ಕರ್ಣಾಟಕ ಬ್ಯಾಂಕ್ನ ಡಿಜಿಟಲ್ ಬ್ಯಾಂಕ್ ಘಟಕ ಉದ್ಘಾಟನೆ

ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷಾಚರಣೆಯ ಅಂಗವಾಗಿ 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕ್ ಯೂನಿಟ್ ಉದ್ಘಾಟನೆಯ ಅಂಗವಾಗಿ ನಗರದ ಯೆಯ್ಯಾಡಿ ಕೊಂಚಾಡಿಯಲ್ಲಿಂದು ಕರ್ಣಾಟಕ ಬ್ಯಾಂಕ್ನ ಡಿಜಿಟಲ್ ಬ್ಯಾಂಕ್ ಘಟಕ ಉದ್ಘಾಟನೆಗೊಂಡಿತು. ನೂತನ ಘಟಕವನ್ನು ಪ್ರಧಾನಿ ನರೇಂದ್ರ ಮೋದಿ ವೀಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು.
ಹೊಸದಿಲ್ಲಿಯ ಹಣಕಾಸು ಸಚಿವಾಲಯದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಪ್ರಧಾನಿ ಜೊತೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಇತರ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿ, ಬ್ಯಾಂಕ್ ವ್ಯವಹಾರದಲ್ಲಿ ವೈಜ್ಞಾನಿಕವಾಗಿ ಪಾರದರ್ಶಕತೆ ಕಾಯ್ದುಕೊಳ್ಳಲು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಹಂತ ಹಂತವಾಗಿ ದೇಶದ ಸಮಗ್ರ ಬ್ಯಾಂಕಿಂಗ್ ವ್ಯವಸ್ಥೆಯನ್ನು ಡಿಜಿಟಲೀಕರಣಗೊಳಿಸಲಾಗುವುದು ಎಂದು ಹೇಳಿದರು.
ಕೊಂಚಾಡಿಯಲ್ಲಿ ಪ್ರಧಾನಿಯವರ ವೀಡಿಯೊ ಕಾನ್ಪೋರೆನ್ಸ್ ಕಾರ್ಯಕ್ರಮವನ್ನು ವೀಕ್ಷಿಸಿದ ಸಂಸದ ನಳಿನ್ ಕುಮಾರ್ ಕಟೀಲು, ಶುಭ ಹಾರೈಸಿ ಡಿಜಿಟಲ್ ಇಂಡಿಯಾ ಪ್ರಧಾನಿಯವರ ಮಹತ್ವದ ಕನಸಿನ ಯೋಜನೆ. ಇಂದು ದೇಶದ 75 ಡಿಜಿಟಲ್ ಬ್ಯಾಂಕ್ ಘಟಕಗಳನ್ನು ಆರಂಭಿಸಿರುವುದರಲ್ಲಿ ಕರ್ನಾಟಕ ರಾಜ್ಯದ ನಾಲ್ಕು ಜಿಲ್ಲೆ ಗಳ ಘಟಕಗಳು ಸೇರಿವೆ. ಈ ಪೈಕಿ ಕರ್ಣಾಟಕ ಬ್ಯಾಂಕ್ ನ ಎರಡು ಘಟಕ ಆರಂಭಿಸಿರುವುದಕ್ಕೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ, ಸಿಇಒ ಮಹಾಬಲೇಶ್ವರ ಎಂ.ಎಸ್. ಸ್ವಾಗತಿಸಿ ಮಾತನಾಡುತ್ತಾ, ದೇಶದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಕರ್ಣಾಟಕ ಬ್ಯಾಂಕ್ನ ಎರಡು ಡಿಜಿಟಲ್ ಘಟಕ ಒಂದು ಮಂಗಳೂರು, ಇನ್ನೊಂದು ಮೈಸೂರಿನಲ್ಲಿ ಪ್ರಧಾನಿಯವರ ಮೂಲಕ ಇಂದು ಚಾಲನೆಗೊಂಡು ದಿನದ 24 ಗಂಟೆಯೂ ಜನರಿಗೆ ನಿರಂತರ ಸೇವೆ ನೀಡಲಿದೆ ಎಂದರು.

ಶಾಸಕ ಡಾ.ಭರತ್ ಶೆಟ್ಟಿ ಅವರು ಮಾತನಾಡಿ, ಕರ್ಣಾಟಕ ಬ್ಯಾಂಕ್ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಿದ್ದು, ಇದೀಗ ಡಿಜಿಟಲ್ ಬ್ಯಾಂಕಿಂಗ್ ಆರಂಭಿಸುವ ಮೂಲಕ ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್, ಮಂಗಳೂರು ಪಾಲಿಕೆಯ ಮೇಯರ್ ಜಯಾನಂದ ಅಂಚನ್, ಪ್ರೊ. ಎಂ.ಬಿ. ಪುರಾಣಿಕ್, ಸುಧೀರ್ ಶೆಟ್ಟಿ ಕಣ್ಣೂರು, ಕರ್ಣಾಟಕ ಬ್ಯಾಂಕ್ನ ಸಿಇಒ ಗೋಕುಲ್ ಪೈ, ಜಿ.ಎಂ. ವಿನಯ ಭಟ್ ಪಿ.ಜೆ. ಮತ್ತಿತರರು ಉಪಸ್ಥಿತರಿದ್ದರು.