ತುಳುವರ ಭಾಷೆ ಸಂಸ್ಕೃತಿ ಸಂರಕ್ಷಣೆಗೆ ಕೇರಳ ತುಳು ಅಕಾಡೆಮಿ ಬದ್ಧ

ತುಳು ಭಾಷೆ ಮತ್ತು ಸಂಸ್ಕೃತಿಯನ್ನು ಪ್ರಚಾರ ಪಡಿಸುವ ನಿಟ್ಟಿನಲ್ಲಿ ಕೇರಳ ತುಳು ಅಕಾಡೆಮಿ ನೂತನ ಚಿಂತನೆಗಳನ್ನು ಸಿದ್ದಪಡಿಸುತ್ತಿದೆ. ಭಾಷಾ ಅಲ್ಪಸಂಖ್ಯಾತ ತುಳು ಜನರ ಕಲಾ, ಸಾಂಸ್ಕೃತಿಕ ಚಟುವಟಿಕೆಗಳನ್ನು ಸಮಾಜಕ್ಕೆ ತಲುಪಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನೂತನವಾಗಿ ಆಯ್ಕೆಯಾಗಿರುವ ಕೆ.ಆರ್.ಜಯಾನಂದ ಅವರನ್ನೊಳಗೊಂಡ ಸಮಿತಿ ತಿಳಿಸಿದೆ.ಕೋವಿಡ್ ಹರಡುವಿಕೆಯ ಪರಿಣಾಮ ಕಳೆದ ಮೂರು ವರ್ಷಗಳಿಂದ ಸ್ಥಗಿತಗೊಂಡಿದ್ದ ಅಕಾಡೆಮಿಯ ಚಟುವಟಿಕೆಗಳು ಈಗ ಸಕ್ರಿಯಗೊಳ್ಳಲಿವೆ ಎಂದು ತುಳು ಅಕಾಡೆಮಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಕೆ.ಆರ್.ಜಯಾನಂದ ತಿಳಿಸಿದ್ದಾರೆ.

ತುಳುನಾಡಿನ ಇತಿಹಾಸ ಇದುವರೆಗೂ ಅಧಿಕೃತವಾಗಿ ದಾಖಲಾಗಿಲ್ಲ. ಕನ್ನಡ ಪ್ರದೇಶಕ್ಕೆ ಸಂಬಂಧಿಸಿದ ಇತಿಹಾಸವಿದ್ದರೂ ಬೇಕಲದವರೆಗೆ ಇರುವ ಹಳೆ ತುಳುನಾಡಿನ ಕುರಿತಾದ ದಾಖಲೆಗಳು ಇಲ್ಲ. ಈ ಎಲ್ಲಾ ಚರಿತ್ರೆಗಳನ್ನು ಒಳಗೊಂಡಿರುವ ಪ್ರತ್ಯೇಕ ವಿಶೇಷಾಂಕವನ್ನು ತುಳು ಅಕಾಡೆಮಿ ಬಿಡುಗಡೆ ಮಾಡಲಿದೆ ಎಂದಿದ್ದಾರೆ.
ಅಕಾಡೆಮಿಯ ಆರಂಭದ ದಿನಗಳಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳನ್ನು ಇನ್ನಷ್ಟು ಕ್ರಿಯಾತ್ಮಕವಾಗಿ ಮತ್ತೊಮ್ಮೆ ನಡೆಸಲಾಗುವುದು. ತುಳುವಿನ `ರಾಷ್ಟ್ರೀಯ ಹಬ್ಬ’ ಇದರಲ್ಲಿ ಪ್ರಮುಖವಾದುದು. ರಾಷ್ಟ್ರಮಟ್ಟದಲ್ಲಿ ತುಳು ಭಾಷೆ ಮತ್ತು ಸಂಸ್ಕೃತಿಗಾಗಿ ದುಡಿಯುವವರನ್ನು ಇದರ ಭಾಗವಾಗಿ ಪರಿಗಣಿಸಲಾಗುವುದು. ತುಳು ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಪ್ರಾಮಾಣಿಕವಾಗಿ ತಿಳಿದಿರುವ ತಜ್ಞರನ್ನು ಜೊತೆಗೂಡಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮತ್ತು ವಿಚಾರ ಸಂಕಿರಣಗಳನ್ನು ಏರ್ಪಡಿಸಲಾಗುವುದು. ತುಳು ಸಂಸ್ಕೃತಿ ಯಲ್ಲಿ ಪ್ರಮುಖವಾದ ತಿಂಗಳು, (ಆಟಿ) ಮಲಯಾಳ ತಿಂಗಳ “ಕರ್ಕಟಕ”. ತುಳು ಜನರಿಗಾಗಿ ಮುಂದಿನ ವರ್ಷದಿಂದ ಗ್ರಾಮೋತ್ಸವಗಳನ್ನು ಏರ್ಪಡಿಸಲಾಗುವುದು ಎಂದು ಕೆ. ಆರ್ ಜಯಾನಂದ ತಿಳಿಸಿದ್ದಾರೆ
