ಯುವ ಜನೋತ್ಸವದಲ್ಲಿ “ನೋ ಯುವರ್ ಆರ್ಮಿ” ವಿಶೇಷ ಮಳಿಗೆ

ಧಾರವಾಡ, ಜ, 13; ಹುಬ್ಬಳ್ಳಿ-ಧಾರವಾಡದಲ್ಲಿ ನಡೆಯುತ್ತಿರುವ 26 ನೇ ರಾಷ್ಟ್ರೀಯ ಯುವ ಜನೋತ್ಸವದಲ್ಲಿ “ನಿಮ್ಮ ಸೇನೆ ಬಗ್ಗೆ ತಿಳಿದುಕೊಳ್ಳಿ” [ನೋ ಯುವರ್ ಆರ್ಮಿ] ಎಂಬ ವಿಶೇಷ ಮಳಿಗೆಗಳು ಗಮನ ಸೆಳೆಯಲಿವೆ. ಯುವ ಜನೋತ್ಸವದ ಅಂಗವಾಗಿ ಧಾರವಾಡದ ಕೆಸಿಡಿ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ವಸ್ತು ಪ್ರದರ್ಶನದಲ್ಲಿ ‘ಭಾರತೀಯ ಸೈನ್ಯದ ಕುರಿತು ಒಂದು ಸ್ಟಾಲ್ ನಿರ್ಮಿಸಲಾಗಿದೆ’ ರಾಷ್ಟ್ರದ ಭದ್ರತೆ ಮತ್ತು ಸುರಕ್ಷತೆಗಾಗಿ ಈ ಪಡೆಗಳು ಬಳಸುವ ಅತ್ಯುನ್ನತ ಶಸ್ತ್ರಾಸ್ತ್ರ ಗಳು ಕಾಣ ಸಿಗಲಿವೆ. ದೇಶದ ಸಮರ್ಥ ಪಡೆಗಳ ಬಗ್ಗೆ ತಿಳಿದುಕೊಳ್ಳಲು, ರಾಷ್ಟ್ರದ ಸಾರ್ವಭೌಮತೆಯ ಬಗ್ಗೆ ಪ್ರತಿಯೊಬ್ಬರಲ್ಲೂ ಹೆಮ್ಮೆ ಮೂಡಿಸುವ ಉದ್ದೇಶದಿಂದ ಈ ಮಳಿಗೆಗಳನ್ನು ತೆರೆಯಲಾಗಿದೆ.

ಮಳಿಗೆಗಳನ್ನು ಎರಡು ಭಾಗವಾಗಿ ವಿಂಗಡಿಸಲಾಗಿದ್ದು, ಸೇನೆಯಲ್ಲಿ ಬಳಸುವ ಆಯುಧಗಳ ಪ್ರದರ್ಶನ ಮತ್ತು ಅಗ್ನಿ ವೀರ ಸ್ಕೀಮ್ ಪ್ರವೇಶದ ಕುರಿತು ಮಾಹಿತಿ ನೀಡಲಾಗುತ್ತದೆ. ಆಯುಧಗಳ ಪ್ರದರ್ಶನ ವಿಭಾಗದಲ್ಲಿ, ಭಾರತೀಯ ಸೇನೆಯಲ್ಲಿ ಶಕ್ತಿಯ ಧ್ಯೋತಕವಾಗಿರುವ ಅತ್ಯಾಧುನಿಕ ಆಯುಧಗಳನ್ನು ಇರಿಸಲಾಗಿದೆ. ವಿಶೇಷವಾಗಿ 7.62 ಎಂ.ಎಂ. ಸಿಂಗಲ್ ಅಸಾಲ್ಟ್ ರೈಫಲ್, 7.62ಎಂ.ಎಂ. ಎಲ್,ಎಮ್,ಜಿ, ಎಕೆ-47, ಸ್ನೈಪರ್ ಡಿಎಸ್ಆರ್, ಎಮ್.ಎಮ್.ಜಿ, ರಾಕೆಟ್ ಲಾಂಚರ್ ಗಳನ್ನು ಮತ್ತದರ ವೈಶಿಷ್ಟ್ಯಗಳನ್ನು ಕಣ್ಣಾರೆ ನೋಡಲು, ತಿಳಿದುಕೊಳ್ಳಲು ಅವಕಾಶವಿದೆ. ಸೇನಾ ಪಡೆಗಳು ರಾತ್ರಿ ಮತ್ತು ಹಗಲು ಬಳಸುವ ಕಣ್ಗಾವಲು ಉಪಕರಣಗಳನ್ನು ಪ್ರದರ್ಶಿಸಲಿದ್ದಾರೆ. ದೇಶ ರಕ್ಷಣೆಯಲ್ಲಿ ಕಣ್ಗಾವಲು ವ್ಯವಸ್ಥೆ ಅತ್ಯಂತ ಮಹತ್ವ ಪಡೆದಿದ್ದು, ಈ ವಲಯದಲ್ಲಿನ ನಾವೀನ್ಯತೆಗಳ ಬಗ್ಗೆ ಅವರು ಮಾಹಿತಿ ನೀಡಲಿದ್ದಾರೆ.

