ಆ.23 : ಕಾಂಗ್ರೆಸ್ ಪಕ್ಷದ ವತಿಯಿಂದ ಪಾದಯಾತ್ರೆ

ಬಂಟ್ವಾಳ: ಸ್ವಾತಂತ್ರ್ಯ ಅಮೃತಮಹೋತ್ಸವದ ಪ್ರಯುಕ್ತ ಕಾಂಗ್ರೆಸ್ ಪಕ್ಷದ ವತಿಯಿಂದ ಪಾದಯಾತ್ರೆ ಕಾರ್ಯಕ್ರಮ ಆ.23 ರಂದು ಮಂಗಳವಾರದಂದು ಹಮ್ಮಿಕೊಳ್ಳಲಾಗಿದ್ದು ನಾವೂರ ಗ್ರಾಮದ ಮಣ್ಣಿಹಳ್ಳ ಜಂಕ್ಷನಲ್ಲಿ ಬೆಳಿಗ್ಗೆ 9.30ಕ್ಕೆ ಪಾದಾಯಾತ್ರೆ ಪ್ರಾರಂಭಗೊಳ್ಳಲಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ತಿಳಿಸಿದರು.

ಅವರು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ ಪಾದಯಾತ್ರೆಯು ಜಕ್ರಿಬೆಟ್ಟು ಮೂಲಕ ಸಾಗಿ ಬಂಟ್ವಾಳ ಪೇಟ ಮೂಲಕ ಬಸ್ತಿಪಡ್ಪು, ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ, ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗರ್ ಆಡಿಟೋರಿಯಂ ಆಗಿ ಮೆಲ್ಕಾರ್ ಜಂಕ್ಷನ್, ಆಲಡ್ಕ ಬಂದು ಎಸ್‍ಎಸ್ ಆಡಿಟೋರಿಯಂನಲ್ಲಿ ವಿಶಾಂತಿ ಪಡೆದು ಮತ್ತೆ ಪಾದಯಾತ್ರೆ ಮುಂದುವರೆಸಿ ಪಾಣೆಮಂಗಳೂರು ಪೇಟೆ ಮೂಲಕ ಗೂಡಿನ ಬಳಿ, ಬಿ.ಸಿ. ರೋಡು ಸರ್ವಿಸ್ ರೋಡ್ ಮೂಲಕ ಕೈಕಂಬ ಜಂಕ್ಷನ್‍ನಲ್ಲಿ ಸಮಾಪ್ತಿಯಾಗಲಿದೆ ಎಂದರು. ದೇಸ ಭಕ್ತಿ ಗೀತೆಯ ಹಿನ್ನಲೆಯೊಂದಿಗೆ ರಾಷ್ಟ್ರಧ್ವಜ ಹಿಡಿದು ಸ್ವಾತಂತ್ರ್ಯ ಸಂಗ್ರಾಮದ ನೆನೆಪು ಮಾಡಿಸುವ ಕಾರ್ಯಕ್ರಮ ನಡೆಯಲಿದ್ದು ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿನಂತಿಸಿದರು. ಕಾರ್ಯಕ್ರಮದಲ್ಲಿ ನ್ಯಾಯವಾದಿ ಸುಧೀರ್ ಕೊಪ್ಪ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಸಂಜೆ ನಿಕೇತ್ ರಾಜ್ ಮೌರ್ಯ ಸಮಾರೋಪ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.

ರಾಷ್ಟ್ರ ನಾಯಕರಿಗೆ ಅಪಮಾನ: ಮಹಾತ್ಮಗಾಂಧಿ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ ಕೃತ್ಯ ಸ್ವಾತಂತ್ಯ್ಯ ಅಮೃತಮಹೋತ್ಸವ ಆಚರಣೆಯ ಸಂದರ್ಭ ನಡೆದಿದೆ. ಧ್ವಜಸ್ತಂಭದ ಕೆಳಭಾಗದಲ್ಲಿ ಅವರ ಭಾವಚಿತ್ರ ಇಟ್ಟು ರಾಷ್ಟ್ರಧ್ವಜಾರೋಹಣ ಮಾಡಿರುವುದು ಎಷು ಸಮಂಜಸ ಎಂದು ರೈ ಪ್ರಶ್ನಿಸಿದರು. ಈ ಘಟನೆಯನ್ನು ಖಂಡಿಸುವುದಾಗಿ ತಿಳಿಸಿದ ಅವರು ದೇಶದ ಹಿರಿಯ ಸ್ವಾತಂತ್ರ್ಯ ಸೇನಾನಿ ಹಾಗೂ ಸಂವಿಧಾನ ಶಿಲ್ಪಿಗೆ ಮಾಡಿದ ಅಪಮಾನ ಎಂದರು.ಸುದ್ದಿಗೋಷ್ಟಿಯಲ್ಲಿ ಪಕ್ಷದ ಪ್ರಮುಖರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಪದ್ಮಶೇಖರ್ ಜೈನ್, ಸುದರ್ಶನ್ ಜೈನ್, ಅಬ್ಬಾಸ್ ಅಲಿ, ಸದಾಶಿವ ಬಂಗೇರ, ಜನಾರ್ದನ ಚೆಂಡ್ತಿಮಾರ್, ವೆಂಕಪ್ಪ ಪೂಜಾರಿ, ಇಬ್ರಾಹಿಂ ನವಾಝ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published. Required fields are marked *