ಮೂಡುಬಿದಿರೆ: ಪಂಜಿನ ಮೆರವಣಿಗೆಯೊಂದಿಗೆ ಮತದಾನದ ಜಾಗೃತಿ

ಮೂಡುಬಿದಿರೆ: ಲೋಕಸಭಾ ಚುನಾವಣೆ-2024ರ ಹಿನ್ನೆಲೆಯಲ್ಲಿ ಮತದಾನ ಮಾಡುವಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಭಾರತ್ ಚುನಾವಣಾ ಆಯೋಗ, ದಕ್ಷಿಣ ಕನ್ನಡ ಜಿಲ್ಲೆ ಸ್ವೀಪ್ ಸಮಿತಿ ಮೂಡುಬಿದಿರೆ ತಾಲೂಕು ಪಂಚಾಯತ್ ಹಾಗೂ ತಾಲೂಕು ಕಛೇರಿ ನೇತೃತ್ವದಲ್ಲಿ ಮೂಡುಬಿದಿರೆ ಪೇಟೆಯಲ್ಲಿ ಪಂಜಿನ ಮೆರವಣಿಗೆ ನಡೆಯಿತು.


ಸಹಾಯಕ ಚುನಾವಣಾಧಿಕಾರಿ ರಾಜು ಕೆ., ಮೂಡುಬಿದಿರೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎಸ್. ವೆಂಕಟಾಚಲಪತಿ, ಮೂಡುಬಿದಿರೆ ತಹಶೀಲ್ದಾರ್ ಶ್ರೀಧರ್ ಎಸ್. ಮಂದಲಮನಿ, ಪೋಲಿಸ್ ನಿರೀಕ್ಷಕರಾದ ನಿತ್ಯಾನಂದ ಪಂಡಿತ್, ಅವರು ತಾಲೂಕು ಪಂಚಾಯತ್ ಆವರಣದಲ್ಲಿ ಪಂಜುವನ್ನು ಬೆಳಗುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ಮೂಡುಬಿದಿರೆ ತಾಲೂಕು ಪಂಚಾಯತ್ ಆವರಣದಿಂದ ಹೊರಟು ಮಸೀದಿ ರಸ್ತೆಯಾಗಿ ತೆರಳಿ ಕೃಷ್ಣಕಟ್ಟೆಯಾಗಿ ಮೂಡುಬಿದಿರೆ ಮುಖ್ಯ ಪಟ್ಟಣದಲ್ಲಿ ಸಂಚರಿಸಿ ನವಮಿ ವಾಕ್ ಮಾರ್ಟ್ ಮೂಲಕ ತಾಲೂಕು ಕಚೇರಿ ಮುಂಭಾಗದಿಂದ ಸ್ವರಾಜ್ಯ ಮೈದಾನದಿಂದ ಹಿಂದುರುಗಿ ನಿಶ್ಮಿತಾ ಟವರ್ ನಿಂದ ಪುರಸಭೆಯಾಗಿ ಮತ್ತೆ ಮೂಡುಬಿದಿರೆ ತಾಲೂಕು ಪಂಚಾಯತ್ ಬಳಿ ಸಾಗಿ ಬಂದು ಸಮಾಪನಗೊಂಡಿತು.

ಪಂಜಿನ ಮೆರವಣಿಗೆಯ ಉದ್ದಕ್ಕೂ ಪಂಚಾಯತ್ ಸಿಬ್ಬಂದಿ ರಾಕೇಶ್ ಅವರು ಸ್ವಚ್ಚತಾ ವಾಹಿನಿಯ ಮೂಲಕ ಮತದಾನದ ಮಾಹಿತಿಯನ್ನು ನೀಡಿದರು.
ಸಹಾಯಕ ನಿರ್ದೇಶಕರಾದ ಸಾಯಿಶ ಚೌಟ ಅವರು ಸ್ವಾಗತಿಸಿ ಕಾರ್ಯಕ್ರಮ‌‌ ನಿರೂಪಿಸಿದರು.

ಮೆರವಣಿಗೆಯಲ್ಲಿ ಪೋಲಿಸ್ ಠಾಣಾ ಸಿಬ್ಬಂದಿಗಳು, ಗ್ರಾ.ಪಂ ಸಿಬ್ಬಂದಿಗಳು, ತಾ ಪಂ. ಸಿಬ್ಬಂದಿಗಳು ಭಾಗವಹಿಸಿದ್ದರು.

Related Posts

Leave a Reply

Your email address will not be published.