ಮಂಜೇಶ್ವರದಲ್ಲಿ ಸಂಭ್ರಮದ ಇದ್ ಮಿಲಾದ್ ಆಚರಣೆ
ಮಂಜೇಶ್ವರ: ಪ್ರಸಿದ್ದವಾಗಿರುವ ಉದ್ಯಾವರ ಸಾವಿರ ಜಮಾಹತ್ ಖಿದ್ಮತುಲ್ ಇಸ್ಲಾಮ್ ಕಮಿಟಿಯ ನೇತೃತ್ವದಲ್ಲಿ ಶ್ರದ್ದಾ ಭಕ್ತಿಯೊಂದಿಗೆ ಈದ್ ಮಿಲಾದ್ ಆಚರಿಸಲಾಯಿತು.
ಅಸಯ್ಯದ್ ಶಹೀದ್ ವಲಿಯುಲ್ಲಾಯಿ (ಖ. ಸಿ) ರವರ ದರ್ಗಾ ಶೆರೀಫ್ ನಲ್ಲಿ ನಡೆದ ಪ್ರಾಥಣೆಯ ಬಳಿಕ ಮಸೀದಿ ಅಧ್ಯಕ್ಷ ಸೈಫುಲ್ಲಾ ತಂಘಲ್ ರವರು ಧ್ವಜಾರೋಹಣ ಗೈಯುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರಕಿತು.
ಬಳಿಕ ಉದ್ಯಾವರ ಸಾವಿರ ಜಮಾಹತ್ ಖತೀಬ್ ಅಬ್ದುಲ್ ಕರೀಂ ಧಾರಿಮಿಯವರು ಮಸೀದಿ ಅಧ್ಯಕ್ಷರಿಗೆ ಧ್ವಜವನ್ನು ಹಸ್ತಾಂತರಿಸುವುದರೊಂದಿಗೆ ಈದ್ ಮಿಲಾದ್ ರಾಲಿಗೆ ಚಾಲನೆ ದೊರಕಿತು. ಉದ್ಯಾವರ ಜಮಾಹತಿನ ಅಧೀನದಲ್ಲಿರುವ 13 ಮೊಹಲಾಗಳನ್ನೊಳಗೊಂಡ ಮದ್ರಸ ವಿದ್ಯಾರ್ಥಿಗಳ ಘೋಷಯಾತ್ರೆಯು ಶಾಂತಯುತವಾಗಿ ನಡೆದು ಜನರ ಮೆಚ್ಚುಗೆಗೆ ಪಾತ್ರವಾಯಿತು.
ಸಮಿತಿಯ ಪ್ರ. ಕಾರ್ಯದರ್ಶಿ ಇಬ್ರಾಹಿಂ ಬಟರ್ ಫ್ಲೈ, ಪದಾಧಿಕಾರಿಗಳಾದ ಬಶೀರ್ ಎಸ್ ಎಂ, ಮುಸ್ತಫಾ ಉದ್ಯಾವರ, ಅಬೂಬಕ್ಕರ್ ಮಾಹಿನ್, ಮೊಯಿದಿನಬ್ಬ, ಅಬ್ದುಲ್ಲ, ಆಲಿ ಕುಟ್ಟಿ, ಮೊಯಿಞಿ ಮೊದಲಾದವರು ಜಾಥಾಕ್ಕೆ ನೇತೃತ್ವ ನೀಡಿದರು. ಅದೇ ರೀತಿ ಮಂಜೇಶ್ವರದ ವಿವಿಧೆಡೆ ಶ್ರದ್ದಾ ಭಕ್ತಿಯೊಂದಿಗೆ ಈದ್ ಮಿಲಾದ್ ಆಚರಿಸಲಾಯಿತು. ಕೇರಳ ಕರ್ನಾಟಕ ಗಡಿ ಪ್ರದೇಶವಾದ ತೂಮಿನಾಡು ಅಲ್ ಫತಾಃ ಜುಮಾ ಮಸೀದಿ ಹಾಗೂ ಸಿರಾಜುಲ್ ಇಸ್ಲಾಂ ಕಮಿಟಿಯ ನೇತೃತ್ವದಲ್ಲಿ ಶ್ರದ್ದಾ ಭಕ್ತಿಯೊಂದಿಗೆ ಈದ್ ಮಿಲಾದ್ ಆಚರಿಸಲಾಯಿತು. ಸಮಿತಿ ಅಧ್ಯಕ್ಷ ಎ ಆರ್ ಅಬ್ದುಲ್ ರಹ್ಮಾನ್ ಧ್ವಜರೋಹಣಗೈಯುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರಕಿತು. ಬಳಿಕ ವಿದ್ಯಾರ್ಥಿಗಳ ಮೆರವಣಿಗೆ ನಡೆಯಿತು.