ಸೇನಾ ಪಡೆಗಳಿಗೆ ಸೇರ್ಪಡೆಯಾಗಲು ಅಗ್ನಿವೀರ್ ಅತ್ಯಂತ ಮಹತ್ವದ ಯೋಜನೆಯಾಗಿದ್ದು, ಇದರ ರೂಪು ರೇಷೆಗಳ ಕುರಿತು ಈ ಮಳಿಗೆಯಲ್ಲಿ ಸಮಗ್ರ ವಿವರಗಳಿವೆ. “ಅಗ್ನಿ ವೀರ ಎಂಟ್ರಿ ಸ್ಕೀಮ್” ಯೋಜನೆಯಡಿ ಸೇನೆಗೆ ಸೇರ್ಪಡೆಯಾಗುವ ಹಂತಗಳ ಬಗ್ಗೆ ಮಾಹಿತಿ ನೀಡಲಾಗುವುದು. ಸೇನಾ ಪಡೆಗಳಿಗೆ ಯುವಕರ ಅವಶ್ಯಕತೆ ಅತ್ಯಂತ ಅಗತ್ಯವಾಗಿದ್ದು, ಈಗಿನ ಸಂದರ್ಭದಲ್ಲಿ ಸೇನೆಯಲ್ಲಿ ಮಧ್ಯವಯಸ್ಕರ ಸಂಖ್ಯೆ ಹೆಚ್ಚಿದೆ. ಯುವ ಶಕ್ತಿ, ಯುವ ರಕ್ತವನ್ನು ಸೇನಾ ಪಡೆಗಳಿಗೆ ಸೇರಿಕೊಳ್ಳುವುದನ್ನು ಪ್ರೋತ್ಸಾಹಿಸಲು “ಅಗ್ನಿ ವೀರ ಎಂಟ್ರಿ ಸ್ಕೀಮ್” ರಹದಾರಿಯಾಗಿದೆ. ಅಗ್ನಿ ವೀರ ಕುರಿತಂತೆ ಅಲ್ಲಲ್ಲಿ ಹರಡಿರುವ ತಪ್ಪು ಗ್ರಹಿಕೆ ತೊಡೆದು ಹಾಕುವ ಉದ್ದೇಶದಿಂದ ಈ ಮಳಿಗೆ ತೆರೆಯಲಾಗಿದೆ. 18-21 ವರ್ಷದ ಆಸಕ್ತ ಯುವಕರಿಗಾಗಿಯೇ ಮಳಿಗೆ ಇರುವುದು ವಿಶೇಷವಾಗಿದೆ. ನಾಲ್ಕು ವರ್ಷಗಳ ಸೇವೆಯ ನಂತರ ವಾಪಸ್ ಆಗುವ ಯುವಕರಿಗೆ ಇರುವ ಉದ್ಯೋಗಾವಕಾಶಗಳು, ಅಗ್ನಿ ವೀರ ಯೋಜನೆಯಿಂದ ದೇಶ ಮತ್ತು ವ್ಯಕ್ತಿಗತವಾಗಿ ಆಗುವ ಒಟ್ಟಾರೆ ಲಾಭಗಳ ಬಗ್ಗೆಯೂ ಮಾಹಿತಿ ಲಭ್ಯವಿದೆ.

Related Posts

Leave a Reply

Your email address will not be published.