ಕುಡುಕರ ತಾಣವಾದ ಕಿನ್ನಿಗೋಳಿ ಬಸ್ಸು ತಂಗುದಾಣ
ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಿನ್ನಿಗೋಳಿ ಕೇಂದ್ರ ಬಸ್ಸು ತಂಗುದಾಣ ಹಾಗೂ ನಿಲ್ದಾಣ ಅವ್ಯವಸ್ದೆಗಳ ಅಗರವಾಗಿದ್ದು, ಇದೀಗ ಮದ್ಯವ್ಯಸನಿಗಳ ತಾಣವಾಗಿ ಮಾರ್ಪಟ್ಟಿದೆ.
ಒಂದೆಡೆ ಬಸ್ಸು ನಿಲ್ದಾಣದಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಧೆ ಇಲ್ಲದೆ ವಾಹನ ಸಂಚಾರಕ್ಕೆ ಹಾಗೂ ಪಾದಚಾರಿಗಳಿಗೆ ತೀವ್ರ ತೊಂದರೆಯಾಗಿದೆ. ಮತ್ತೊಂದೆಡೆ ನಿತ್ಯ ಪ್ರಯಾಣಿಕರಿಗೆ ಪ್ರಮುಖ ಆಸರೆಯಾಗಿದ್ದ ಈ ಬಸ್ಸು ನಿಲ್ದಾಣವನ್ನು ಇದೀಗ ಕುಡುಕರೇ ಆಳುತ್ತಿದ್ದಾರೆ. ಪ್ರತಿನಿತ್ಯ ಸುಮಾರು 7ರಿಂದ 8ಮಂದಿ ಮಧ್ಯ ವ್ಯಸನಿಗಳು ಕುಡಿದು ಕೆಲವೊಬ್ಬರು ಪದ್ಯ ಹಾಡುವ ಮೂಲಕ ಮನರಂಜಿಸಿದರೆ, ಇನ್ನು ಕೆಲವರು ಈ ಬಸ್ಸು ನಿಲ್ದಾಣದಲ್ಲಿ ಮಲಗಿ ಅಲ್ಲೇ ಮೂತ್ರ ವಿಸರ್ಜನೆ ಮಾಡುವಂತಹ ಪರಿಸ್ಥಿತಿಯೂ ಇದೆ.
ಪ್ರತಿನಿತ್ಯ ನೂರಾರು ಮಹಿಳೆಯರು, ಕಾಲೇಜು ವಿದ್ಯಾರ್ಥಿನಿಯರು ಈ ಕೇಂದ್ರದ ಬಸ್ಸು ತಂಗುದಾಣವನ್ನೇ ಆಶ್ರಯಿಸಿದ್ದಾರೆ. ಬಸ್ಸು ತಂಗುದಾಣದಲ್ಲಿ ಪ್ರಯಾಣಿಕರ ರಕ್ಷಣೆಗೆಂದು ಇದ್ದ ಪೊಲೀಸರ ಚೌಕಿ ಕಣ್ಮರೆಯಾಗಿದ್ದು ಮಹಿಳೆಯರಿಗೆ ಸಹಿತ ವೃದ್ದ ಪ್ರಯಾಣಿಕರಿಗೆ ಸೂಕ್ತ ಭದ್ರತೆ ಇಲ್ಲದೆ ಭಯಭೀತರಾಗಿದ್ದಾರೆ.
ಸಂಬಂಧ ಪಟ್ಟ ಪೊಲೀಸ್ ಇಲಾಖೆ ಹಾಗೂ ಪಟ್ಟಣ ಪಂಚಾಯತ್ ಇಂತಹ ಅವ್ಯವಸ್ಥೆಯನ್ನು ನೋಡುತ್ತಾ ಕೈಕಟ್ಟಿ ಕುಳಿತಿರುವುದು ವಿಪರ್ಯಾಸವೇ ಸರಿ ಎಂದು ಮಹಿಳೆಯರು ಹಾಗೂ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸ್ಧಳೀಯ ನಾಗರಿಕ ಸಂದೀಪ್ ವಿ4 ನ್ಯೂಸ್ನೊಂದಿಗೆ ಮಾತನಾಡಿ ಕಳೆದ ಸಲ ಕಿನ್ನಿಗೋಳಿ ಪಟ್ಟಣ ಪಂಚಾಯತ್ ನಾಗರಿಕರ ಸಭೆಯಲ್ಲಿ ಬಸ್ಸು ನಿಲ್ದಾಣದ ಅವ್ಯವಸ್ದೆ ಸರಿಪಡಿಸಲು ಟ್ರಾಫಿಕ್ ಪೊಲೀಸರ ಸಹಕಾರ ಬೇಕು ಎಂಬ ಮನವಿ ಸಲ್ಲಿಸಿದ್ದರೂ ಟ್ರಾಫಿಕ್ ಪೊಲೀಸರು ಈ ಅವ್ಯವಸ್ಧೆಯ ಬಗ್ಗೆ ಹಾಗೂ ಪಾರ್ಕಿಂಗ್ ಸುವ್ಯವಸ್ಧೆಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಅಲ್ಲದೆ ಬಸ್ಸು ನಿಲ್ದಾಣದಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಧೆ ಇಲ್ಲದೆ ವಾಹನ ಸಂಚಾರಕ್ಕೆ ಹಾಗೂ ಪಾದಚಾರಿಗಳಿಗೆ ತೀವ್ರ ತೊಂದರೆಯಾಗಿದೆ. ಕೂಡಲೇ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರರು, ಮೂಲ್ಕಿ ಪೊಲೀಸರು ಹಾಗೂ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಎಚ್ಚೆತ್ತು ಬಸ್ಸು ನಿಲ್ದಾಣದ ಎಲ್ಲಾ ಅವ್ಯವಸ್ಧೆಯನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.