ದ.ಕ. ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರದಲ್ಲೂ ಜೆಡಿಎಸ್ ಸ್ಪರ್ಧೆ

ಮುಂದಿರುವ ವಿಧಾನ ಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನ ಸಭಾ ಕ್ಷೇತ್ರದಲ್ಲೂ ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದೆ. ಈಗಾಗಲೇ ಆಕಾಂಕ್ಷಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದ್ದು, ಶೀಘ್ರದಲ್ಲಿಯೇ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ ಎಂದು ಜಾತ್ಯಾತೀತ ಜನತಾ ದಳದ ದಕ ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ ಹೇಳಿದರು.
ಅವರು ಮಂಗಳೂರಿನ ಪ್ರೆಸ್ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಎಲ್ಲ ವಿಧಾನ ಸಭಾ ಕ್ಷೇತ್ರದಲ್ಲಿ ಪೂರ್ವಭಾವಿ ಸಭೆಗಳನ್ನು ನಡೆಸಿಕೊಂಡು ಅಲ್ಲಿಂದ ಬಂದ ಎರಡು ಮೂರು ಹೆಸರುಗಳಲ್ಲಿ ಒಂದನ್ನು ಆಯ್ಕೆ ಮಾಡಿ ಹೈಕಮಾಂಡ್ಗೆ ಸಲ್ಲಿಸಲಾಗುತ್ತದೆ. ಈ ಬಳಿಕ ರಾಜ್ಯಾಧ್ಯಕ್ಷರು ಈ ಪಟ್ಟಿಯನ್ನು ಬಿಡುಗಡೆ ಮಾಡುತ್ತಾರೆ. ಫೆಬ್ರವರಿ ಮೊದಲ ವಾರದಲ್ಲಿ ಮಾಜಿ ಸಿಎಂ ಕುಮಾರ ಸ್ವಾಮಿ ಅವರು ಪಂಚರತ್ನ ಯಾತ್ರೆಯ ಮೂಲಕ ದಕದಲ್ಲಿ ಸಭೆ ನಡೆಸುವ ಕುರಿತು ನಿರ್ಧಾರವಾಗಿದೆ ಎಂದರು.
ಈ ಸಂದರ್ಭ ಜಾತ್ಯಾತೀತ ಜನತಾ ದಳದ ದಕದ ನೂತನ ಪಕ್ಷದ ಪದಾಧಿಕಾರಿಗಳ ಹಾಗೂ ಕಾರ್ಯಕಾರಿ ಸಮಿತಿಯ ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು. ಅಧ್ಯಕ್ಷರಾಗಿ ಜಾಕೆ ಮಾಧವ ಗೌಡ, ಜಿಲ್ಲಾ ವಕ್ತಾರರಾಗಿ ಸುಶೀಲ್ ನೊರೊನ್ಹಾ, ಕಾರ್ಯಾಧ್ಯಕ್ಷರಾಗಿ ನಜೀರ್ ಉಳ್ಳಾಲ, ವಸಂತ್ ಪೂಜಾರಿ, ಇಕ್ಬಾಲ್ ಅಹ್ಮದ್ ಮೂಲ್ಕಿ, ಹಿರಿಯ ಉಪಾಧ್ಯಕ್ಷರಾಗಿ ಪ್ರವೀಣ್ ಚಂದ್ರ ಜೈನ್, ಉಪಾಧ್ಯಕ್ಷರಾಗಿ ಅಜೀಜ್ ಕುದ್ರೋಳಿ, ಪ್ರಧಾನ ಕಾರ್ಯದರ್ಶಿಯಾಗಿ ಕನಕದಾಸ, ಧನರಾಜ್, ಕಾರ್ಯದರ್ಶಿ ಲತೀಫ್ ವಳಚ್ಚಿಲ್, ಸಂಘಟನಾ ಕಾರ್ಯದರ್ಶಿ ಕಿಶೋರ್ ಅರಂಪಾಡಿ, ಕೋಶಾಧಿಕಾರಿ ಗಂಗಾಧರ್ ಉಳ್ಳಾಲ, ರಾಜ್ಯ ಸಮಿತಿಗೆ ಶ್ರೇಯಮ್ಸ್ ಕುಮಾರ್, ದಯಾಕರ್ ಆಳ್ವ ಹಾಗೂ 26 ಮಂದಿಯ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರ ಪಟ್ಟಿಯನ್ನು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭ ಪಕ್ಷದ ನಾಯಕರಾದ ರಾಮ್ ಗಣೇಶ್, ನಜೀರ್ ಉಳ್ಳಾಲ, ಇಕ್ಬಾಲ್ ಮೂಲ್ಕಿ, ಸುಶೀಲ್ ನೊರೊನ್ಹಾ ಉಪಸ್ಥಿತರಿದ್ದರು.
