ಪಚ್ಚನಾಡಿ ಯಲ್ಲಿ ಬೆಂಕಿ ಅನಾಹುತ : ಇಂದು ಸಹ ಮುಂದುವರಿದ ಬೆಂಕಿ ನಂದಿಸುವ ಕಾರ್ಯ

ನಗರದ ಪಚ್ಚನಾಡಿಯ ತ್ಯಾಜ್ಯ ವಿಲೇವಾರಿ ಸ್ಥಳದಲ್ಲಿ ಶುಕ್ರವಾರ ಮತ್ತೆ ಬೆಂಕಿ ಅವಘಡ ಸಂಭವಿಸಿದ್ದು, ಇಂದು ಕೂಡ ಬೆಂಕಿ ಉರಿಯುತ್ತಲೇ ಇದೆ. ವಾಸನೆಯುಕ್ತ ದಟ್ಟ ಹೊಗೆಯು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಮಂಗಳೂರು ವಿಮಾನ ನಿಲ್ದಾಣ, ಎಂಆರ್ಪಿಎಲ್, ಎನ್ಎಂಪಿಟಿ, ಕೆಐಓಸಿಎಲ್ ಸಹಿತ ವಿವಿಧ ಭಾಗದ 10 ಅಗ್ನಿಶಾಮಕ ದಳದ ವಾಹನಗಳು ಬೆಂಕಿ ನಂದಿಸಲು ಹರಸಾಹಸಪಟ್ಟಿತು.

ವಾಹನಗಳಲ್ಲದೆ 12 ಜೆಸಿಬಿ-ಹಿಟಾಚಿಗಳ ಮೂಲಕವೂ ಬೆಂಕಿ ನಂದಿಸಲು ಕಾರ್ಯಾಚರಣೆ ನಡೆಸಿದರೂ ಬೆಂಕಿ ನಂದಿಸುವ ಕಾರ್ಯ ವಿಫಲಗೊಂಡಿದೆ. ಹಿಟಾಚಿ ಯಂತ್ರಗಳು ಬೆಂಕಿ ಕಾಣಿಸಿಕೊಂಡ ಕಸದ ಮಧ್ಯಭಾಗದಲ್ಲಿಯೇ ತೆರಳಿ ಕಾರ್ಯಾಚರಣೆ ನಡೆಸುವುದು ಅನಿವಾರ್ಯವಾಗಿದೆ. ಗಾಳಿ ಜೋರಾಗಿ ಬೀಸಿದಾಗ ದಟ್ಟ ಹೊಗೆಯಲ್ಲಿ ಹಿಟಾಚಿ ಯಂತ್ರವೂ ಕಾಣಿಸುತ್ತಿರಲಿಲ್ಲ. ಬೆಂಕಿ ನಂದಿದರೂ ಕೂಡ ಪೂರ್ಣವಾಗಿ ಹೊಗೆ ನಿಲ್ಲಲು ಕೆಲವು ದಿನ ಬೇಕು ಎಂದು ಹೇಳಲಾಗುತ್ತಿದೆ.
