ಬಂಟ್ವಾಳ ಪುರಸಭೆಯಲ್ಲಿ ಕಾರ್ಯಾಚರಿಸುತ್ತಿರುವ ಬ್ಯಾಂಕ್ ನಿಂದ 2 ಸಾವಿರ ರೂ. ನೋಟುಗಳ ನಿರಾಕರಣೆ

ಬಂಟ್ವಾಳ: ಬಂಟ್ವಾಳ ಪುರಸಭಾ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಚ್ ಡಿಎಫ್‍ಸಿ ಬ್ಯಾಂಕ್‍ನಲ್ಲಿ 2 ಸಾವಿರ ರೂ.ಗಳ ನೋಟುಗಳನ್ನು ನಿರಾಕರಿಸಿರುವ ಘಟನೆ ಬೆಳಕಿಗೆ ಬಂದಿದೆ.
ಪುರಸಭಾ ಕಚೇರಿಯಲ್ಲಿ ನೀರಿನ ಶುಲ್ಕ, ತೆರಿಗೆ ಮೊದಲಾದ ಶುಲ್ಕ ಪಾವತಿಗೆ ಕಾರ್ಯನಿರ್ವಹಿಸುತ್ತಿರುವ ಎನ್‍ಡಿಎಫ್‍ಸಿ ಬ್ಯಾಂಕಿನ ಕೌಂಟರ್‍ನಲ್ಲಿ ಪುರಸಭಾವಾಸಿಗಳಿಂದ 2 ಸಾವಿರ ರೂ.ಗಳ ನೋಟು ನಿರಾಕರಿಸಲಾಗಿದ್ದು, ಬೂಡಾ ಮಾಜಿ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ ಅವರು ಆಕ್ರೋಶ ವ್ಯಕ್ತಪಡಿಸಿ ಮ್ಯಾನೇಜರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

2 ಸಾವಿರ ರೂಪಾಯಿ ನೋಟು ಹಿಡಿದುಕೊಂಡು ಬಂದ ಸಾಕಷ್ಟು ಮಂದಿಯ ನೋಟು ಸ್ವೀಕರಿಸದೆ ಹಿಂದಕ್ಕೆ ಕಳುಹಿಸಲಾಗಿತ್ತು. ದೇವದಾಸ್ ಶೆಟ್ಟಿ ಅವರು ತಮ್ಮ ತೆರಿಗೆ ಪಾವತಿಗೆ ಬಂದಾಗ ನೋಟು ನಿರಾಕರಿಸಿರುವುದನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು. ಮೇಲಾಧಿಕಾರಿಗಳನ್ನು ಸಂಪರ್ಕಿಸಿ ನೋಟು ಸ್ವೀಕರಿಸುವಂತೆ ತಿಳಿಸಿದರು. ಜತೆಗೆ ಮ್ಯಾನೇಜರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಮುಂದೆ ಎಲ್ಲಾ ಸಾರ್ವಜನಿಕರ 2 ಸಾವಿರ ರೂ.ಗಳ ನೋಟನ್ನು ಸ್ವೀಕರಿಸಲಾಯಿತು. ಈ ವೇಳೆ ದೇವದಾಸ್ ಶೆಟ್ಟಿ ಅವರು ಪತ್ರಕರ್ತರ ಜತೆ ಮಾತನಾಡಿ, ಆರ್‍ಬಿಐ ನಿಯಮಗಳನ್ನು ಗಾಳಿಗೆ ತೂರಿ ಎಚ್‍ಡಿಎಫ್‍ಸಿ ಬ್ಯಾಂಕಿನವರು ನೋಟು ನಿರಾಕರಣೆ ಮಾಡಿದ್ದಾರೆ. ಅದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬಳಿಕ ಸ್ವೀಕರಿಸಿದ್ದು, ನಿರಾಕರಿಸಿದ ಪರಿಣಾಮ ಸಾಕಷ್ಟು ಮಂದಿಗೆ ತೊಂದರೆಯಾಗಿದೆ ಎಂದರು.

Related Posts

Leave a Reply

Your email address will not be published.