ಮೂಡುಬಿದಿರೆ: ಜ.21ರಂದು ಸ್ಫೂರ್ತಿ ಕಲಾ ಸಂಭ್ರಮ

ಮೂಡುಬಿದಿರೆ: ರಿಜ್ಯುವನೇಟ್ ಚೈಲ್ಡ್ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಪ್ರಾಯೋಜಕತ್ವದ ಸ್ಫೂರ್ತಿ ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆ ಹಾಗೂ ತರಬೇತಿ ಕೇಂದ್ರದ ಆಶ್ರಯದಲ್ಲಿ ಸ್ಫೂರ್ತಿ ಕಲಾ ಸಂಭ್ರಮ 2024 ಕಾರ್ಯಕ್ರಮವು ಜ.21ರಂದು ಅರಮನೆಬಾಗಿಲು ಬಳಿಯಿರುವ ಶಾಲೆಯ ಆವರಣದಲ್ಲಿ ನಡೆಯಲಿದೆ ಎಂದು ಶಾಲೆಯ ಸಂಸ್ಥಾಪಕ ಪ್ರಕಾಶ್ ಜೆ.ಶೆಟ್ಟಿಗಾರ್ ತಿಳಿಸಿದರು.
ಅವರು ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಕಲಾಮೇಳದಲ್ಲಿ ಆಹಾರಮೇಳದ ಸಂಭ್ರಮ, ಹಳ್ಳಿ ಸೊಗಡು ಸಂಭ್ರಮ, ಹಳ್ಳಿ ಮನೆಮದ್ದು ಸಂಭ್ರಮ, ಉಡುಪಿ ಕೈಮಗ್ಗ ಸೀರೆ ಸಂಭ್ರಮ, ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಸಂಭ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒಳಗೊಂಡಿದೆ. ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮವನ್ನು ಉದ್ಯಮಿ ಕೆ.ಶ್ರೀಪತಿ ಭಟ್ ಉದ್ಘಾಟಿಸಲಿರುವರು. ಮೂಡುಬಿದಿರೆ ರೋಟರಿ ಕ್ಲಬ್ ಅಧ್ಯಕ್ಷ ನಾಗರಾಜ್ ಬಿ. ಅಧ್ಯಕ್ಷತೆ ವಹಿಸಲಿದ್ದು, ಲೆಕ್ಸಾ ಲೈಟ್ಸ್ ಆಡಳಿತ ನಿರ್ದೇಶಕ ರೊನಾಲ್ಡ್ ಸಿಲ್ವನ್ ಡಿಸೋಜ, ಸಾಹಿತಿ ಶಶಿರಾಜ್ ಕಾವೂರು, ಉದ್ಯಮಿಗಳಾದ ಅಶ್ವಿನ್ ಪಿರೇರಾ, ಅಬುಲ್ ಅಲಾ ಪುತ್ತಿಗೆ, ಯೂಟ್ಯೂಬರ್ ಸಚಿನ್ ಶೆಟ್ಟಿ ಮುಖ್ಯ ಅತಿಥಿಗಳಾಗಿರುವರು. ಎಂ.ಆರ್.ಪಿ.ಎಲ್ ಸಂಸ್ಥೆಯ ಸಮೂಹ ಮಾಧ್ಯಮ ಸಲಹೆಗಾರ ಕೃಷ್ಣ ಹೆಗ್ಡೆ ಮಿಯಾರು ಅವರಿಗೆ ಸ್ಫೂರ್ತಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.
