ಕುಂದಾಪುರ: ಸಮಾನ ಮನಸ್ಕ ಸಂಘಟನೆಗಳಿಂದ ಮಾನವ ಸರಪಳಿ ಸಮಾರೋಪ
ಕುಂದಾಪುರ: ಎಲ್ಲಿಯವರೆಗೆ ಬ್ರಿಟನ್ ದೇಶದ ಪಾರ್ಲಿಮೆಂಟ್ ಕಟ್ಟಡದ ಮಧ್ಯೆ ಗಾಂಧಿ ಪ್ರತಿಮೆ ಇರುತ್ತದೆಯೋ ಅಲ್ಲಿಯ ತನಕ ಗಾಂಧೀಜಿಯವರ ಚಿಂತನೆಗಳಿಗೆ ಸೋಲಿಲ್ಲ ಎಂದು ಬಸ್ರೂರು ಶಾರದಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎಂ.ದಿನೇಶ್ ಹೆಗ್ಡೆ ಅಭಿಪ್ರಾಯಪಟ್ಟರು.
ಮಹಾತ್ಮ ಗಾಂಧಿಜೀಯವರ ಹುತಾತ್ಮ ದಿನದ ಅಂಗವಾಗಿ ಸಮಾನ ಮನಸ್ಕ ಸಂಘಟನೆಗಳಿಂದ, ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ನಡೆದ ಮಾನವ ಸರಪಳಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಗಾಂಧೀಜಿ ಅವರ ವಿಚಾರಧಾರೆಯನ್ನು ಕುಗ್ಗಿಸಲು ಸಾಧ್ಯವಿಲ್ಲದೆ ಇರುವುದರಿಂದ ಗಾಂಧೀಜಿ ಇಂದಿಗೂ ಜಗತ್ತಿನ ಸೊತ್ತಾಗಿ ಉಳಿದುಕೊಂಡಿದ್ದಾರೆ. ಗಾಂಧಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರಲ್ಲಿ ಒಂದು ರೀತಿಯ ಸಹಮತವಿತ್ತು. ಇವರಿಬ್ಬರೂ ಶಾಂತಿ, ಸಹಬಾಳ್ವೆಗೆ ಪ್ರೇರಣೆ ಕೊಟ್ಟವರು. ಅಸ್ಪಶ್ರ್ಯತೆ ಹಾಗೂ ಅನ್ಯಾಯದ ವಿರುದ್ದ ಹೋರಾಟ ಮಾಡುವ ಬಗೆಯನ್ನು ತಿಳಿಸಿಕೊಟ್ಟವರು ಎಂದರು.
ವಿವಿಧ ಸಂಘಟನೆಗಳ ಮುಖಂಡರಾದ ಮೊಳಹಳ್ಳಿ ದಿನೇಶ್ ಹೆಗ್ಡೆ, ಕೆ.ಶಂಕರ್, ಎಚ್. ನರಸಿಂಹ, ಸುರೇಶ್ ಕಲ್ಲಾಗರ, ಚಂದ್ರಶೇಖರ ದೇವಾಡಿಗ, ಉದಯ್ ಕುಮಾರ್ ತಲ್ಲೂರು, ರಾಮಕೃಷ್ಣ ಹೇರ್ಳೆ, ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ, ಉದಯ್ ಕುಮಾರ್ ಶೆಟ್ಟಿ ಅಡಿಕೆಕೊಡ್ಲು, ವಿನೋದ್ ಕ್ರಾಸ್ತಾ, ವಸಂತ ಬನ್ನಾಡಿ, ಸಯ್ಯದ್ ಯಾಸೀನ್ ಸಂತೋಷ ನಗರ, ಗಣೇಶ್ ಮೆಂಡನ್, ರವಿ ವಿ.ಎಂ, ಬಲ್ಕೀಸ್ ಬಾನು, ದೇವಕಿ ಪಿ ಸಣ್ಣಯ್ಯ, ಗಣೇಶ್ ಶೇರುಗಾರ್, ಪ್ರಭಾವತಿ ಶೆಟ್ಟಿ, ಆಶಾ ಕಾರ್ವೆಲ್ಲೊ, ಶೋಭಾ ಸಚ್ಚಿದಾನಂದ ಭಾಗವಹಿಸಿದ್ದರು.