ಉಪ್ಪಿನಂಗಡಿ : ಶಿರಾಡಿ ರಕ್ಷಿತಾರಣ್ಯದಲ್ಲಿ ಮರಗಳ ಮಾರಣ ಹೋಮ..!!!

ನೆಲ್ಯಾಡಿ: ಪಶ್ಚಿಮ ಘಟ್ಟದ ತಪ್ಪಲುನಲ್ಲಿರುವ ಉಪ್ಪಿನಂಗಡಿ ವಲಯ ವ್ಯಾಪ್ತಿಯಲ್ಲಿ ಬರುವ ಶಿರಾಡಿ, ಶಿಬಾಜೆ ಮೊದಲಾದ ಪ್ರದೇಶದಲ್ಲಿರುವ ರಕ್ಷಿತಾರಣ್ಯದಲ್ಲಿ ರಾಜಾರೋಷವಾಗಿ ಅರಣ್ಯ ಸಂಪತ್ತು ಕಳ್ಳರ ಪಾಲಾಗುತ್ತಿದ್ದು, ಉತ್ತಮ ಜಾತಿಯ ಬೃಹತ್ ಮರಗಳ ಮಾರಣ ಹೋಮ ನಡೆಯುತ್ತಿರುವ ಬಗ್ಗೆ ವ್ಯಾಪಕ ದೂರುಗಳು ವ್ಯಕ್ತವಾಗಿದೆ.

ಶಿರಾಡಿ ರಕ್ಷಿತಾರಣ್ಯದ ಶಿಬಾಜೆ ಸೆಕ್ಷನ್ ವ್ಯಾಪ್ತಿಯಲ್ಲಿರುವ ನೀರಾನದಿಂದ ಕುರುಂಬು, ಅರಂಪಾದೆ ಭೂತಮಜಲುನಿಂದ ಮೇಲಿನ ಕುರುಂಜ ತನಕ, ಪೆರ್ಲದ ಕಲ್ಲಾಜೆಯಿಂದ ಕೊಳಕೆ ಬೈಲು ತನಕ ಸರ್ಕಾರಿ ರಕ್ಷಿತಾರಣ್ಯದಿಂದ ನಿರಂತರವಾಗಿ ಬನ್ಪು, ಬೇಂಗ, ಹೆಬ್ಬಲಸು ಮೊದಲಾದ ಉತ್ತಮ ಜಾತಿಯ ಬೃಹತ್ ಗಾತ್ರದ ಮರಗಳನ್ನು ರಾತ್ರಿ ಬೆಳಗಾಗುವುದರ ಒಳಗಾಗಿ ಸಾಗಾಟ ನಡೆಯುತ್ತಿರುವುದಾಗಿ ದೂರುಗಳು ವ್ಯಕ್ತವಾಗಿದೆ.

ಶಿಬಾಜೆ ಸೆಕ್ಷನ್ ವ್ಯಾಪ್ತಿಯಲ್ಲಿ ಇರುವ ನೀರಾನ ಮತ್ತು ಕುರುಂಬು ಮಧ್ಯೆ ಕೇವಲ 10 ಮೀಟರ್ ಅಂತರದಲ್ಲಿ, ಮುಖ್ಯ ರಸ್ತೆಗೆ ಕಾಣುವಂತಿದ್ದ ಮತ್ತು ಅರಣ್ಯ ಇಲಾಖಾ ಸಿಬ್ಬಂದಿಯೋರ್ವರ ಮನೆಯಿಂದ ಕೂಗಳತೆ ದೂರದಲ್ಲಿ ಬೃಹತ್ ಗಾತ್ರದ ೨ ಬೇಂಗದ ಮರಗಳನ್ನು ಕಡಿದು ಹಾಕಿ ೮ ಅಡಿ ಉದ್ದದ ದಿಮ್ಮಿಗಳನ್ನಾಗಿ ಮಾಡಿ ಸಾಗಾಟ ಮಾಡಿರುವ ಕೃತ್ಯದ ಕುರುಹು ಕಂಡು ಬಂದಿದೆ.

