ಮಂಜೇಶ್ವರ ಗ್ರಾ.ಪಂ. ವ್ಯಾಪ್ತಿಯಲ್ಲಿ ಬೀದಿನಾಯಿಗಳ ಹಾವಳಿ

ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಹಾವಳಿ ಮಿತಿಮೀರಿರುವುದರಿಂದ ವಿದ್ಯಾರ್ಥಿಗಳು, ಪಾದಚಾರಿಗಳು ಭಯದ ವಾತಾವರಣದಲ್ಲಿ ನಡೆದಾಡಬೇಕಾದ ಪರಿಸ್ಥಿತಿ ಬಂದೊದಗಿದೆ. ಈ ಬಗ್ಗೆ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳ ನಿರ್ಲ್ಯಕ್ಷ ವನ್ನು ಖಂಡಿಸಿ ಎಸ್ಡಿಪಿಐ ಮಂಜೇಶ್ವರ ಪಂಚಾಯಿತಿ ಸಮಿತಿಯ ನೇತೃತ್ವದಲ್ಲಿ ಮಂಜೇಶ್ವರ ಗ್ರಾಮ ಪಂಚಾಯಿತಿ ಕಚೇರಿಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಮಂಜೇಶ್ವರ ಚರ್ಚ್ ಪರಿಸರದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯನ್ನು ಪಂಚಾಯತ್ ಕಚೇರಿ ಮುಂಭಾಗದಲ್ಲಿ ಪೊಲೀಸರು ತಡೆದರು. ಬಳಿಕ ನಡೆದ ಪ್ರತಿಭಟನಾ ಧರಣಿ ಎಸ್ಡಿಪಿಐ ಮಂಜೇಶ್ವರ ವಲಯಾಧ್ಯಕ್ಷ ಅಶ್ರಫ್ ಬಡಾಜೆ ಉದ್ಘಾಟಿಸಿದರು.

ಇದೇ ವೇಳೆ ಮಾತನಾಡಿದ ಅವರು ಸ್ಥಳೀಯಾಡಳಿತ ಸಂಸ್ಥೆಗಳು ಎಬಿಸಿ ಕಾರ್ಯಕ್ರಮವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದಿರುವುದು ಬೀದಿನಾಯಿಗಳ ಹಾವಳಿಗೆ ಪ್ರಮುಖ ಕಾರಣವಾಗಿದ್ದು, ಆಡಳಿತಾಧಿಕಾರಿಗಳ ಈ ನಿರ್ಲ್ಯಕ್ಷ ಮುಂದುವರಿದರೆ ಮುಂದಿನ ದಿನಗಳಲ್ಲಿ ಅಧಿಕಾರಿಗಳನ್ನು ಬೀದಿ ಬೀದಿಗಳಲ್ಲಿ ತಡೆದು ದಿಗ್ಬಂಧನಗೊಳಿಸಲಿರುವುದಾಗಿ ಅವರು ಎಚ್ಚರಿಕೆ ನೀಡಿದರು.
ಎಸ್ಡಿಪಿಐ ಮಂಜೇಶ್ವರ ಪಂಚಾಯತ್ ಸಮಿತಿ ಅಧ್ಯಕ್ಷ ಇಕ್ಬಾಲ್ ಕುಂಜತ್ತೂರು ಅಧ್ಯಕ್ಷತೆ ವಹಿಸಿದ್ದರು. ಘಟಕದ ಕಾರ್ಯದರ್ಶಿ ಶರೀಫ್ ಪಾವೂರು, ತಾಜು ಉಪ್ಪಳ, ಫೈಸಲ್ ಮಚ್ಚಂಬಾಡಿ, ಮುಬಾರಕ್ ಕಡಂಬಾರ್, ಅನ್ಸಾರ್ ಉದ್ಯಾವರ ಮೊದಲಾದವರು ಪಾಲ್ಗೊಂಡಿದ್ದರು.