ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಶ್ರೀ ಕ್ಷೇತ್ರ ಉಚ್ಚಿಲದಲ್ಲಿ ಕುಲಗುರುಗಳ ಕಂಚಿನ ಪುತ್ಥಳಿ ನಿರ್ಮಾಣ ಸಲುವಾಗಿ ಸಾಮೂಹಿಕ ಗುರುಪಾದ ಕಾಣಿಕೆ ಸಮರ್ಪಣೆ”
ಉಚ್ಚಿಲ:ಸುಮಾರು ಸಾವಿರ ವರ್ಷಗಳ ಇತಿಹಾಸವಿರುವ ಮೊಗವೀರ ಸಮಾಜದ ಗುರುಪರಂಪರೆಯಲ್ಲಿ ಒಂಭತ್ತು ತಲೆಮಾರಿನ ಗುರುಗಳು ಸಮಾಜದ ಧಾರ್ಮಿಕ, ಸಾಮಾಜಿಕ, ಅಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಬದುಕಿಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ.
ಅಂತಹ ಮಹಾನುಭಾವರಲ್ಲಿ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಸ್ಥಾಪಕರಾಗಿದ್ದ ಹಾಗೂ ಮಾರ್ಚ್ 31, 1966ರಂದು ಕೀರ್ತಿಶೇಷರಾದ ಶ್ರೀ ಮಾಧವ ಮಂಗಳ ಪೂಜಾರ್ಯರು ಸದ್ರಿ ಗುರುಪರಂಪರೆಯ ಕೊನೆಯ ಗುರುಗಳಾಗಿದ್ದಾರೆ.
ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಜೀರ್ಣೋದ್ಧಾರದ ಸಂದರ್ಭದಲ್ಲಿ ನಡೆದ ಅಷ್ಟಮಂಗಳ ಪ್ರಶ್ನೆಯಲ್ಲಿ ತಿಳಿದು ಬಂದ ಪ್ರಕಾರ, ಕೀರ್ತಿಶೇಷ ಶ್ರೀ ಮಾಧವ ಮಂಗಳ ಪೂಜಾರ್ಯರ ಬೃಹತ್ ಕಂಚಿನ ಪುತ್ಥಳಿಯನ್ನು ಸುಮಾರು 3 ಕೋಟಿ ರೂಪಾಯಿ ವೆಚ್ಚದಲ್ಲಿ ದೇವಸ್ಥಾನದ ಆವರಣದಲ್ಲಿ ನಿರ್ಮಿಸುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಈ ಪುತ್ಥಳಿ ಸಮಾಜದ ಏಕತೆ, ಸ್ವಾಭಿಮಾನ ಹಾಗೂ ಗುರುಭಕ್ತಿಯ ಸಂಕೇತವಾಗಲಿದೆ.ಈ ಪುಣ್ಯ ಕಾರ್ಯಕ್ಕೆ ಎಲ್ಲಾ ಸಮಾಜ ಬಾಂಧವರು ತಮ್ಮ ಶಕ್ತ್ಯಾನುಸಾರ ಕಾಣಿಕೆ ನೀಡುವ ಉದ್ದೇಶದಿಂದ “ಸಾಮೂಹಿಕ ಗುರುಪಾದ ಕಾಣಿಕೆ ಸಮರ್ಪಣೆ” ಕಾರ್ಯಕ್ರಮವನ್ನು ಆಯೋಜಿಸಲು ತೀರ್ಮಾನಿಸಲಾಗಿದ್ದು
ದಿನಾಂಕ 01-03-2026 ಆದಿತ್ಯವಾರದಂದು ಬೆಳಿಗ್ಗೆ 9.30 ಕ್ಕೆ ಶ್ರೀಮತಿ ಶಾಲಿನಿ ಡಾ. ಜಿ. ಶಂಕರ್ ಸಭಾಂಗಣ, ಉಚ್ಚಿಲದಲ್ಲಿ
ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ನೇತೃತ್ವದಲ್ಲಿ, ನಾಡೋಜ ಡಾ. ಜಿ. ಶಂಕರ್ ಅವರ ಮಾರ್ಗದರ್ಶನದಲ್ಲಿ ಹಾಗೂ
ಸಮಾಜದ ಗಣ್ಯ ನಾಯಕರ ಘನ ಉಪಸ್ಥಿತಿಯಲ್ಲಿ ನಡೆಯಲಿದೆ.ಕುಲಗುರುಗಳ ಕಂಚಿನ ಪುತ್ಥಳಿ ನಿರ್ಮಾಣದಂತಹ ಈ ಐತಿಹಾಸಿಕ ಹಾಗೂ ಪುಣ್ಯ ಕಾರ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಭಾಗವಹಿಸಿ, ಗುರುಪಾದ ಕಾಣಿಕೆ ಸಮರ್ಪಿಸುವ ಮೂಲಕ ಶ್ರೀ ದೇವಿ ಹಾಗೂ ಗುರುಗಳ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಪುತ್ಥಳಿ ನಿರ್ಮಾಣ ಸಮಿತಿ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ


















