ನಮ್ಮ ಕಾರ್ಯಕರ್ತರಿಗೆ ಯಡಿಯೂರಪ್ಪ ಆದರ್ಶ: ನಳಿನ್ ಕುಮಾರ್ ಕಟೀಲ್
ಕರ್ನಾಟಕದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನೀಡಿರುವ ರಾಜೀನಾಮೆ ಹೇಳಿಕೆಯ ಕುರಿತು ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಮಾತನಾಡಿದ ಅವರು, “ಯಡಿಯೂರಪ್ಪ ಹೇಳಿಕೆ ಇದು ಭಾರತೀಯ ಜನತಾ ಪಾರ್ಟಿಯ ವಿಶೇಷತೆ, ನಮ್ಮ ಕಾರ್ಯಕರ್ತರಿಗೆ ಯಡಿಯೂರಪ್ಪ ಆದರ್ಶರಾಗಿದ್ದಾರೆ. ರಾಷ್ಟ್ರ ನಾಯಕರು ಮತ್ತು ಪಕ್ಷದ ಸೂಚನೆಯಂತೆ ನಡೆಯುತ್ತೇನೆ ಎಂದು ಹೇಳಿರೋದು ಆದರ್ಶಯುತವಾಗಿದೆ” ಎಂದರು.
ಯಡಿಯೂರಪ್ಪ ಅಧಿಕಾರಕ್ಕೆ ಅಂಟಿ ಕೂತವರಲ್ಲ, ಪಕ್ಷ ಹೇಳಿದರೆ ರಾಜೀನಾಮೆ ಕೊಡುತ್ತೇನೆ ಎಂದಿದ್ದಾರೆ. ಇದು ಬಿಜೆಪಿಯ ವಿಶೇಷತೆ ಎಂದು ನಳಿನ್ ಕುಮಾರ್ ಕಟೀಲ್ ಬಣ್ಣಿಸಿದರು.”ಪಕ್ಷದಲ್ಲಿ ಇಂಥಹ ಯಾವುದೇ ಚರ್ಚೆಗಳಿಲ್ಲ, ಭಿನ್ನಾಭಿಪ್ರಾಯಗಳಿಲ್ಲ. ನಮ್ಮ ಸರ್ವ ಸಮ್ಮತಿಯ ನಾಯಕ ಯಡಿಯೂರಪ್ಪ. ಪಕ್ಷದಲ್ಲಿ ಯಾವುದೇ ನಾಯಕತ್ವ ಬದಲಾವಣೆ ಇಲ್ಲ ಅಂತ ರಾಷ್ಟ್ರೀಯ ನಾಯಕರು ಹೇಳಿದ್ದಾರೆ. ಇಂಥಹ ಚರ್ಚೆಗಳು ಅಪ್ರಸ್ತುತ” ಎಂದು ರಾಜ್ಯಾಧ್ಯಕ್ಷರು ಸ್ಪಷ್ಟಪಡಿಸಿದರು.
ಸದ್ಯ ಕೋವಿಡ್ ನಿರ್ವಹಣೆ ನಮ್ಮ ಜವಾಬ್ದಾರಿವಾಗಿದೆ. ಯಡಿಯೂರಪ್ಪ ಕಾರ್ಯಕರ್ತರಿಗೆ ಆದರ್ಶವಾಗಿ ಹೇಳಿಕೆ ಕೊಟ್ಟಿದ್ದಾರೆ. ಆದರೆ ಅಂಥಹ ಚರ್ಚೆಗಳಿಲ್ಲ. ಪಕ್ಷ ಮತ್ತು ರಾಷ್ಡ್ರೀಯ ನಾಯಕರ ಮುಂದೆ ಈ ಚರ್ಚೆಯೇ ಇಲ್ಲ ಎಂದು ನಳೀನ್ ಕುಮಾರ್ ಕಟೀಲ್ ಹೇಳಿದರು.ಯಡಿಯೂರಪ್ಪ ನಾನೊಬ್ಬ ಕಾರ್ಯಕರ್ತ ಅನ್ನೋ ನೆಲೆಯಲ್ಲಿ ಇವತ್ತು ಸಂದೇಶ ಕೊಟ್ಟಿದ್ದಾರೆ. ಪರ್ಯಾಯ ನಾಯಕತ್ವದ ಬಗ್ಗೆ ಅವರು ಸಹಜ ಹೇಳಿಕೆ ನೀಡಿದ್ದಾರೆ. ನಮ್ಮಲ್ಲಿ ಹತ್ತಾರು ನಾಯಕರಿದ್ದಾರೆ ಅಂತ ಒಬ್ಬ ಹಿರಿಯರಾಗಿ ಹೇಳಿದ್ದಾರೆ. ನಮ್ಮ ಪಕ್ಷದಲ್ಲಿ ಯಾವುದೇ ರೆಬಲ್ ಗಳಿಲ್ಲ ಎಂದರು. “ಕೆಲವರ ಭಾವನೆ ಮತ್ತು ನೋವುಗಳು ಸರ್ಕಾರ ನಡೆಸುವಾಗ ಇರುತ್ತದೆ. ಅದನ್ನು ಸರಿ ಮಾಡಿದ್ದೇವೆ. ನಮ್ಮಲ್ಲಿ ಸಿಎಂ ಬದಲಾವಣೆ ಚರ್ಚೆಯಿಲ್ಲ. ಗೊಂದಲ, ಅಪಸ್ವರಗಳಿಲ್ಲ. ಈಗ ಮಾತನಾಡಿದ ಶಾಸಕರಿಗೆ ಕರೆದು ಮಾತನಾಡಿದ್ದೇವೆ. ಮುಂದಿನ ತಿಂಗಳು ಅವರ ಭಾವನೆ ವ್ಯಕ್ತಪಡಿಸಲು ಸಭೆ ನಡೆಸುತ್ತೇವೆ ಎಂದು ರಾಜ್ಯಾಧ್ಯಕ್ಷರು ತಿಳಿಸಿದರು.