ಮನೋಜ್ ಕನಪಾಡಿ ಕೈಚಳಕದಲ್ಲಿ ಮೂಡಿಬಂದ ಫೈಬರ್ ಆರ್ಟ್

ಬಂಟ್ವಾಳದ ಖ್ಯಾತ ಫೈಬರ್ ಆರ್ಟ್ ಕಲಾವಿದ ಮನೋಜ್ ಕನಪಾಡಿ ಅವರ ಕೈ ಚಳಕದಲ್ಲಿ ಕುರುಕ್ಷೇತ್ರ ಯುದ್ಧದಲ್ಲಿ ಶಸ್ತ್ರ ತ್ಯಾಗ ಮಾಡಿದ ಅರ್ಜುನನಿಗೆ ಗೀತೆಯನ್ನು ಭೋಧಿಸುವ ಶ್ರೀ ಕೃಷ್ಣನ ಬೃಹತ್ ಕಲಾಕೃತಿಯೊಂದು ರಚನೆಗೊಂಡಿದೆ. ಈ ಕಲಾಕೃತಿಯನ್ನು ಮಂಗಳೂರು ಹೊರ ವಲಯದ ಕಿನ್ನಿಗೋಳಿಯ ಎಳತ್ತೂರಿನಲ್ಲಿರುವ ಶ್ರೀ ಶಕ್ತಿ ದರ್ಶನ ಯೋಗಾಶ್ರಮದ ನೂತನ ಮುರಳೀವನದಲ್ಲಿ ಸ್ಥಾಪಿಸಲಾಗಿದೆ.

10 ಅಡಿ ಎತ್ತರದ ನಿಂತ ಭಂಗಿಯಲ್ಲಿರುವ ಶ್ರೀ ಕೃಷ್ಣನ ವಿಗ್ರಹ, 6 ಅಡಿ ಎತ್ತರದ ಗೀತಾಸಾರವನ್ನು ವಿಧೇಯತೆಯಿಂದ ಆಲಿಸುತ್ತಿರುವ ಅರ್ಜುನನ ವಿಗ್ರಹ, 14 ಅಡಿ ಎತ್ತರದ ಅಶ್ವರೂಢ ರಥ, ನೈಜ ಅಳತೆಯ ಕುದುರೆ, ರಥದ ಮೇಲೆ ಭಗವಧ್ವಜ ಹಿಡಿದು ಕುಳಿತಿರುವ ಹನುಮಂತನ ಪ್ರತಿಮೆಗಳನ್ನು ನಿರ್ಮಿಸಲಾಗಿದ್ದು ನೈಜತೆಯ ಪ್ರತಿರೂಪದಂತಿದೆ.

ಕಳ್ಳಿಗೆಯ ಕುಕ್ಕೆಶ್ರೀ ಕಲಾ ಕುಟೀರದಲ್ಲಿ ಈ ಕಲಾಕೃತಿ ರೂಪು ತಳೆದಿದ್ದು ಕಲಾವಿದನ ಸುಮಾರು ಎರಡು ತಿಂಗಳ ಸತತ ಪರಿಶ್ರಮದಿಂದ ನಿರ್ಮಾಣಗೊಂಡಿದೆ. ಆರಂಭದಲ್ಲಿ ಈ ಎಲ್ಲಾ ವಿಗ್ರಹಗಳ ಮಣ್ಣಿನ ಪ್ರತಿರೂಪ ರಚಿಸಿ ಅದರ ಮೂಲಕ ಮೋಲ್ಡ್ ತಯಾರಿಸಿ ಫೈಬರ್ ಕಲಾಕೃತಿ ಯನ್ನು ರಚಿಸಲಾಗಿದೆ. ಇದೀಗ ಕಿನ್ನಿಗೋಳಿಯ ಮುರಳೀವನದಲ್ಲಿ ಪ್ರತಿಷ್ಠಾಪಿಸಲ್ಪಟ್ಟು ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.

ಜಗತ್ತಿಗೆ ಗೀತಾ ಸಂದೇಶವನ್ನು ನೀಡುವ ಜಗದೀಶ್ವರನ ಮಂದ ಸ್ಮಿತದ ಮುಖ ಭಾವ, ಅದನ್ನು ಆಲಿಸುವ ಪಾರ್ಥನ ಮುಖದಲ್ಲಿರುವ ವಿನೀತಾ ಭಾವ, ಚಲನ ಶೀಲ ಸ್ಥಿತಿಯಲ್ಲಿರುವ ಅಶ್ವಗಳು ನೈಜತೆಯನ್ನು ಹೋಲುತ್ತಿದ್ದು ಇದನ್ನು ನೋಡಿದ ಭಕ್ತ ಜನರಲ್ಲಿ ಭಕ್ತಿ ಭಾವವನ್ನು ಮೂಡಿಸುತ್ತಿದೆ. ಮನೋಜ್ ಕನಪಾಡಿಯವರು ಇಂತಹ ಅನೇಕ ಕಲಾಕೃತಿಗಳು, ಟ್ಯಾಬ್ಲೋಗಳನ್ನು ರಚಿಸಿದ್ದು ಜಿಲ್ಲೆಯ ಅಪರೂಪದ ಫೈಬರ್ ಆರ್ಟ್ ಕಲಾವಿಧರಾಗಿದ್ದಾರೆ.
