ಉಳ್ಳಾಲ: ಈಜುಕೊಳದಲ್ಲಿ ಮುಳುಗಿ ಮೂವರು ಯುವತಿಯರು ಮೃತ್ಯು
ಉಳ್ಳಾಲ: ರೆಸಾರ್ಟ್ವೊಂದರ ಈಜುಕೊಳದಲ್ಲಿ ಮುಳುಗಿ ಮೂವರು ಯುವತಿಯರು ಮೃತಪಟ್ಟ ಘಟನೆ ನಡೆದಿದೆ. ಸೋಮೇಶ್ವರದಲ್ಲಿ ಭಾನುವಾರ ಬೆಳಿಗ್ಗೆ ನಡೆದಿರುವ ಘಟನೆಯಲ್ಲಿ ಮೈಸೂರು ದೇವರಾಜ ಮೊಹಲ್ಲಾದ ನವೀನ್ ಕುಮಾರ್ ಅವರ ಪುತ್ರಿ ಕೀರ್ತನಾ ಎನ್ (21), ಮೈಸೂರು ಕುರುಬರ ಹಳ್ಳಿ 4ನೇ ಕ್ರಾಸ್ ನಿವಾಸಿ ಮಲ್ಲೇಶ್ ಅವರ ಪುತ್ರಿ ನಿಶಿತಾ ಎಂ.ಡಿ (21) ಹಾಗೂ ಮೈಸೂರು ಕೆ.ಆರ್.ಮೊಹಲ್ಲ ರಾಮಾನುಜ ರಸ್ತೆಯ 11ನೇ ಕ್ರಾಸ್ ನಿವಾಸಿ ಎಂ.ಎನ್ ಶ್ರೀನಿವಾಸ್ ಅವರ ಪುತ್ರಿ ಪಾರ್ವತಿ ಎಸ್ (20) ಪ್ರಾಣ ಕಳೆದುಕೊಂಡಿದ್ದಾರೆ.
ಸೋಮೇಶ್ವರ ಗ್ರಾಮದ ಬಟ್ಟಪ್ಪಾಡಿ ಅಡ್ಡರಸ್ತೆ ಪೆರಿಬೈಲ್ ಎಂಬಲ್ಲಿರುವ ರೆಸಾರ್ಟ್ ಗೆ ಯುವತಿಯರು ಶನಿವಾರ ಬಂದಿದ್ದರು. ರೆಸಾರ್ಟ್ ಮುಂಭಾಗದಲ್ಲಿರುವ ಕೊಳಕ್ಕೆ ಭಾನುವಾರ ಬೆಳಿಗ್ಗೆ 10 ಗಂಟೆಯ ವೇಳೆ ನೀರಾಟವಾಡಲು ಇಳಿದಿದ್ದರು. ಈಜುಕೊಳದ ನೀರಿನತ್ತ ಮೊಬೈಲ್ ಪೋನ್ನ ವಿಡಿಯೊ ಕ್ಯಾಮೆರಾ ಆನ್ ಮಾಡಿಟ್ಟು ಯುವತಿಯರು ಈಜಾಡುತ್ತಿದ್ದರು. ಆಳವಿರುವ ಕಡೆ ತೆರಳಿದ ವೇಳೆ ಈಜು ಬಾರದೆ ಮುಳುಗಿ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.