ಮಂಗಳೂರು ಉತ್ತರ ಬಿಜೆಪಿ ವತಿಯಿಂದ ರೋಡ್ ಶೋ

ಸುರತ್ಕಲ್: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಭರತ್ ವೈ. ಶೆಟ್ಟಿ ಅವರು ಬೆಂಬಲಿಗರು, ಕಾರ್ಯಕರ್ತರು ಮತ್ತು ಪಕ್ಷದ ಮುಖಂಡರ ಜೊತೆ ಮಂಗಳವಾರ ಸಂಜೆ ಸುರತ್ಕಲ್ ಇಡ್ಯಾ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯಿಂದ ಜಂಕ್ಷನ್ ವರೆಗೆ ರೋಡ್ ಶೋ ನಡೆಸಿದರು.
ಬಳಿಕ ನಡೆದ ಬಹಿರಂಗ ಸಭೆಯಲ್ಲಿ ಪ್ರಾಸ್ತಾವಿಕ ಮಾತನ್ನಾಡಿದ ಉತ್ತರ ಮಂಡಲ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ ಅವರು, “ಅಭಿವೃದ್ಧಿ ಮತ್ತು ಹಿಂದುತ್ವ ಎರಡನ್ನೂ ಜೊತೆಯಲ್ಲಿ ಕೊಂಡೊಯ್ಯುವ ಮೂಲಕ ಶಾಸಕ ಭರತ್ ಶೆಟ್ಟಿ ಅವರು ಅಭಿವೃದ್ಧಿಯ ಪಥದಲ್ಲಿ ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಸ್ವಾತಂತ್ರ್ಯ ವೀರ ಸಾವರ್ಕರ್ ಹೆಸರನ್ನು ಮುಂದೊಂದು ದಿನ ಇಲ್ಲಿನ ಸರ್ಕಲ್ ಗೆ ಇಟ್ಟೇ ಇಡುತ್ತೇವೆ. ಎಲ್ಲಾ ಸಮುದಾಯದ ಜನರ ಕಷ್ಟ, ನೋವಿನಲ್ಲಿ ಭಾಗಿಯಾಗಿ ಜನಾನುರಾಗಿಯಾಗಿರುವ ಭರತ್ ಶೆಟ್ಟಿ ಅವರನ್ನು ಮತ್ತೊಮ್ಮೆ ಗೆಲ್ಲಿಸುವ ಮೂಲಕ ಪ್ರಧಾನಿ ಮೋದಿಯವರ ಕೈಯನ್ನು ಬಲಪಡಿಸಬೇಕಿದೆ” ಎಂದರು.

ದಿಕ್ಸೂಚಿ ಭಾಷಣ ಮಾಡಿದ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಅವರು, “ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಅತ್ಯಧಿಕ ಮತಗಳಿಂದ ಗೆಲ್ಲುವ ಅಭ್ಯರ್ಥಿ ಏನಾದರೂ ಇದ್ದರೆ ಅದು ಭರತ್ ಶೆಟ್ಟಿ ಮಾತ್ರ. ಮಂಗಳೂರು ಉತ್ತರ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ 2250 ಕೋಟಿ ರೂ. ಅನುದಾನ ತಂದು ಎಲ್ಲರೂ ತಿರುಗಿ ನೋಡುವಂತೆ ಕ್ಷೇತ್ರದ ಚಿತ್ರಣವನ್ನೇ ಬದಲಿಸಿರುವ ಭರತ್ ಶೆಟ್ಟಿ ಅವರನ್ನು ಬಹುಮತ ಕೊಟ್ಟು ಗೆಲ್ಲಿಸುವ ಸಂಕಲ್ಪವನ್ನು ಪ್ರತಿಯೊಬ್ಬ ಕಾರ್ಯಕರ್ತನೂ ಮಾಡಬೇಕು. 2018ರಲ್ಲಿ ಭರತ್ ಶೆಟ್ಟಿ ಶಾಸಕರಾಗಿ ಬಂದ ಬಳಿಕ ಕ್ಷೇತ್ರದಲ್ಲಿ ಗಲಭೆ ನಡೆದಿಲ್ಲ, ಗೋಹತ್ಯೆ ನಡೆದಿಲ್ಲ. ಗೋಹತ್ಯೆ ಮಾಡಿದವರ ಆಸ್ತಿಯನ್ನು ಮುಟ್ಟುಗೋಲು ಹಾಕಿದ ರಾಜ್ಯದ ಏಕೈಕ ಶಾಸಕರೆಂದರೆ ಭರತ್ ಶೆಟ್ಟಿ ಮಾತ್ರ. ವಿಧಾನಸಭೆಯಲ್ಲಿ ಯುವ ಸಮುದಾಯದ ಪರವಾಗಿ ಧ್ವನಿ ಎತ್ತಿರುವ, ಕರಾವಳಿಯಲ್ಲಿ ಡ್ರಗ್ಸ್ ಜಾಲವನ್ನು ಮಟ್ಟ ಹಾಕಬೇಕು ಎಂದು ಘರ್ಜಿಸಿರುವ ನಾಯಕ ಭರತ್ ಶೆಟ್ಟಿ ಅವರು ನಮ್ಮೆಲ್ಲರ ಆದ್ಯತೆಯಾಗಬೇಕು” ಎಂದರು.

