ಭಾರತೀಯ ಆಹಾರ ಪದ್ಧತಿ ಶ್ರೇಷ್ಠ: ಸ್ವಾಮಿನಿ ಮಂಗಳಾಮೃತ ಪ್ರಾಣ

ಮಂಗಳೂರಿನ ಮಾತಾ ಅಮೃತಾನಂದಮಯಿ ಮಠದವತಿಯಿಂದ ಉದಯವಾಣಿ ದಿನಪತ್ರಿಕೆ, ಸಾವಯವ ಕೃಷಿಕ ಗ್ರಾಹಕ ಬಳಗ, ರೋಟರಿ ಕ್ಲಬ್ ಮಂಗಳೂರು ಉತ್ತರ ಹಾಗೂ ಇನ್ನರ್ ವ್ಹೀಲ್ ಮಂಗಳೂರು ಉತ್ತರ ಇವರ ಸಂಯುಕ್ತ ಆಶ್ರಯದಲ್ಲಿ ಅಮೃತ ಧ್ವನಿ- ನಮ್ಮ ಕೈತೋಟ, ನಮ್ಮ ಆಹಾರ ಜರುಗಿತು. ಸ್ವಾಮಿನಿ ಮಂಗಳಾಮೃತ ಪ್ರಾಣರವರು ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಅವರು ಈ ಸಂದರ್ಭದಲ್ಲಿ ಆಶೀರ್ವಚನವಿತ್ತು ಭಾರತೀಯ ಜೀವನ ಪದ್ಧತಿಯು ಶ್ರೇಷ್ಠ ಪರಂಪರೆ ಹೊಂದಿದೆ, ಋಷಿ ಮುನಿಗಳಿಂದ ನಿರ್ದೇಶಿತವಾದ ನಮ್ಮ ಆಹಾರ ಸೇವನಾ ವಿಧಾನಗಳು ವಿಶ್ವಕ್ಕೇ ಮಾದರಿ ಎನಿಸಿದೆ.ಇಂದು ಪಾಶ್ಚಾತ್ಯ ಅನುಕರಣೆ, ಬದಲಾದ ಜೀವನಶೈಲಿ, ಸಣ್ಣ ಕುಟುಂಬ ಪದ್ಧತಿ, ಅಪಾರ್ಟ್ಮೆಂಟ್ ಗಳಲ್ಲಿ ವಾಸ ಮೊದಲಾದ ಕಾರಣಗಳಿಂದಾಗಿ ನಮ್ಮ ದೈನಂದಿನ ಆಹಾರೋತ್ಪನ್ನಗಳನ್ನು ಮನೆಯಂಗಳದಲ್ಲಿ, ನಮ್ಮದೇ ತೋಟದಲ್ಲಿ ಬೆಳೆಸಿ ಉಪಯೋಗಿಸುವ ಪದ್ಧತಿ ಮರೆಯಾಗುತ್ತಿದೆ.ಇದರಿಂದಾಗಿ ಕಲುಷಿತ ಆಹಾರ ಸೇವನೆ ಹೆಚ್ಚಾಗಿ ಆರೋಗ್ಯ ಸಮಸ್ಯೆ ಕಂಡುಬರುತ್ತಿದೆ.ಈ ದೃಷ್ಟಿಯಿಂದ ಸಾವಯವ ಕೃಷಿಕ ಗ್ರಾಹಕ ಬಳಗವು ಜನಜಾಗೃತಿ ಮೂಡಿಸುವ ಕಾರ್ಯವನ್ನು ಉದಯವಾಣಿ ಸಹಯೋಗದೊಂದಿಗೆ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಸಾವಯವ ಕೃಷಿಕ ಗ್ರಾಹಕ ಬಳಗದ ಹರಿಕೃಷ್ಣ ಕಾಮತ್ ಮತ್ತು ದಾಕ್ಷಾಯಿಣಿ ನಮ್ಮ ಕೈತೋಟದಲ್ಲಿ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿ ಮಾಲಿನ್ಯ ರಹಿತ ಕ್ರಿಮಿನಾಶಕ ರಾಸಾಯನಿಕ ಬಳಸದೆ ಆರೋಗ್ಯಕ್ಕೆ ಪೂರಕವಾದ ತರಕಾರಿಗಳನ್ನು ಮತ್ತು ಅಲಂಕಾರಿಕ ಪುಷ್ಪಗಳನ್ನು ಬೆಳೆಸುವ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು.

ಅಮೃತ ಧ್ವನಿಯ ಡಾ.ಭಾರತಿ ಪ್ರಕಾಶ್ ಸ್ವಾಗತಿಸಿದರು.ಶ್ರೀಮತಿ ಗಾಯತ್ರಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಈ ಸಂದರ್ಭದಲ್ಲಿ ಸೇವಾ ಸಮಿತಿಯ ಪದಾಧಿಕಾರಿಗಳು, ಉಪಸ್ಥಿತರಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಸಾರ್ವಜನಿಕರು ಇದರ ಪ್ರಯೋಜನ ಪಡೆದರು.
