“ಸಿತಾರ್ ರತ್ನ” ಕೊಚ್ಚಿಕಾರ್ ದೇವದಾಸ್ ಪೈ ಅವರ ಸಿತಾರ್ ವಾದನಕ್ಕೆ ಹೆಗ್ಗಡೆ ದಂಪತಿಯಿಂದ ಸುವರ್ಣಪದಕ ಗೌರವ
ಮಹಾಶಿವರಾತ್ರಿಯ ಪವಿತ್ರ ಪರ್ವದ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಕ್ತಿ–ಸಂಗೀತಗಳ ಅಪೂರ್ವ ಸಂಯೋಗ ಸಾಕ್ಷಿಯಾಯಿತು. ಮಂಗಳೂರಿನ ಖ್ಯಾತ ಸಿತಾರ್ ವಾದಕ “ಸಿತಾರ್ ರತ್ನ” ಕೊಚ್ಚಿಕಾರ್ ದೇವದಾಸ್ ಪೈ ಅವರು ಶ್ರೀ ಮಂಜುನಾಥ ದೇವಸ್ಥಾನ ಸನ್ನಿಧಿಯಲ್ಲಿ ಭಕ್ತಿಭಾವಪೂರ್ಣ ಸಿತಾರ್ ವಾದನ ನೀಡಿದ್ದು, ಭಕ್ತರು ಹಾಗೂ ಸಂಗೀತಾಸಕ್ತರ ಮನಸೂರೆಗೊಂಡರು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರ ಸಮ್ಮುಖದಲ್ಲಿ ನಡೆದ ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪೈ ಅವರ ಸಿತಾರ್ ನಾದವು ಭಕ್ತಿಯ ಮನೋಭಾವವನ್ನು ಮತ್ತಷ್ಟು ಗಾಢಗೊಳಿಸಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹೆಗ್ಗಡೆ ದಂಪತಿಗಳು ಕೊಚ್ಚಿಕಾರ್ ದೇವದಾಸ್ ಪೈ ಅವರ ಸಂಗೀತ ಸೇವೆಯನ್ನು ಶ್ಲಾಘಿಸಿ, ಸಂಗೀತಕಲಾ ಕ್ಷೇತ್ರಕ್ಕೆ ನೀಡಿದ ಅವರ ಅಪಾರ ಕೊಡುಗೆಯನ್ನು ಪ್ರಶಂಸಿಸಿದರು.
ನAತರ, ಶ್ರೀ ಮಂಜುನಾಥ ದೇವರ ಮೊಹರಿರುವ ಸುವರ್ಣಪದಕವನ್ನು ಪ್ರದಾನ ಮಾಡಿ, ಶಾಲು ಹೊದಿಸಿ ಗೌರವಿಸಲಾಯಿತು. ಮಹಾಶಿವರಾತ್ರಿಯ ಈ ವಿಶೇಷ ಸಂಗೀತ ಕ್ಷಣಕ್ಕೆ ಅನೇಕ ಭಕ್ತರು ಹಾಗೂ ಸಂಗೀತಪ್ರೇಮಿಗಳು ಸಾಕ್ಷಿಯಾಗಿದ್ದು, ಆಚರಣೆಗೆ ವಿಶೇಷ ಮೆರುಗು ನೀಡಿತು.


















