ಮಂಗಳೂರಿನಿಂದ ಬೆಂಗಳೂರಿಗೆ ಭಾವೈಕ್ಯತಾ ಜಾಥ

ಮೂಡುಬಿದಿರೆ: ಬಿ.ಜೆ.ಪಿ ಶಾಸಕರು, ಸಚಿವರುಗಳಿಗೆ ಈ ದೇಶದ, ರಾಜ್ಯದ, ಜಿಲ್ಲೆಯ ಮೂಲಭೂತ ಸಮಸ್ಯೆಗಳಾದ ಬೆಲೆ ಏರಿಕೆಯನ್ನು ತಡೆಯಲಾಗುತ್ತಿಲ್ಲ, ಕೋಟ್ಯಾಂತರ ರೂಪಾಯಿ ಕಾಮಗಾರಿ, ಭ್ರಷ್ಟಚಾರಗಳನ್ನು ಮಾಡುವ ಮೂಲಕ ಜನರ ಸಮಸ್ಯೆಯನ್ನು ಬಗೆಹರಿಸಲಾಗದೇ ಜನರ ನಡುವೆ ಭಾವನಾತ್ಮಕ ವಿಷಯಗಳಾದ ಲವ್ ಜಿಹಾದ್, ಗೋಹತ್ಯೆಯಂತಹ ವಿಷ ಬೀಜವನ್ನು ಬಿತ್ತುವ ಕೆಲಸ ಸ ಮಾಡುತ್ತಿದ್ದಾರೆಂದು ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ ಕಿಡಿಕಾರಿದರು.
ಅವರು ಜನಾಂದೋಲನಾಗಳ ಮಹಾಮೈತ್ರಿ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಜಾರಿಗೊಳಿಸಿದ ಭೂಸ್ವಾಧೀನ ಕಾಯ್ದೆ, ಗೋ ಹತ್ಯೆ ನಿಷೇಧ ಕಾಯ್ದೆ, ಎ.ಪಿ.ಎಂ.ಸಿ ತಿದ್ದುಪಡಿ ಕಾಯ್ದೆ ಹಾಗೂ ವಿದ್ಯುತ್ ಮಸೂದೆ ಕಾಯ್ದೆಯನ್ನು ಹಿಂಪಡಯಬೇಕೆಂದು ಸಂಯುಕ್ತ ಹೋರಾಟ-ಕರ್ನಾಟಕದ ಸಹಕಾರದೊಂದಿಗೆ ಶೋಷಿತರ ಅರಿವಿನ ಗುರು ಕುದ್ಮುಲ್ ರಂಗರಾವ್ ಸ್ಮರಣೆಯಲ್ಲಿ ಶುಕ್ರವಾರವ ಮಂಗಳೂರಿನಿಂದ ಬೆಂಗಳೂರಿಗೆ ಹೊರಟಿರುವ ಭಾವೈಕ್ಯತಾ ಜಾಥ-2023ನ್ನು ಮೂಡುಬಿದಿರೆ ಬಸ್ ನಿಲ್ದಾಣದಲ್ಲಿ ಸ್ವಾಗತಿಸಿ ಮಾತನಾಡಿದರು.