ಬೆಳಗ್ಗೆ 9ಗಂಟೆಗೆ ಕೃತಿಕಾ ಮಾಳ, ಸಚಿನ್ ಪೂಜಾರಿ ನಂದಳಿಕೆ ಅವರಿಂದ ಉದಯಗಾನ ಸಂಭ್ರಮ, 10.30ಕ್ಕೆ ಶಾಲೆಯ ವಿಶೇಷ ಚೇತನ ಮಕ್ಕಳಿಂದ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ, 11 ಗಂಟೆಯಿಂದ ಸಿದ್ಧಕಟ್ಟೆಯ ಡ್ಯಾನ್ಸಿಂಗ್ ಸ್ಟಾರ್ ಬಂಟ್ಸ್ ತಂಡದಿಂದ ಯಕ್ಷನಾಟ್ಯ ಸಂಭ್ರಮ, 11.30ರಿಂದ ಉಡುಪಿಯ ಪದ್ಮಶಾಲಿ ನೇಕಾರ ಪ್ರತಿಷ್ಠಾನ ಹಾಗೂ ಸ್ಫೂರ್ತಿ ವಿದ್ಯಾರ್ಥಿಗಳಿಂದ ಕೈಮಗ್ಗ ಸೀರೆಯೊಂದಿಗೆ ಸೌಂದರ್ಯ ಸಂಭ್ರಮ, 11.45ರಿಂದ ಕೃತಿಕಾ ಮಾಳ, ಚಿತ್ರಕಲಾವಿದ ಪವನ್ ಕಾರ್ಕಳ ಅವರಿಂದ ಗಾನಕುಂಚ ಸಂಭ್ರಮ, ಮಧ್ಯಾಹ್ನ 12ಗಂಟೆಗೆ ವಾಯ್ಸ್ ಆಫ್ ಆರಾಧನಾ ತಂಡದ ಮಕ್ಕಳಿಂದ ಸಾಂಸ್ಕೃತಿಕ ನೃತ್ಯ ಸಂಭ್ರಮ, 1 ಗಂಟೆಯಿಂದ ಯಕ್ಷನಿಧಿ ಮಕ್ಕಳ ಮೇಳದಿಂದ ಮಹಿಷಮರ್ಧಿನಿ-ಯಕ್ಷ ಸಂಭ್ರಮ ನಡೆಯಲಿದೆ. ಬಳಿಕ 3 ಗಂಟೆಗೆ ದೀಪಕ್ ರೈ ಪಾಣಾಜೆ ಹಾಗೂ 4 ಗಂಟೆಗೆ ಕಲಾಶ್ರೀ ಬೆದ್ರ ತಂಡದಿಂದ ಹಾಸ್ಯ ಸಂಭ್ರಮ ನಡೆಯಲಿದೆ. 4.30ರಿಂದ ಉಮೇಶ್ ಕೋಟ್ಯಾನ್ ವಾಮದಪದವು ಬಳಗ ಹಾಗೂ ಸ್ಪೂರ್ತಿ ವಿದ್ಯಾರ್ಥಿಗಳಿಂದ ನೃತ್ಯ-ಗಾನ ಸಂಭ್ರಮ ಕಾರ್ಯಕ್ರಮವಿದೆ.
ಸಾಯಂಕಾಲ 5.30ಕ್ಕೆ ಉಡುಪಿ ಪದ್ಮಶಾಲಿ ನೇಕಾರ ಪ್ರತಿಷ್ಠಾನದ ಅಧ್ಯಕ್ಷ ರತ್ನಾಕರ್ ಇಂದ್ರಾಳಿ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಅರ್ಜುನ್ ಭಂಡಾರ್ಕರ್, ಹ್ಯೂಮಾನಿಟಿ ಟ್ರಸ್ಟ್ ಸಂಸ್ಥಾಪಕ ರೋಶನ್ ಬೆಳ್ಮಣ್, ಎಸ್‌ಕೆಎಫ್ ಎಲಿಕ್ಸರ್ ಇಂಡಿಯ ಪ್ರೈ.ಲಿಮಿಟೆಡ್ ನ ಆಡಳಿತ ನಿರ್ದೇಶಕ ಪ್ರಜ್ವಲ್ ಆಚಾರ್ಯ, ಹರಿಕಥಾ ವಿದ್ವಾಂಸ ಬಿ.ಚಂದ್ರಕಾಂತ್ ಭಟ್, ಉದ್ಯಮಿ ಮಹಮ್ಮದ್ ಶರೀಫ್, ಯೂಟ್ಯೂಬರ್ ಪ್ರಿಯಾ ಡಿಸೋಜ ಮುಖ್ಯ ಅತಿಥಿಗಳಾಗಿರುವರು. ದ.ಕ ಜಿಲ್ಲಾ ಪದ್ಮಶಾಲಿ ಮಹಾಸಭಾದ ಕ್ರೀಡಾ ಸಂಚಾಲಕ ದತ್ತರಾಜ್ ಶೆಟ್ಟಿಗಾರ್ ಕೊಯಿಲ ಬಹುಮಾನ ವಿತರಿಸಲಿರುವರು ಎಂದು ಪ್ರಕಾಶ್ ಜೆ.ಶೆಟ್ಟಿಗಾರ್ ಮಾಹಿತಿ ನೀಡಿದರು.
ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಲತಾ ಸುರೇಶ್, ಉಪಾಧ್ಯಕ್ಷ ಸದಾಶಿವ ಶೆಟ್ಟಿಗಾರ್, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಅನಿತಾ ರೊಡ್ರಿಗಸ್ ಸುದ್ದಿಗೋಷ್ಠಿಯಲ್ಲಿದ್ದರು.

Related Posts

Leave a Reply

Your email address will not be published.