ಕಾಡಿನೊಳಗೆ ಮರ ಇರುವ ಜಾಗಕ್ಕೆ ರಾತ್ರಿ ಹೊತ್ತಿನಲ್ಲಿ ಟೆಂಪೋ ಮತ್ತು ಮರ ಕೊಯ್ಯುವ ಯಂತ್ರದೊಂದಿಗೆ ೪ರಿಂದ ೫ ಜನ ಹೋಗಿ ಮರವನ್ನು ಬುಡದಿಂದಲೇ ಉರುಳಿಸಿ ಹಾಕಿ ಬಳಿಕ ಅಲ್ಲೇ ಮರವನ್ನು ತುಂಡು ಮಾಡಿ ದಿಮ್ಮಿಗಳನ್ನಾಗಿ ಮಾಡಿ ಟೆಂಪೋಗೆ ಹಾಕಲಾಗುತ್ತದೆ. ಬೆಳಗಾಗುವುದರ ಒಳಗಾಗಿ ಕಾಡಿನೊಳಗಿದ್ದ ಮರ ಮಾಯವಾಗಿರುತ್ತದೆ.

ಅದರ ರೆಂಬೆ ಕೊಂಬೆಗಳನ್ನು ಅಲ್ಲೇ ಬಿಟ್ಟು ಹೋಗಿ ೪ ದಿನಗಳ ಬಳಿಕ ಅದನ್ನು ಕಟ್ಟಿಗೆಯಾಗಿ ಮಾಡಿ ಪಿಕಪ್ ವಾಹನದಲ್ಲಿ ಸಾಗಾಟ ಮಾಡಲಾಗುತ್ತದೆ. ಆ ಬಳಿಕ ಬುಡಕ್ಕೆ ಪೆಟ್ರೋಲ್ ಸುರಿದು ಅಲ್ಲೇ ಅದನ್ನು ಸುಟ್ಟು ಹಾಕಲಾಗಿ ಕುರುಹು ನಾಶ ಮಾಡಲಾಗುತ್ತದೆ ಎಂದು ದೂರಿಕೊಂಡಿದ್ದಾರೆ.

ಶಿಬಾಜೆ ಸೆಕ್ಷನ್ ವ್ಯಾಪ್ತಿಯಲ್ಲಿರುವ ನೀರಾನದಿಂದ ಕುರುಂಬು, ಅರಂಪಾದೆ ಭೂತಮಜಲುನಿಂದ ಮೇಲಿನ ಕುರುಂಜ ತನಕ, ಪೆರ್ಲದ ಕಲ್ಲಾಜೆಯಿಂದ ಕೊಳಕೆ ಬೈಲು ತನಕ ಸುಮಾರು 5 ಕಿ.ಮೀ. ವ್ಯಾಪ್ತಿಯ ರಕ್ಷಿತಾರಣ್ಯದ ಒಳಗಡೆ ಮರಗಳ ಲೂಟಿ ಆಗಿದ್ದು, ಈ ಪ್ರದೇಶ ಇದೀಗ ಬಯಲಿನಂತಾಗಿದೆ. ಅರಣ್ಯದ ಬದಿಯಲ್ಲಿ ರಸ್ತೆ ಇರುವ ಭಾಗದಲ್ಲಿ ಮಾತ್ರ ಮರಗಳು ಕಾಣುತ್ತಿದ್ದು, ಅವುಗಳು ಕೂಡಾ ಮಾಯಾವಾಗ ತೊಡಗಿದೆ. ಈ ಬಗ್ಗೆ ಅರಣ್ಯ ಇಲಾಖೆಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಗ್ರಾಮಸ್ಥರು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.

Related Posts

Leave a Reply

Your email address will not be published.