ಉಳ್ಳಾಲ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನ ಬೆಂಬಲ ಇಲ್ಲ : ರಿಯಾಝ್ ಫರಂಗಿಪೇಟೆ

ಉಳ್ಳಾಲ : ಮೇ 10 ರಂದು ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಎಸ್.ಡಿ.ಪಿ.ಐ ಪಕ್ಷಕ್ಕೆ ಕ್ಷೇತ್ರದಲ್ಲಿ ಅಭೂತಪೂರ್ವ ಜನಬೆಂಬಲ ದೊರೆಯುತ್ತಿದ್ದು, ಕಾಂಗ್ರೆಸ್ ಪಕ್ಷಕ್ಕೆ ಮತ ಯಾಚನೆ ಮಾಡಲು ಕಾರ್ಯಕರ್ತರು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆಯಲ್ಲದೆ ಜನ ಸಾಮಾನ್ಯರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಎಂದು ಎಸ್.ಡಿ. ಪಿ.ಐ ಅಭ್ಯರ್ಥಿ ರಿಯಾಝ್ ಫರಂಗಿಪೇಟೆ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಅವರು, ಕ್ಷೇತ್ರದಲ್ಲಿ ಎಸ್.ಡಿ.ಪಿ.ಐ ಪ್ರಚಾರಕ್ಕೆ ಜನರು ಸ್ಪಂದನೆ ನೀಡುತ್ತಿದ್ದು. ಕಳೆದ 18 ವರ್ಷಗಳಿಂದ ಇಲ್ಲಿನ ಶಾಸಕರ ಆಡಳಿತ ವೈಫಲ್ಯ, ಸರ್ವಾಧಿಕಾರಿ ಧೋರಣೆ, ತಾರತಮ್ಯ ನೀತಿ, ಭ್ರಷ್ಟಾಚಾರ ಮತ್ತು ನ್ಯಾಯ ನಿರಾಕರಣೆ ಸಂದರ್ಭದಲ್ಲಿ ಮೌನ ವಹಿಸಿರುವ ಬಗ್ಗೆ ಕ್ಷೇತ್ರದ ಜನರಲ್ಲಿ ಅಸಮಾಧಾನವಿದ್ದು ಈ ಬಾರಿ ಜನತೆ ಬದಲಾವಣೆಯನ್ನು ಬಯಸುತ್ತಿದ್ದಾರೆ.

ಕ್ಷೇತ್ರದಾದ್ಯಂತ ಕಳೆದ 13 ವರ್ಷಗಳಿಂದ ಎಸ್ಡಿಪಿಐ ಪಕ್ಷ ನಡೆಸಿರುವ ಹೋರಾಟ, ಸಾಮಾಜಿಕ ಸೇವೆ ಮತ್ತು ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಮಾಹಿತಿ ಮತ್ತು ಸೇವಾ ಕೇಂದ್ರ ಹಾಗೂ ಇನ್ನಿತರ ಮಾನವೀಯ ಸೇವೆಗಳ ಮೂಲಕ ಜನ ಮನ್ನಣೆ ಪಡೆದಿರುತ್ತದೆ. ಆದ್ದರಿಂದ ಈ ಬಾರಿ ಉಳ್ಳಾಲದ ಜನತೆ ಎಸ್ಡಿಪಿಐ ಪಕ್ಷಕ್ಕೆ ಅಭೂತಪೂರ್ವ ಬೆಂಬಲ ಸೂಚಿಸಿ ಮತ ನೀಡುವ ಮೂಲಕ ಹರಸುವ ಭರವಸೆಯನ್ನು ನೀಡಿರುತ್ತಾರೆ. ಈ ಬೆಳವಣಿಗೆಯು ಸದ್ಯದ ಮಟ್ಟಿಗೆ ಕ್ಷೇತ್ರದಲ್ಲಿ ಎಸ್.ಡಿ.ಪಿ.ಐ – ಬಿಜೆಪಿ ನಡುವೆ ನೇರ ಹಣಾಹಣಿಯ ಸ್ಥಾನಕ್ಕೆ ತಂದು ನಿಲ್ಲಿಸಿದೆ. ಕಾಂಗ್ರೆಸ್ ಪಕ್ಷವು ಯಾವುದೇ ರಾಜಕೀಯ ಷಡ್ಯಂತ್ರ ನಡೆಸಿದರೂ 3ನೇ ಸ್ಥಾನಕ್ಕೆ ತೃಪ್ತಿ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ತಿಳಿಸಿದರು.