ಇತ್ತೀಚೆಗೆ ಮೂಡುಬಿದಿರೆಯಲ್ಲಿ ವಕೀಲರಾದ ಶಾಂತಿಪ್ರಸಾದ್ ಅವರು ರೈತರನ್ನು ಒಟ್ಟುಗೂಡಿಸಿ ಡೀಮ್ಡ್ ಫಾರೆಸ್ಟ್ ತೆಗೆದುಹಾಕಬೇಕೆಂದು ಬೃಹತ್ ಮಟ್ಟದಲ್ಲಿ ಹೋರಾಟವನ್ನು ನಡೆಸಿದ್ದರು. ಆದರೆ ಶಾಂತಿಪ್ರಸಾದ್ರವರೇ ನಿಮ್ಮದೇ ರಾಜ್ಯ ಹಾಗೂ ಕೇಂದ್ರ ಸರ್ಕಾರ ಇರುವುದು. ಆದರೆ ಸುಪ್ರೀಂಕೋರ್ಟಿನ ಅನುಮತಿ ಇಲ್ಲದೇ ಡೀಮ್ಡ್ ಫಾರೆಸ್ಟ್ ನ್ನು ತೆಗೆದು ಹಾಕಲು ಸಾಧ್ಯವಿಲ್ಲ. ಜನಸಾಮಾನ್ಯರಿಗೆ ಸುಳ್ಳು ಭರವಸೆ ನೀಡಿ ಜನರಿಗೆ ಮೋಸ ಮಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ರೈತಸಂಘದ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ ಮಾತನಾಡಿ, ಇವತ್ತು ಆಡಳಿತದಲ್ಲಿರುವ ಡಬ್ಬಲ್ ಇಂಜಿನ್ ಸರ್ಕಾರವು ಸಿಂಗಲ್ ಪಿಸ್ಟನ್ ಸರ್ಕಾರವಾಗಿದೆ. ಇಂಜಿನ್ 2 ಇದೆ ಪಿಸ್ಟನ್ ಒಂದಿದೆ. ಸಿಂಗಲ್ ಪಿಸ್ಟನ್ ಸರ್ಕಾರಕ್ಕೆ ತಾಕತ್ತು ಇಲ್ಲ.ಇಂದು ನರೇಂದ್ರ ಮೋದಿ ಹಾಗೂ ಬೊಮ್ಮಾಯಿ ಅವರ ಸದ್ದು ಮಾತ್ರ ಕೇಳಿಸುತ್ತಿದೆ. ಆದರೆ ಅದ್ಯಾವುದೂ ಜನರಿಗೆ ಅನುಕೂಲವಾಗುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ರೈತಸಂಘದ ಮೂಡುಬಿದಿರೆ ತಾಲೂಕು ಅಧ್ಯಕ್ಷ ಲಿಯೋ ವಾಲ್ಟರ್ ನಜ್ರತ್ ಅಧ್ಯಕ್ಷತೆ ವಹಿಸಿದ್ದರು.ಜೆ.ಸಿ.ಟಿ.ಯು ನ ರಾಜ್ಯಸಂಚಾಲಕ ಕೆ.ವಿ ಭಟ್, ಜಮಾತೆ ಇಸ್ಲಾಮೀ ಹಿಂದ್ನ ಜಿಲ್ಲಾ ಸಂಚಾಲಕ ಅಮೀನ್ ಅನ್ಸನ್, ಶಿವಪ್ರಕಾಶ್, ಕರ್ನಾಟಕ ರಾಜ್ಯ ರೈತಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಕೆ.ಪ್ರೇಮನಾಥ ಶೆಟ್ಟಿ ಬಾಳ್ತಿಲ ಬಿ.ಯಂ. ಭಟ್, ಯುವ ರೈತ ಘಟಕದ ಜಿಲ್ಲಾಧ್ಯಕ್ಷ ಆದಿತ್ಯನಾರಾಯಣ್ ಕೆಲ್ಲಾಜೆ, ಸೋಲಿಡಾರಿಟಿ ಯೂತ್ ಮೂವ್ಮೆಂಟ್ನ ಜಿಲ್ಲಾಧ್ಯಕ್ಷ ತಸ್ಲೀಲಾ ಅಹಮ್ಮದ್, ಎ.ಐ.ಟಿ.ಯು.ಸಿ.ಸಿ ಯ ಜಿಲ್ಲಾ ಮುಖಂಡ ರಾಮಣ್ಣ ವಿಟ್ಲ, ಯುವ ರೈತ ಘಟಕದ ಜಿಲ್ಲಾ ಗೌರವಾಧ್ಯಕ್ಷ ಸುರೇಂದ್ರ ಕೇರ್ಯ ಈ ಸಂದರ್ಭದಲ್ಲಿದ್ದರು.
