ಮಂಗಳೂರು: ಮಹಿಳಾ ದಿನಾಚರಣೆ ಪ್ರಯುಕ್ತ ಸಾರಿ ರನ್
ಸಿಟಿ ಸೆಂಟರ್ ಮಾಲ್ ಮತ್ತು ಇತರ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಮಹಿಳೆಯರಿಂದ ಸೀರೆ ಓಟ ಹಮ್ಮಿಕೊಂಡಿದ್ದು, ರಸ್ತೆಯಲ್ಲೇ ಸಾವಿರಾರು ನಾರಿಯರ ರನ್ನಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
ಈ ರನ್ನಿಂಗ್ ಸ್ಪರ್ಧೆಯನ್ನು ಮಂಗಳೂರು ಎಸಿಪಿ ಗೀತಾ ಡಿ ಕುಲಕರ್ಣಿ ಅವರು ಚಾಲನೆ ನೀಡಿದರು.

ಭಾನುವಾರ ಮುಂಜಾನೆ ವೇಳೆಗೆ ಮಂಗಳೂರು ನಗರದ ಸಿಟಿ ಸೆಂಟರ್ನಲ್ಲಿ ಮಾತ್ರ ಬಣ್ಣಬಣ್ಣದ ಆಕರ್ಷಕ ಸೀರೆಗಳನ್ನುಟ್ಟ ಹೆಚ್ಚಿನ ಸಂಖ್ಯೆಯಲ್ಲಿ ನಾರಿಯರು ಬೀದಿಗಳಲ್ಲಿ ತುಂಬಿದ್ದರು. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಖಾಸಗಿ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಿದ್ದ ೩ ಕಿ.ಮೀ ಸೀರೆ ಓಟದಲ್ಲಿ ಸುಮಾರು ಸಾವಿರಕ್ಕೂ ಅಧಿಕ ಮಂದಿ ನೋಂದಣಿ ಮಾಡಿಕೊಂಡು ಸ್ಫರ್ಧೆಯಲ್ಲಿ ಪಾಲ್ಗೊಂಡರು. ಜೀವಮಾನವಿಡೀ ಕುಟುಂಬದವರ ಸ್ವಾಸ್ಥ್ಯದತ್ತ ಗಮನ ಹರಿಸುತ್ತಿದ್ದವರು ಒಂದು ದಿನ ಬಿಡುವು ಮಾಡಿಕೊಂಡು ತಮ್ಮ ದೈಹಿಕ ಕ್ಷಮತೆಯನ್ನೂ ಸಾಬೀತು ಪಡಿಸಿದರು. ಈ ಓಟಕ್ಕೆ ಮಂಗಳೂರಿನ ವಿವಿಧೆಡೆಗಳಿಂದ ಸಿಟಿ ಸೆಂಟರ್ ಕಡೆಗೆ ಬಂದಿದ್ದರು. ಬೆಳಕು ಹರಿಯುವುದರೊಳಗೆ, ಸೂರ್ಯ ಎಚ್ಚೆತ್ತುಕೊಳ್ಳುವುದಕ್ಕೂ ಮುನ್ನ ಉತ್ಸಾಹದ ಬುಗ್ಗೆಗಳಂತೆ ಓಟಕ್ಕೆ ಸಜ್ಜಾಗಿದ್ದರು.
ಮಹಿಳೆಯರು, ಪೀಳಿಗೆಯನ್ನು ಬದಲಾಯಿಸುತ್ತಲೇ ಅವರೂ ಬದಲಾಗುವುದನ್ನು ಸಂಭ್ರಮಿಸುವುದೇ ಸೀರೆ ಓಟದ ಉದ್ದೇಶವಾಗಿದ್ದು, ಮಹಿಳೆಯರಿಗೆಂದೇ ವಿಶೇಷವಾಗಿ ನಡೆಯುವ ಓಟವಾಗಿದೆ. ತಾಯಿ- ಮಗಳು, ಅತ್ತೆ- ಸೊಸೆ, ಒಂದಿಡೀ ಕುಟುಂಬ, ಸ್ನೇಹಿತರ ಗುಂಪು ಹೀಗೆ ವೈವಿಧ್ಯಮಯವಾಗಿ ನಾರಿಯರು ಓಟಕ್ಕಿಳಿದಿದ್ದರು…


ಈ ಸಂದರ್ಭದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಚೀಪ್ ಕಾರ್ಡಿನೇಟರ್ ಲಯನ್ ವಾಣಿ ಆಳ್ವಾ, ಸುರತ್ಕಲ್ನ ಕರಾವಳಿ ಫಿಟ್ನೆಸ್ನ ನಿರ್ದೇಶಕಿ ಯಶೋಮತಿ,
ಖ್ಯಾತ ನಿರೂಪಕಿ ಸೌಜನ್ಯ ಹೆಗ್ಡೆ ಕಾರ್ಯಕ್ರಮವನ್ನು ಆಯೋಜಿಸಿದ್ದರು.


















