ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ; ಸಮತಾ ಸೈನಿಕ ದಳದಿಂದ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ
ಉಡುಪಿ: ಅಂಬೇಡ್ಕರ್ ಆವಾಜ್ ಯೋಜನೆಯಲ್ಲಿ ಮನೆ ನಿರ್ಮಾಣಕ್ಕೆ 9 ಲಕ್ಷ, ಬಸವ ಇಂದಿರಾ ಆವಾಜ್ ಯೋಜನೆಯಡಿಯಲ್ಲಿ 5 ಲಕ್ಷ ಸಹಾಯಧನ ನೀಡುವಂತೆ ಒತ್ತಾಯಿಸಿ, ಬ್ರಹ್ಮಾವರದ ಹನೇಹಳ್ಳಿ ಕೃಷ್ಣ ಶೂಟೌಟ್ ಪ್ರಕರಣವನ್ನು ಸಿಓಡಿ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿ ಸಮತಾ ಸೈನಿಕ ದಳದ ವತಿಯಿಂದ ಉಡುಪಿಯಲ್ಲಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಯಿತು.
ಉಡುಪಿಯ ಅಜ್ಜರಕಾಡು ಹುತಾತ್ಮ ಸ್ಮಾರಕದ ಬಳಿಯಿಂದ ಕಪ್ಪು ಪಟ್ಟಿ ಧರಿಸಿ ಕಾಲ್ನಡಿಗೆ ಮೂಲಕ ಕಾಂಗ್ರೆಸ್ ಕಚೇರಿಗೆ ತೆರಳಿದ ಪ್ರತಿಭಟನಾಕಾರರನ್ನು ಬ್ರಹ್ಮಗಿರಿ ಜಂಕ್ಷನ್ನಲ್ಲಿ ತಡೆದರು. ಬ್ರಹ್ಮಗಿರಿ ರಿಕ್ಷಾ ನಿಲ್ದಾಣದ ಬಳಿ ಪ್ರತಿಭಟನಾ ಸಭೆ ನಡೆಸಿದ ಪ್ರತಿಭಟನಾಕಾರರು, ತಮ್ಮ ಬೇಡಿಕೆಗಳನ್ನು ಆಲಿಸಲು ಉಸ್ತುವಾರಿ ಸಚಿವರು ಆಗಮಿಸುವಂತೆ ಒತ್ತಾಯಿಸಿದರು.
ಪ್ರತಿಭಟನಾಸಭೆಯನ್ನುದ್ದೇಶಿಸಿ ಮಾತನಾಡಿದ ಸಮತಾ ಸೈನಿಕ ದಳದ ಜಿಲ್ಲಾ ಘಟಕದ ಅಧ್ಯಕ್ಷ ವಿಶ್ವನಾಥ ಪೇತ್ರಿ, ರಾಜ್ಯದೆಲ್ಲೆಡೆ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗದವರು ಸರಿಯಾದ ಸೂರು ಇಲ್ಲದೇ ಹೀನಾಯ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಕಳೆದ 10 ವರ್ಷಗಳಿಂದ ಸರ್ಕಾರ ಮನೆ ನಿರ್ಮಾಣಕ್ಕೆ 2 ಲಕ್ಷ ರೂಪಾಯಿ ನೀಡುತ್ತಿದ್ದು, ಇದು ಮನೆಯ ತಳಹದಿ ಹಾಕುವುದಕ್ಕೂ ಸಾಧ್ಯವಾಗುತ್ತಿಲ್ಲ. ದಿನನಿತ್ಯ ಶಿಲೆಕಲ್ಲು, ಮರಳು, ಸಿಮೆಂಟ್ ಬೆಲೆ ಏರಿಕೆಯಾಗುತ್ತಿದೆ. ಇಂದಿನ ಪರಿಸ್ಥಿತಿಯಲ್ಲಿ 600 ಸ್ಕ್ಯಾರ್ ಫೀಟ್ ಮನೆ ನಿರ್ಮಾಣಕ್ಕೆ 20 ಲಕ್ಷ ಖರ್ಚಾಗಲಿದೆ. ಹಾಗಾಗಿ ಸರ್ಕಾರವು ಅಂಬೇಡ್ಕರ್ ಆವಾಜ್ ಮನೆ ನಿರ್ಮಾಣಕ್ಕೆ 9 ಲಕ್ಷ, ಬಸವ ಇಂದಿರಾ ಆವಾಜ್ ಯೋಜನೆಯಲ್ಲಿ 5 ಲಕ್ಷ ಸಹಾಯ ಘೋಷಿಸುವಂತೆ ಒತ್ತಾಯಿಸಿದರು.
ಬ್ರಹ್ಮಾವರ ತಾಲೂಕಿನ ಹನೇಹಳ್ಳಿಯಲ್ಲಿ 2 ವರ್ಷಗಳ ಹಿಂದೆ ದಿನಕೂಲಿ ಕಾರ್ಮಿಕ ಕೃಷ್ಣನನ್ನು ಗುಂಡಿಕ್ಕಿ ಕೊಲೆಗೈದ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಪೊಲೀಸ್ ಇಲಾಖೆಗೆ ಈವರೆಗೆ ಸಾಧ್ಯವಾಗಿಲ್ಲ. ಹಾಗಾಗಿ ಪ್ರಕರಣವನ್ನು ಸಿಐಡಿಗೆ ಒಪ್ಪಿಸಿ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.


















