HomeFresh Newsಸಾಹಿತ್ಯ ಸಮ್ಮೇಳನ: ಸನ್ಮಾನ ಕಾರ್ಯಕ್ರಮ

ಸಾಹಿತ್ಯ ಸಮ್ಮೇಳನ: ಸನ್ಮಾನ ಕಾರ್ಯಕ್ರಮ

ಉಜಿರೆ, ಫೆ.4: ಸಾಹಿತ್ಯ, ಸಾಂಸ್ಕೃತಿಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿವಿಧ ವ್ಯಕ್ತಿಗಳನ್ನು ಗುರುತಿಸಿ ಅವರನ್ನು ಸಮ್ಮಾನಿಸುವುದರಿಂದ ಅವರ ಸಾಧನೆಗೆ ಇನ್ನಷ್ಟು ಸ್ಫೂರ್ತಿ ನೀಡಿದಂತಾಗುತ್ತದೆ ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಮೋಹನ್ ಆಳ್ವ ಹೇಳಿದರು. ಅವರು ಇಲ್ಲಿನ ಶ್ರೀ ಕೃಷ್ಣಾನುಗ್ರಹ ಸಭಾಭವನದ ಸಾರಾ ಅಬೂಬಕ್ಕರ್ ವೇದಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಮಟ್ಟದ 25ನೆಯ ಸಾಹಿತ್ಯ ಸಮ್ಮೇಳನದ ಎರಡನೇ ದಿನ ಬೇರೆ ಬೇರೆ ರಂಗಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಸಮ್ಮಾನಿಸಿ ಮಾತನಾಡಿದರು.

ಧರ್ಮಸ್ಥಳದ ಖಾವಂದರು ಹಾಗೂ ಮಾತೃಶ್ರೀಯವರು ಸಮಾಜದ ಬಗ್ಗೆ ಉತ್ತಮ ಪರಿಕಲ್ಪನೆ ಮೂಲಕ ಅತಿ ಹೆಚ್ಚಿನ ಕಾರ್ಯ ಮಾಡುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಜಾತಿ, ಮತ, ಧರ್ಮ ಬೇಧ ಮರೆತು ಸಮಾಜ ಕಟ್ಟುವ ಕೆಲಸಕ್ಕೆ ಎಲ್ಲರೂ ಮುಂದಾಗಬೇಕು. ತ್ಯಾಗದ ಮೂಲಕ ಸಮಾಜಸೇವೆ ಮಾಡಿ ಎಲ್ಲರಿಗೂ ಮಾದರಿಯಾದ ಬದುಕು ಮೂಡಿಬರಲಿ ಎಂದು ಅವರು ಆಶಿಸಿದರು. ಉದ್ಯಮಿ ಶ್ರೀಪತಿ ಭಟ್ ಮಾತನಾಡಿ, ತನ್ನ ಕೆಲಸದಲ್ಲಿ ದೇವರನ್ನು ಕಾಣುವ ವ್ಯಕ್ತಿ ಅಭಿನಂದನೆಗೆ ಅರ್ಹ. ಇಂತಹ ವ್ಯಕ್ತಿಯನ್ನು ಸಮಾಜಕ್ಕೆ ಪರಿಚಯಿಸಿದರೆ ಅದು ಇತರರಿಗೆ ಸ್ಫೂರ್ತಿಯಾಗುತ್ತದೆ ಎಂದರು.

ಮಾಧವ ಆಚಾರ್ಯ (ಧಾರ್ಮಿಕ); ಕೃಷ್ಣಮೂರ್ತಿ ಇ. ಕಲ್ಲೇರಿ (ಉದ್ಯಮ), ಗೀತಾ ಮೋಂಟಡ್ಕ (ನಾಟಕ); ಸಂಜೀವ ಶೆಟ್ಟಿಗಾರ್ ಮುಲ್ಕಿ (ಕರಕುಶಲ);  ಹರಿಕೃಷ್ಣ ಕೆ.ಎಸ್. ಕಾಯರ್ತಡ್ಕ (ಕರಕುಶಲ); ಎಸ್.ಬಿ. ನರೇಂದ್ರ ಕುಮಾರ್ ಉಜಿರೆ (ಯಕ್ಷಗಾನ, ಶಾರೀರಿಕ ಶಿಕ್ಷಣ); ರವೀಂದ್ರ ರೈ ಕಲ್ಲಿಮಾರು (ಸಂಘಟನೆ); ರುಕ್ಮಯ ಗೌಡ ಪುದುವೆಟ್ಟು (ಜಾನಪದ); ಪ್ರಸನ್ನ ರೈ ತಿಂಗಳಾಡಿ (ಛಾಯಾಚಿತ್ರ); ಜ್ಯೋತಿ ಚೇಳ್ಯಾರು (ಸಾಹಿತ್ಯ-ಸಂಶೋಧನೆ); ಪದ್ಮನಾಭ ಪಂಬದ (ದೈವಾರಾಧನೆ); ಶೇಖರ್ ಟಿ. ಉಜಿರೆ (ಮುದ್ರಣ) ಅವರನ್ನು ಹಾಗೂ ಮಂಗಳೂರಿನ ಕಲ್ಲಚ್ಚು ಪ್ರಕಾಶನ ಸಂಸ್ಥೆಯನ್ನು ಗೌರವಿಸಲಾಯಿತು.

ಆರ್ಯಭಟ ಪ್ರಶಸ್ತಿ ಪುರಸ್ಕೃತ ವಿಶ್ವನಾಥ ಆರ್. ನಾಯಕ್ ಬೆಳ್ತಂಗಡಿ ಹಾಗೂ ಉದಯ ಕುಮಾರ್ ಲಾಯಿಲ ಅವರಿಗೆ ವಿಶೇಷ ಗೌರವ ನೀಡಿ ಪುರಸ್ಕರಿಸಲಾಯಿತು. ಡಾ. ಮೋಹನ್ ಆಳ್ವ ಮತ್ತು ಉದ್ಯಮಿ ಶ್ರೀಪತಿ ಭಟ್  ಅವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ  ಸಮ್ಮೇಳನಾಧ್ಯಕ್ಷರಾದ ಡಾ.  ಹೇಮಾವತಿ ವೀ. ಹೆಗ್ಗಡೆ ಮತ್ತು  ದ.ಕ. ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments