ಫೆ.7 ಭಾರತಿ ಎಂ. ಭರತನಾಟ್ಯ ರಂಗಪ್ರವೇಶ
ಪುತ್ತೂರು: ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿ(ರಿ.) ಪ್ರಸ್ತುತಿಯಲ್ಲಿ ನೃತ್ಯಗುರು ಶಾಲಿನಿ ಆತ್ಮಭೂಷಣ್ ಶಿಷ್ಯೆ ಭಾರತಿ ಎಂ. ಇವರ ಭರತನಾಟ್ಯ ರಂಗಪ್ರವೇಶ ಫೆ.7 ರಂದು ಪುತ್ತೂರಿನ ಮಹತೋಭಾರ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯ ತೆರೆದ ರಂಗಸ್ಥಳದಲ್ಲಿ ಇದೇ ಮೊದಲ ಬಾರಿಗೆ ನಡೆಯಲಿದೆ.
ಸಂಜೆ 5.45ಕ್ಕೆ ನಾಟ್ಯ ನಿಕೇತನ ಕೊಲ್ಯ ಇಲ್ಲಿನ ಕರ್ನಾಟಕ ಕಲಾಶ್ರೀ ಪುರಸ್ಕೃತ ಗುರು ರಾಜಶ್ರೀ ಉಳ್ಳಾಲ್ ದೀಪ ಪ್ರಜ್ವಲನೆ ನೆರವೇರಿಸಲಿದ್ದಾರೆ. ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮಂಗಳೂರು ಶ್ರೀರಾಧಾಕೃಷ್ಣ ದೇವಸ್ಥಾನದ ವೇದಮೂರ್ತಿ ಗಿರಿಧರ ಭಟ್ ಪರಾಡ್ಕರ್ ಹಾಗೂ ಪುತ್ತೂರು ಮಹತೋಭಾರ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಗೌರವ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಹಿಮ್ಮೇಳದಲ್ಲಿ ನಟುವಾಂಗ ವಿದುಷಿ ಶಾಲಿನಿ ಆತ್ಮಭೂಷಣ್, ಹಾಡುಗಾರಿಕೆಯಲ್ಲಿ ವಿದ್ವಾನ್ ಶ್ರೀಕಾಂತ್ ಗೋಪಾಲಕೃಷ್ಣನ್ ಚೆನ್ನೈ, ಮೃದಂಗದಲ್ಲಿ ವಿದ್ವಾನ್ ವಿನಯ್ ನಾಗರಾಜನ್ ಬೆಂಗಳೂರು, ಕೊಳಲಿನಲ್ಲಿ ವಿದ್ವಾನ್ ರಘು ಸಿಂಹ ಎ.ಎನ್. ಬೆಂಗಳೂರು ಹಾಗೂ ವೀಣೆಯಲ್ಲಿ ವಿದ್ವಾನ್ ವಿ.ಸುಂದರ ರಾಜನ್ ತಿರುವನಂತಪುರ ಸಾಥ್ ನೀಡಲಿದ್ದಾರೆ.