ಇದೀಗ ಎಸ್.ಡಿ.ಪಿ.ಐ ಪಕ್ಷವನ್ನು ಸೋಲಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷವು ಬಿಜೆಪಿಯೊಂದಿಗೆ ಒಳ ಒಪ್ಪಂದವನ್ನು ಮಾಡಿಕೊಂಡಿದೆ ಎಂಬ ಮಾತು ಸಾರ್ವಜನಿಕ ವಲಯಗಳಲ್ಲಿ ಕೇಳಿ ಬರುತ್ತಿದೆ. ಅಲ್ಲದೆ ಜನರ ದಿಕ್ಕು ತಪ್ಪಿಸುವ ಸಲುವಾಗಿ ಜನಪರ ಸುಳ್ಳಾರೋಪ ಗಳನ್ನು ಮಾಡುವುದಲ್ಲದೆ, ಕಾಂಗ್ರೆಸ್ ಪಕ್ಷದ ಹಿಂದೂ ಸಹೋದರರಿಗೆ ಬಿಜೆಪಿ ಶಾಲನ್ನು ನೀಡಿ ಅವರ ಮೂಲಕ ಎಸ್ಡಿಪಿಐ ಪಕ್ಷಕ್ಕೆ ಮತ ಯಾಚನೆ ಮಾಡಿಸುವ ಮೂಲಕ ಜನರಲ್ಲಿ ಬಿಜೆಪಿಗರು ಎಸ್ಡಿಪಿಐ ಪಕ್ಷಕ್ಕೆ ಮತ ಯಾಚನೆ ಮಾಡುತ್ತಿದ್ದಾರೆ ಎಂಬ ತಪ್ಪು ಸಂದೇಶವನ್ನು ನೀಡುವಂತಹ ನೀಚ ಕೆಲಸಕ್ಕೆ ಕೈ ಹಾಕಿರುತ್ತಾರೆ. ಅಲ್ಲದೆ ಎಸ್ಡಿಪಿಐ ಪಕ್ಷದ ಬೆಂಬಲಿಗರ ಹಿರಿಯರು, ಸಾಮಾಜಿಕ ಮುಂದಾಳುಗಳ ಮನೆಯವರಿಗೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ವಿವಿಧ ಆಮಿಷಗಳ ಮೂಲಕ ಒತ್ತಡ ಹೇರಲಾಗುತ್ತಿದೆ. ಅಲ್ಲದೆ ಕ್ಷೇತ್ರಾದ್ಯಂತ ಕವರ್ ರಾಜಕೀಯ ಬಹಳ ಜೋರಾಗಿ ನಡೆಯುತ್ತಿದೆ. ಈ ಚುನಾವಣಾ ಅಕ್ರಮಗಳ ಬಗ್ಗೆ ಚುನಾವಣಾ ಅಧಿಕಾರಿಗಳ ಮೌನವು ಕೂಡ ಸಂಶಯಕ್ಕೆ ಎಡೆ ಮಾಡಿಕೊಟ್ಟಿರುತ್ತದೆ ಎಂದು ಅವರು ತಿಳಿಸಿದರು.

ಸೋಲಿನ ಭೀತಿಯಲ್ಲಿರುವ ಕಾಂಗ್ರೆಸ್ ಪಕ್ಷವು ಮತದಾರರ ಓಲೈಕೆಗಾಗಿ ಅತ್ಯಂತ ನೀಚ ಮಟ್ಟಕ್ಕೆ ಇಳಿದಿರುವ ಬಗ್ಗೆ ಮತದಾರರು ಗಮನಿಸುತ್ತಿದ್ದು ಮೇ 10 ರಂದು ನಡೆಯಲಿರುವ ಚುನಾವಣೆಯಲ್ಲಿ ಕ್ಷೇತ್ರದ ಮತದಾರು ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಉತ್ತರವನ್ನು ನೀಡಲಿದ್ದಾರೆ ಎಂದು ರಿಯಾಝ್ ಫರಂಗಿಪೇಟೆ ರವರು ಬಹಳ ಆತ್ಮ ಸ್ಥೈರ್ಯದಿಂದ ಗೆಲುವಿನ ನಗೆ ಬೀರುವ ಇಂಗಿತ ವ್ಯಕ್ತಪಡಿಸಿದರು.

Related Posts

Leave a Reply

Your email address will not be published.