ಬೆಳ್ತಂಗಡಿ – ಬಾವಿಯಲ್ಲಿ ಮಹಿಳೆಯ ಶವ ಪತ್ತೆ
ಬೆಳ್ತಂಗಡಿಯಲ್ಲಿ ಮಹಿಳೆಯ ಶವ ಬಾವಿಯಲ್ಲಿ ಪತ್ತೆಯಾಗಿದ್ದು ಇದು ಕೊಲೆ ಎಂಬ ಅನುಮಾನ ವ್ಯಕ್ತವಾಗಿದೆ. ಬೆಳ್ತಂಗಡಿ ತಾಲೂಕಿನ ಬೆಲಾಲು ಗ್ರಾಮದ ಮಾಚಾರು ಬಳಿಯ ಕೆಂಪನೊಟ್ಟು ಎಂಬಲ್ಲಿ ಈ ಘಟನೆ ನಡೆದಿದ್ದು ಕೊಲೆ ಮಾಡಿ ಬಾವಿಗೆ ಎಸೆದಿದ್ದಾರೆ ಎಂಬ ಅನುಮಾನ ಇದೆ. ಮೃತಪಟ್ಟ ಮಹಿಳೆ ಸುಧಾಕರ ಎಂಬವರ ಪತ್ನಿ 27 ವರ್ಷದ ಶಶಿಕಲಾ ಎಂದು ಗುರುತಿಸಲಾಗಿದೆ.
ಮೃತರ ಗಂಡ ಸುಧಾಕರ ರಬ್ಬರ್ ಟಾಪಿಂಗ್ ಮಾಡುತ್ತಿದ್ದು ಗಂಡ ಹೆಂಡತಿ ನಡುವೆ ಗಲಾಟೆ ನಡೆದು ನಂತರ ಕೊಲೆ ಮಾಡಿ ಶಶಿಕಲರನ್ನ ಬಾವಿಗೆ ಹಾಕಲಾಗಿದೆ ಎಂದು ಮೃತ ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ ಎಂದು ತಿಳಿದುಬಂದಿದೆ. ಈಗಾಗಲೇ ಶಶಿಕಲಾ ಗಂಡ ಸುಧಾಕರ್ ನಾಯ್ಕ ನನ್ನು ಧರ್ಮಸ್ಥಳ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ ,ಧರ್ಮಸ್ಥಳ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ಡಿ, ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.