ಭಾರತಿ ಎಂ. ಪರಿಚಯ:
ಕಡಬ ತಾಲೂಕು ಎಂ. ಮಾಧವ ಭಟ್ ಮತ್ತು ಗಾಯತ್ರಿ ದಂಪತಿಯ ಪುತ್ರಿಯಾದ ಭಾರತಿ ಎಂ. ಕಲಿಕೆ, ಶಿಸ್ತು ಮತ್ತು ಸಾಂಸ್ಕೃತಿಕ ಮೌಲ್ಯಗಳೊಂದಿಗೆ ಬೆಳೆದವರು. ಸುಬ್ರಹ್ಮಣ್ಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನಲ್ಲಿ ವಾಣಿಜ್ಯ ಪದವಿ ಪೂರ್ಣಗೊಳಿಸಿದ ಇವರು ಶೈಕ್ಷಣಿಕ ಅಧ್ಯಯನದ ಜೊತೆಗೆ ಶಾಸ್ತ್ರೀಯ ಕಲೆಯಲ್ಲಿ ತೊಡಗಿಸಿಕೊಂಡಿದ್ದಾರೆ. ತನ್ನ 10ನೇ ವಯಸ್ಸಿನಲ್ಲಿ ಗುರು ವಿದುಷಿ ಶಾಲಿನಿ ಆತ್ಮಭೂಷಣ್ ಮಾರ್ಗದರ್ಶನದಲ್ಲಿ ಭರತನಾಟ್ಯ ಕಲಿಕೆ ಆರಂಭಿಸಿದರು. ಇತ್ತೀಚೆಗೆ ವಿದ್ವತ್ ಪೂರ್ವ ಪರೀಕ್ಷೆಯಲ್ಲಿ ವಿಶೇಷ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ನೃತ್ಯಾಭ್ಯಾಸದ ಜೊತೆಗೆ ಗುರು ವಿದ್ವಾನ್ ಶ್ರೀಕಾಂತ್ ಕುದುಮಾರು ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಅಧ್ಯಯನ ಮಾಡುತ್ತಿರುವ ಭಾರತಿ, ಸಂಗೀತದ ಜೂನಿಯರ್ ಪರೀಕ್ಷೆಯನ್ನು ಪೂರೈಸಿದ್ದಾರೆ. ಭಾರತಿ ಅವರು 60ಕ್ಕೂ ಅಧಿಕ ವೇದಿಕೆಗಳಲ್ಲಿ ಏಕವ್ಯಕ್ತಿ ಸಹಿತ ಭರತನಾಟ್ಯ ಪ್ರದರ್ಶನ ನೀಡಿದ್ದಾರೆ. ಹಲವು ಕಾರ್ಯಾಗಾರಗಳಲ್ಲಿ ಭಾಗವಹಿಸಿದ್ದಾರೆ.
ನೃತ್ಯೋಪಾಸನಾ ಕಲಾ ಅಕಾಡೆಮಿ:
ನೃತ್ಯೋಪಾಸನಾ ಕಲಾ ಅಕಾಡೆಮಿ 2004ರಲ್ಲಿ ಆರಂಭವಾಗಿದ್ದು 21 ವರ್ಷ ಪೂರೈಸಿದೆ. ಅಕಾಡೆಮಿಯಲ್ಲಿ ಪ್ರತಿ ವರ್ಷ ನೂರಾರು ವಿದ್ಯಾರ್ಥಿಗಳು ಜೂನಿಯರ್, ಸೀನಿಯರ್, ವಿದ್ವತ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಸಂಸ್ಥೆಗೆ ಶೇ.ನೂರು ಫಲಿತಾಂಶ ದಾಖಲಿಸುತ್ತಿದ್ದಾರೆ. ಈ ಸಂಸ್ಥೆಯ ವಿದ್ಯಾರ್ಥಿಗಳು ನಾಡಿನಾದ್ಯಂತ ಮಾತ್ರವಲ್ಲ ಹೊರ ರಾಜ್ಯ, ದೇಶ, ವಿದೇಶಗಳಲ್ಲೂ ಭರತನಾಟ್ಯ ಪ್ರದರ್ಶನಗಳಲ್ಲಿ ಭಾವಹಿಸುತ್ತಿದ್ದಾರೆ. ಈ ಅಕಾಡೆಮಿಯು ಗಡಿನಾಡ ಸಾಂಸ್ಕೃತಿಕ ಉತ್ಸವ, ಕಲಾರ್ಣವ ಸೇರಿದಂತೆ ನೃತ್ಯ ತರಂಗಿಣಿ ಸರಣಿ ಕಾರ್ಯಕ್ರಮಗಳನ್ನೂ ಯಶಸ್ವಿಯಾಗಿ ಸಂಘಟಿಸುತ್ತಿದೆ. ಈ ಮೂಲಕ ಶಾಸ್ತ್ರೀಯ ಕಾರ್ಯಕ್ರಮಗಳ ಸವಿಯನ್ನು ಕಲಾಸಕ್ತರಿಗೆ ಉಣಬಡಿಸುತ್ತಿದೆ.
















