು.

ಯಾತ್ರೆಯಲ್ಲಿ ಮಾಜಿ ಸಚಿವರಾದ ಅಭಯಚಂದ್ರಜೈನ್, ವಿಧಾನ ಪರಿಷತ್ನ ಮಾಜಿ ಸದಸ್ಯ ಐವನ್ ಡಿಸೋಜಾ, ಮಾಜಿ ಶಾಸಕರಾದ ಜೆ.ಆರ್. ಲೋಬೋ, ಮೊಯ್ದೀನ್ ಬಾವಾ, ಜಿಲ್ಲಾ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರಾದ ವಿಶ್ವಾಸ್ ಕುಮಾರ್ ದಾಸ್,ಮುಖಂಡರಾದ ಪಿ.ವಿ. ಮೋಹನ್, ಪ್ರಕಾಶ್ ಸಾಲ್ಯಾನ್, ಸಲೀಂ, ಶಾಲೆಟ್ ಪಿಂಟೋ, ಸಾಹುಲ್ ಹಮೀದ್, ಅಬ್ಬಾಸ್ ಅಲಿ, ಶಶಿಧರ ಹೆಗ್ಡೆ, ಭಾಸ್ಕರ ಕೆ., ಅಬ್ದುಲ್ ರವೂಫ್, ಅಬ್ದುಲ್ ಲತೀಫ್, ಸದಾಶಿವ ಉಳ್ಳಾಲ್, ಮುಹಮ್ಮದ್ ಮೋನು, ಲುಕ್ಮಾನ್ ಬಂಟ್ವಾಳ, ಸುರೇಶ್ ಬಳ್ಳಾಲ್, ಟಿ.ಕೆ. ಸುಧೀರ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು