ಕುತ್ತಾರು ಕೊರಗಜ್ಜ ಕ್ಷೇತ್ರಕ್ಕೆ ಸಾಲುಮರದ ತಿಮ್ಮಕ್ಕ ಭೇಟಿ

ಉಳ್ಳಾಲ: ಪದ್ಮಶ್ರೀ ಪುರಸ್ಕೃತ 102 ರ ಹರೆಯದ ಸಾಲುಮರದ ತಿಮ್ಮಕ್ಕ ಇಂದು ಕುತ್ತಾರು ಕೊರಗಜ್ಜ ಆದಿಸ್ಥಳ ಹಾಗೂ ರಕ್ತೇಶ್ವರಿ ಹಾಗೂ ಎಳ್ವೆರ್ ಸಿರಿಕುಲು ಆದಿಸ್ಥಳಗಳಿಗೆ ಕುಟುಂಬ ಸಮೇತರಾಗಿ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ಎಲ್ಲರಿಗೂ ಒಳಿತನ್ನು ದೈವಶಕ್ತಿಗಳು ಕರುಣಿಸಲಿ. ದೇಶಕ್ಕೆ ಬಾಧಿಸಿರುವ ಸಾಂಕ್ರಾಮಿಕ ದೂರವಾಗಲಿ. ಎಲ್ಲರೂ ಪರಿಸರದೊಂದಿಗಿನ ಕಾಳಜಿಯ ಜೊತೆಗೆ ಸುಖಕರ ಜೀವನ ನಡೆಸಲಿ. ಪ್ರಕೃತಿ ಆರಾಧನೆಯೇ ದೈವಾರಾಧನೆ ಎಂದರು.

ತಿಮ್ಮಕ್ಕ ಸಾಕುಮಗ ಉಮೇಶ್ ಮಾತನಾಡಿ, ಈ ಹಿಂದೆ ಆದಿಸ್ಥಳಕ್ಕೆ ಬಂದು ನೆರವೇರಿಸಿದ ಪ್ರಾರ್ಥನೆಗೆ ಫಲ ದೊರಕಿತ್ತು. ಇದಕ್ಕೆ ಪೂರಕವಾಗಿ ತಾಯಿ ಜೊತೆಗೆ ಬಂದಿದ್ದೇನೆ. ಅವರಿಗೂ ಇನ್ನಷ್ಟು ಶಕ್ತಿಗಳು ಆರೋಗ್ಯವನ್ನು ನೀಡಲಿ ಹಾಗೂ ಸರ್ವರಿಗೂ ಒಳಿತನ್ನು ಕರುಣಿಸಲಿ ಎಂದರು.

ಈ ವೇಳೆ ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ ಅವರನ್ನು ಮುನ್ನೂರು ಗ್ರಾ.ಪಂ ಅಧ್ಯಕ್ಷ ವಿಲ್ಫ್ರೆಡ್ ಡಿಸೋಜ ಸನ್ಮಾನಿಸಿದರು. ಕಂದಾಯ ಅಧಿಕಾರಿ ಮಂಜುನಾಥ್, ಗ್ರಾಮ ಅಭಿವೃದ್ಧಿ ಅಧಿಕಾರಿ ರಾಜೀವ್ ನಾಯ್ಕ್ , ಗ್ರಾಮಕರಣಿಕೆ ರೇಷ್ಮಾ , ಕುತ್ತಾರು ಶ್ರೀ ಕೊರಗಜ್ಜ ರಕ್ತೇಶ್ವರಿ ಎಳ್ವೆರ್ ಸಿರಿಕುಲು ದೈವಸ್ಥಾನದ ಹರೀಶ್ ಕುತ್ತಾರ್ ಹಾಗೂ ಮುಂತಾದವರು ಉಪಸ್ಥಿತರಿದ್ದರು.