HomeFresh Newsಬೈಂದೂರು: ಇತಿಹಾಸ ಪ್ರಸಿದ್ಧ ಬೈಂದೂರು ತಗ್ಗರ್ಸೆ ಕಂಬಳೋತ್ಸವಕ್ಕೆ ಚಾಲನೆ

ಬೈಂದೂರು: ಇತಿಹಾಸ ಪ್ರಸಿದ್ಧ ಬೈಂದೂರು ತಗ್ಗರ್ಸೆ ಕಂಬಳೋತ್ಸವಕ್ಕೆ ಚಾಲನೆ

ಹಲವು ಶತಮಾನಗಳ ಇತಿಹಾಸ ಹೊಂದಿರುವ ಉಡುಪಿ ಜಿಲ್ಲೆ ಬೈಂದೂರು ಸಮೀಪದ ತಗ್ಗರ್ಸೆ ಸಾಂಪ್ರದಾಯಿಕ ಕಂಬಳೋತ್ಸವವು ಕಂಠದಮನೆ ಕುಟುಂಬಸ್ಥರಿಗೆ ಸೇರಿದ ಕಂಬಳಗದ್ದೆಯಲ್ಲಿ ಪ್ರತಿವರ್ಷದಂತೆ ಸಂಭ್ರಮದಿಂದ ನಡೆಯಿತು.

60ಕ್ಕೂ ಅಧಿಕ ಜೊತೆ ಕೋಣಗಳು ಹರಕೆ ಹಾಗೂ ಸ್ವರ್ಧೆಯಲ್ಲಿ ಭಾಗವಹಿಸುವ ಮೂಲಕ ತಗ್ಗರ್ಸೆ ಕಂಬಳದ ಮೆರುಗು ಮತ್ತಷ್ಟು ಹೆಚ್ಚಿತು. ಕಂಠದಮನೆ ಟಿ. ನಾರಾಯಣ ಹೆಗ್ಡೆಯವರ ಕುಟುಂಬದವರಿಂದ ಸಾಂಪ್ರದಾಯಿಕ ಕಂಬಳ ವರ್ಷಂಪ್ರತಿ ನಡೆಯುತ್ತಿದ್ದು ಈ ಬಾರಿ `ಸೆನ್ಸಾರ್’ ಮೂಲಕ ಕೋಣದ ಓಟದ ವೇಗಮಿತಿ ಅಳೆಯುವ ಸಾಧನ ಅಳವಡಿಸಲಾಗಿತ್ತು.

ಕರ್ನಾಟಕ ವಿಧಾನ ಪರಿಷತ್ತು ಸದಸ್ಯ ಶ್ರೀ ಮಂಜುನಾಥ ಭಂಡಾರಿ ಅವರು ಮಾತನಾಡಿ
ಕಂಬಳ ಕೇವಲ ಕೋಣಗಳ ಓಟವಲ್ಲ ಇದೊಂದು ರೈತರ ಹಬ್ಬವೆಂಬಂತೆ ಕರಾವಳಿ ಭಾಗದಲ್ಲಿ ಆಚರಿಸಲ್ಪಡುತ್ತದೆ ಮುಂದಿನ ದಿನಗಳಲ್ಲಿ ಕಂಬಳಕ್ಕೆ ಸರಕಾರದಿಂದ 1ಕೋಟಿ ಹಣ ಮೀಸಲಿರಿಸಿದ್ದೇವೆ ಎಂದರು.

ಕರ್ನಾಟಕ ವಿಧಾನ ಪರಿಷತ್ತು ಸದಸ್ಯ ಮಂಜುನಾಥ್ ಭಂಡಾರಿ ಇವರಿಗೆ ಸಂಬಳ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಕಂಠದಮನೆ ಟಿ. ನಾರಾಯಣ ಹೆಗ್ಡೆಯವರು ಮಾತನಾಡಿ, ಬೈಂದೂರು ವ್ಯಾಪ್ತಿಯಲ್ಲಿ ಅತೀ ದೊಡ್ಡ ಕಂಬಳ ಎಂಬ ಹಿರಿಮೆಗೆ ಪಾತ್ರವಾದ ತಗ್ಗರ್ಸೆ ಕಂಬಳದ ದಿನ ಬೆಳಿಗ್ಗೆ ಗದ್ದೆಯ ಅಲಂಕಾರ, ದೈವ, ದೇವರ ಪೂಜೆ ಕಾರ್ಯಾದಿಗಳು ನೆರವೇರಿದ ಬಳಿಕ ಮಧ್ಯಾಹ್ನ ಕಂಬಳಕ್ಕೆ ಬರುವ ಕೋಣಗಳನ್ನು ವೀಳ್ಯ, ತೆಂಗಿನಕಾಯಿ ನೀಡಿ ಬರಮಾಡಿಕೊಳ್ಳಲಾಯಿತು. ವಿಶಾಲವಾದ ಈ ಕಂಬಳ ಗದ್ದೆಯನ್ನು ತೋರಣಗಳಿಂದ ಅಲಂಕರಿಸಿದ್ದರು. ಪದ್ಧತಿಯಂತೆ ಊರಿನ ನಿರ್ದಿಷ್ಟ ಕುಟುಂಬವೊಂದರ ಕೋಣಗಳನ್ನು ಗದ್ದೆಗೆ ಇಳಿಸುವ ಮೂಲಕ ಕಂಬಳಕ್ಕೆ ಹಸಿರು ನಿಶಾನೆ ಸಿಕ್ಕಂತಾಗುತ್ತದೆ. ಮೆರವಣಿಗೆಯಲ್ಲಿ ಸಾಗಿಬಂದ ಕೋಣಗಳ ಪೈಕಿ ಕೆಲವನ್ನು ಕಂಬಳ ಗದ್ದೆಯಲ್ಲಿ ಹರಕೆಯ ಸಲುವಾಗಿ ಓಡಿಸಿದರೇ, ಉಳಿದ ಕೋಣಗಳು ಹಗ್ಗ ಹಾಗೂ ಹಲಗೆ ವಿಭಾಗದ ಸ್ವರ್ಧೆಯಲ್ಲಿ ಪಾಲ್ಗೊಂಡಿದೆ ಎಂದರು.

ಇಲ್ಲಿನ ