ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ನಂದಿಯ ರಜತ ಕವಚ ನಿರ್ಮಾಣಕ್ಕೆ ಮುಹೂರ್ತ
ಪಡುಬಿದ್ರಿ,ಇತಿಹಾಸಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಪುನಾರಚನೆ ಮಹಾಕಾರ್ಯವು ವೇಗ ಪಡೆದಿದ್ದು, ಫೆ. 2ರಂದು ಶ್ರೀ ದೇಗುಲದ ತೀರ್ಥ ಮಂಟಪದಲ್ಲಿ ಪ್ರತಿಷ್ಟಾಪಿಸಲಾಗುವ ನಂದಿ ವಿಗ್ರಹಕ್ಕೆ ರಜತ ಕವಚ ನಿರ್ಮಾಣಕ್ಕಾಗಿ ಶ್ರೀ ದೇವರ ಬಾಲಾಲಯದಲ್ಲಿ ಮುಹೂರ್ತವನ್ನು ನಡೆಸಲಾಯಿತು.
ಶ್ರೀ ದೇವಸ್ಥಾನದ ಜೀರ್ಣೕೊದ್ಧಾರ ಕಾರ್ಯದಲ್ಲಿ ಕೈಜೋಡಿಸಿರುವ ಮಾತೃ ಮಂಡಳಿಯ ಸ್ವಯಂ ಮುತುವರ್ಜಿಯೊಂದಿಗೆ ಬೆಳ್ಳಿ ಹಾಗೂ ನಗದನ್ನು ಮಾತೆಯರಿಂದ ಈ ಮಹತ್ಕಾರ್ಯಕ್ಕಾಗಿ ಸಂಗ್ರಹಿಸಲಾಗಿತ್ತು. ಹೀಗೆ ಸಂಗ್ರಹಗೊಂಡಿರುವ ಸುಮಾರು 4ಕೆಜಿ ಬೆಳ್ಳಿ ಹಾಗೂ 5ಗ್ರಾಂ ಚಿನ್ನಗಳನ್ನು ಕಾರ್ಕಳದ ರಜತೋದ್ಯಮಿ ಪ್ರಕಾಶ್ ಆಚಾರ್ಯ ಅವರಿಗೆ ಶ್ರೀ ದೇವರ ಸನ್ನಿಧಾನದಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿ ಹಸ್ತಾಂತರಿಸಲಾಯಿತು.
ಭಕ್ತಾದಿಗಳಿಂದ 3.13ಲಕ್ಷ ರೂ. ನಗದು ರೂಪದಲ್ಲಿ ಕ್ರೋಢೀಕರಿಸಲಾಗಿದ್ದು ರಜತ ಕವಚ ನಿರ್ಮಾಣ ಕಾರ್ಯಗಳಿಗೆ ಇದನ್ನು ಬಳಸಿಕೊಳ್ಳಲಾಗುವುದು ಎಂದು ಜೀರ್ಣೋದ್ಧಾರ ಸಮಿತಿ ತಿಳಿಸಿದೆ.
ನಂದಿಯ ರಜತ ಕವಚ ನಿರ್ಮಾಣ ಕಾರ್ಯದಲ್ಲಿ ಸಹಕರಿಸುವ ಭಕ್ತಾದಿಗಳಿಗೆ ಫೆ. 28ರವರೆಗೆ ಅವಕಾಶವನ್ನು ಶ್ರೀ ದೇಗುಲದ ಜೀರ್ಣೕೊದ್ಧಾರ ಸಮಿತಿಯು ಕಲ್ಪಿಸಿದ್ದು ರಜತ ದಾನ ಸಂಕಲ್ಪದೊಂದಿಗೆ ಮಾತೃ ಮಂಡಳಿಯೊಂದಿಗೆ ಕೈಜೋಡಿಸಬಹುದಾಗಿದೆ. ಶ್ರೀ ದೇವರ ಸನ್ನಿಧಾನದ ಜೀರ್ಣೕೊದ್ಧಾರ, ಪುನರ್ ನವೀಕರಣ ಕಾರ್ಯಗಳಲ್ಲಿ ಭಜಕರ ಪೂರ್ಣ ಪ್ರಮಾಣದ ಸಹಕಾರವನ್ನು ಬಯಸಲಾಗಿದೆ. ಶ್ರೀ ಮಹಾರುದ್ರ, ಮಹಾಗಣಪತಿಯ ಅನುಗ್ರಹದೊಂದಿಗೆ ಎಲ್ಲವೂ ನಿರೀಕ್ಷೆಯಂತೆ ಸಾಗಿದಲ್ಲಿ ಮುಂದಿನ ಎಪ್ರಿಲ್ ತಿಂಗಳಲ್ಲಿ ಪುನರ್ ಪ್ರತಿಷ್ಟೆ, ಮೇ ಮೊದಲ ವಾರದಲ್ಲಿ ಬ್ರಹ್ಮಕಲಶೋತ್ಸವವನ್ನು ನೆರವೇರಿಸಲು ಸಂಕಲ್ಪಿಸಲಾಗಿದೆ ಎಂದು ಶ್ರೀ ದೇಗುಲದ ಜೀರ್ಣೕೊದ್ಧಾರ ಸಮಿತಿಯ ಅಧ್ಯಕ್ಷ, ಬೆಂಗಳೂರಿನ ಉದ್ಯಮಿ ಡಾ| ಕೆ, ಪ್ರಕಾಶ್ ಶೆಟ್ಟಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಅರ್ಚಕ ಎಚ್. ಪದ್ಮನಾಭ ಭಟ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ರಾಜಗೋಪಾಲ ಉಪಾಧ್ಯಾಯ, ವೇದ, ಪುರಾಣವಾಚಕರಾದ ವೇ| ಮೂ| ಶ್ರೀನಿವಾಸ ಆಚಾರ್ಯ, ಶ್ರೀ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಪಡುಬಿದ್ರಿ ಪೇಟೆಮನೆ ಭವಾನಿಶಂಕರ ಹೆಗ್ಡೆ, ಜೀರ್ಣೕೊದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಪಿ. ರಾಘವೇಂದ್ರ ನಾವಡ, ರಜತ ಕವಚ ನಿರ್ಮಾಣ ಕಾರ್ಯದ ಸಂಯೋಜಕ ಪ್ರಸಾದ್ ಆಚಾರ್ಯ ಪಡುಬಿದ್ರಿ, ಮಾತೃ ಮಂಡಳಿಯ ಗೌರವಾಧ್ಯಕ್ಷೆ ಶಕುಂತಳಾ ಭವಾನಿಶಂಕರ ಹೆಗ್ಡೆ, ಅಧ್ಯಕ್ಷೆ ಸುಧಾ ಆರ್. ನಾವಡ, ಕಾರ್ಯದರ್ಶಿ ಕಸ್ತೂರಿ ರಾಮಚಂದ್ರ ಮತ್ತಿತರರು ಉಪಸ್ಥಿತರಿದ್ದರು.

















