ಅರಣ್ಯ ಇಲಾಖೆಯ ವತಿಯಿಂದ ವಿಶ್ವ ಹುಲಿ ದಿನಾಚರಣೆ
ದೇಶದಲ್ಲೇ ಕರ್ನಾಟಕದಲ್ಲಿರುವ ಹುಲಿಗಳ ಗಣತಿಯಲ್ಲಿ ಎರಡನೇ ಸ್ಥಾನ ಹೊಂದಿದ್ದರೂ, ರಾಜ್ಯದಲ್ಲೇ ಅತ್ಯಾಧಿಕ ಹುಲಿಗಳನ್ನು ಹೊಂದಿರುವ ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವು ಕರ್ನಾಟಕ ತಮಿಳುನಾಡು ಮತ್ತು ಕೇರಳ ರಾಜ್ಯಗಳ ಹುಲಿ ಸಂರಕ್ಷಿತ ಪ್ರದೇಶಕ್ಕೆ ವಿಸ್ತಾರಗೊಂಡಿದೆ, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೇಲುಕಾಮನಹಳ್ಳಿ ಬಳಿ ಇರುವ ಬಂಡೀಪುರ ಸಫಾರಿ ಕೇಂದ್ರದ ಆವರಣದಲ್ಲಿ 12 ನೇ ವಿಶ್ವ ಹುಲಿ ದಿನಾಚರಣೆಯನ್ನು ಅರಣ್ಯ ಇಲಾಖೆಯಿಂದ ಆಚರಿಸಲಾಯಿತು.
ಮೇಲುಕಾಮನಹಳ್ಳಿಯ ಸಫಾರಿ ಕೇಂದ್ರ ಬಳಿ, ವಿಶ್ವ ಹುಲಿ ದಿನಾಚರಣೆಗೆ ಮೆರಗು ತರಲು ಬೈಸಿಕಲ್ ಜಾಥವನ್ನು ಹಮ್ಮಿಕೊಂಡಿತ್ತು. ಕ್ಷೇತ್ರದ ಶಾಸಕ ಸಿ.ಎಸ್. ನಿರಂಜನ್ ಕುಮಾರ್, ಅರಣ್ಯ ಇಲಾಖೆಯ ಹುಲಿ ಯೋಜನೆಯ ಎಪಿಸಿಎಫ್ ಜಗತ್ ರಾಮ್ , ಮೈಸೂರು ಅರಣ್ಯ ವೃತ್ತದ ಅರಣ್ಯಾಧಿಕಾರಿ ಮಾಲತಿ ಪ್ರಿಯಾ, ಜಿಲ್ಲಾಧಿಕಾರಿ ಚಾರೂಲತಾ ಸೋಮಲ್, ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್ ಸೇರಿದಂತೆ ಹಲವಾರು ಗಣ್ಯರು ಬೈಸಿಕಲ್ ಜಾಥಕ್ಕೆ ಹಸಿರು ನಿಶಾನೆ ತೋರಿಸಿದರು. ಇದಾದ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ಹುಲಿ ಸಂತತಿ ಉಳಿವಿನ ಬಗ್ಗೆ ಹಾಗೂ ಮಾನವ ಮತ್ತು ಪ್ರಾಣಿಗಳ ಸಂಘರ್ಷ ಬಗ್ಗೆ ಕಿರುನಾಟಕದ ಮೂಲಕ ಜಾಗೃತಿ ಮೂಡಿಸಲಾಯಿತು.