ಮೂಡುಬಿದಿರೆ: ಜನವಸತಿ ಪ್ರದೇಶದಲ್ಲಿ ಹರಿಯುತ್ತಿರುವ ಕೊಳಚೆ ನೀರು, ಧರಣಿ ಕುಳಿತು ಪುರಸಭೆಗೆ ದಿಕ್ಕಾರ ಕೂಗಿದ ರಾಜೇಶ್ ಕಡಲಕೆರೆ

ಕಡಲ ಕೆರೆ ಕೈಗಾರಿಕಾ ಪ್ರದೇಶದಿಂದ ಸಾರ್ವಜನಿಕ ರಸ್ತೆ ಸಾರ್ವಜನಿಕ ಜನ ವಸತಿ ಪ್ರದೇಶಕ್ಕೆ ಕೊಳಚೆ ನೀರು ಬರುತ್ತಿದ್ದು ಸುಮಾರು ಮೂರು ವರ್ಷಗಳಿಂದ ಸತತ ದೂರು ನೀಡಿದ್ದರೂ ಪುರಸಭೆಯು ಕ್ರಮಕೈಗೊಂಡಿಲ್ಲವೆಂದು ಆರೋಪಿಸಿ ಸಾಮಾಜಿಕ ಹೋರಾಟಗಾರ ರಾಜೇಶ್ ಕಡಲಕೆರೆ ಅವರು ಪುರಸಭಾ ಕಛೇರಿಯ ಮುಂಭಾಗ ಧರಣಿ ಕುಳಿತು ಪುರಸಭೆಗೆ ಧಿಕ್ಕಾರವನ್ನು ಕೂಗಿದರು.

ಕೈಗಾರಿಕಾ ಪ್ರದೇಶದಲ್ಲಿ ಕಾರ್ಖಾನೆಗಳಿಂದ ಹೊರ ಬಿಡುತ್ತಿರುವ ಕೊಳಚೆ ನೀರು ರಸ್ತೆ ಬದಿಯ ಚರಂಡಿಗಳಲ್ಲಿ ಹರಿದು ಹೋಗುತ್ತಿದ್ದು ಇದು ಸಾಂಕ್ರಾಮಿಕ ರೋಗಗಳನ್ನು ಆಹ್ವಾನಿಸುವಂತಿದೆ ಮಾತ್ರವಲ್ಲದೆ, ಇಲ್ಲಿನ ಕೊಳಚೆ ಪುತ್ತಿಗೆ ಪಂಚಾಯತ್ ವ್ಯಾಪ್ತಿ ಕಡೆಗೂ ಹರಿಯುತ್ತಿದ್ದು ಈ ಬಗ್ಗೆ ಪಂಚಾಯತ್‍ನ ಪಿಡಿಒ ಅವರು ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ್ದರೂ ಪುರಸಭೆಯ ಪರಿಸರ ಅಭಿಯಂತರರು ಕ್ರಮಕೈಗೊಂಡಿಲ್ಲವೆಂದು ಹೇಳಿದ ಅವರು ಕೊಳಚೆ ನೀರು ಹೊರ ಬಿಡುತ್ತಿರುವ ಕಾರ್ಖಾನೆಯು ಪರವಾನಿಗೆಯನ್ನೂ ನವೀಕರಣಗೊಳಿಸಿಲ್ಲವೆಂದು ಆರೋಪಿಸಿದರು.

ಮುಖ್ಯಾಧಿಕಾರಿ ಇಂದು ಎಂ.ಮತ್ತು ಪರಿಸರ ಅಭಿಯಂತರೆ ಶಿಲ್ಪಾ ಅವರು ರಾಜೇಶ್ ಅವರು ಧರಣಿ ಕುಳಿತ ಸ್ಥಳಕ್ಕೆ ಆಗಮಿಸಿ ಕ್ರಮಕೈಗೊಳ್ಳುವ ಬಗ್ಗೆ ಭರವಸೆ ನೀಡಿದಾಗ ರಾಜೇಶ್ ಕಡಲಕೆರೆ ಧರಣಿಯಿಂದ ಹಿಂದೆ ಸರಿದರು.

Related Posts

Leave a Reply

Your email address will not be published.