ರಸ್ತೆ ಬದಿ ನಿಂತಿದ್ದ ಬಾಲಕನಿಗೆ ಕಾರು ಢಿಕ್ಕಿ , ಬಾಲಕ ಸ್ಥಳದಲ್ಲೇ ಸಾವು

ರಸ್ತೆ ಬದಿ ನಿಂತಿದ್ದ ಎಂಟನೇ ತರಗತಿ ವಿದ್ಯಾರ್ಥಿಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.ಬೋಳಿಯಾರು ಭಟ್ರಬೈಲು ನಿವಾಸಿ ಹರಿಶ್ಚಂದ್ರ -ಅರುಣಾಕ್ಷಿ ದಂಪತಿ ಪುತ್ರ ಕಾರ್ತಿಕ್ (14) ಮೃತ ಬಾಲಕ. ಮುಡಿಪು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಎಂಟನೇ ತರಗತಿ ವಿದ್ಯಾರ್ಥಿಯಾಗಿದ್ದನು. ಶಾಲೆ ಬಿಟ್ಟು ಮನೆಗೆ ತೆರಳಲು ರಸ್ತೆಬದಿಯಲ್ಲಿ ನಿಂತಿದ್ದ ಬಾಲಕನಿಗೆ ಮುಡಿಪು ಕಡೆಗೆ ತೆರಳುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ.

ಕಾರು ಚಾಲಕನ ಅತಿವೇಗದ ಚಾಲನೆಯೇ ಅಪಘಾತಕ್ಕೆ ಕಾರಣವೆನ್ನಲಾಗಿದೆ. ಬಾಲಕನಿಗೆ ಢಿಕ್ಕಿ ಹೊಡೆದ ಕಾರು ನಂತರ ಸಮೀಪದಲ್ಲೇ ಇದ್ದ ರಿಕ್ಷಾಗೂ ಢಿಕ್ಕಿ ಹೊಡೆದಿದೆ. ಮಂಗಳೂರು ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