ಬಳಿಕ ಮಾತಾಡಿದ ಡಾ. ಭರತ್ ವೈ. ಶೆಟ್ಟಿಯವರು, “ನಾನು 2018ರಲ್ಲಿ ಶಾಸಕನಾಗಿ ಆಯ್ಕೆಯಾದಾಗ ನಮ್ಮ ಸರಕಾರ ಇರಲಿಲ್ಲ. ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರಕಾರ ಇತ್ತು. ಆಗ ಅನುದಾನ ಸಿಗ್ತಾ ಇರ್ಲಿಲ್ಲ. ಆಮೇಲೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದ್ರು. ಆಗ ನಮಗೆ ಬೇಕಾದಷ್ಟು ಅನುದಾನ ಸಿಕ್ಕಿತು. ಉತ್ತರ ಕ್ಷೇತ್ರದಲ್ಲಿ ನಾನು ಕಂಡಿದ್ದ ಕನಸು ನನಸು ಮಾಡಲು ಸಹಕಾರಿಯಾಯಿತು. 2025 ಕೋಟಿ ರೂ. ಅನುದಾನ ತಂದು ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡಿದ್ದೇನೆ. ಹಿಂದುತ್ವ ಮತ್ತು ಅಭಿವೃದ್ಧಿ ಎರಡರಲ್ಲೂ ನಾನು ರಾಜಿ ಮಾಡಿಕೊಳ್ಳುವುದಿಲ್ಲ. ಕೆಲವರು ನನ್ನನ್ನು ಕೋಮುವಾದಿ ಎನ್ನುತ್ತಾರೆ. ಆದರೆ ನಾನು ವೈದ್ಯನಾಗಿ ಸೇವೆ ಸಲ್ಲಿಸಿದವನು. 6500 ಕುಟುಂಬಗಳಿಗೆ ಹಕ್ಕುಪತ್ರ ಕೊಟ್ಟಿದ್ದೇನೆ ಅದರಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಎಲ್ಲರೂ ಸೇರಿದ್ದಾರೆ. ಇದು ನಿಜವಾದ ಜಾತ್ಯತೀತತೆ. ಕಾಂಗ್ರೆಸಿಗರು ಉಗ್ರರನ್ನು ಬೆಂಬಲಿಸುವುದೇ ಜಾತ್ಯತೀತತೆ ಎಂದುಕೊಂಡಿದ್ದಾರೆ. ಕುಕ್ಕರ್ ಬ್ಲಾಸ್ಟ್ ಮಾಡಿದವ ಇವರಿಗೆ ಉಗ್ರನಲ್ಲ, ಅಮಾಯಕ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅನ್ನೋದು ನನ್ನ ಲೆಕ್ಕದಲ್ಲಿ ನಿಜವಾದ ಜಾತ್ಯತೀತತೆ. ಈ ಬಾರಿಯ ಚುನಾವಣೆಯಲ್ಲಿ ಅಭಿವೃದ್ಧಿಯನ್ನು ನೋಡಿ ಮತ ನೀಡಿ, ನಾನು ಕಾರ್ಯಕರ್ತರಿಂದ ಅಧಿಕಾರಕ್ಕೆ ಬಂದವನು ಮುಂದೆಯೂ ನಿಮ್ಮಿಂದಲೇ ಗೆದ್ದು ಬರುತ್ತೇನೆ ಅನ್ನುವ ವಿಶ್ವಾಸ ನನಗಿದೆ” ಎಂದರು.

ವೇದಿಕೆಯಲ್ಲಿ ಮೇಯರ್ ಜಯಾನಂದ ಅಂಚನ್, ಮಂಗಳೂರು ಉತ್ತರ ಮಂಡಲ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಸಂದೀಪ್ ಪಚ್ಚನಾಡಿ, ರಾಜೇಶ್ ಕೊಟ್ಟಾರಿ, ಮಹೇಶ್ ಮೂರ್ತಿ ಸುರತ್ಕಲ್, ವಿಠಲ ಸಾಲಿಯಾನ್, ಶರತ್ ಚಂದ್ರ ಶೆಟ್ಟಿ, ಕೃಷ್ಣ ಶೆಟ್ಟಿ ಕಡಬ, ದೇವದಾಸ್ ಕುಳಾಯಿ, ಉತ್ತರ ಯುವಮೋರ್ಚಾ ಅಧ್ಯಕ್ಷ ಭರತ್ ರಾಜ್ ಕೃಷ್ಣಾಪುರ,ಕಾರ್ಪೊರೇಟ್ಟರ್ ಗಳಾದ ವರುಣ್ ಚೌಟ,ಲೊಕೇಶ್ ಬೊಳ್ಳಾಜೆ, ವೇದಾವತಿ, ಸರಿತಾ ಶಶಿಧರ್, ನಯನ ಕೋಟ್ಯಾನ್, ಪ್ರಶಾಂತ್ ಮುಡಾಯಿಕೋಡಿ, ಮಾಜಿ ಕಾರ್ಪೊರೇಟ್ಟರ್ ಅಶೋಕ್ ಶೆಟ್ಟಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ವೇಳೆ ಸತೀಶ್ ಸುವರ್ಣ ಪಣಂಬೂರು ಅವರನ್ನು ಪಕ್ಷದ ಧ್ವಜ ಕೊಟ್ಟು ಪಕ್ಷಕ್ಕೆ ಸ್ವಾಗತಸಲಾಯಿತು. ಪುಷ್ಪರಾಜ್ ಮುಕ್ಕ ಅತಿಥಿಗಳನ್ನು ಸ್ವಾಗತಿಸಿದರು.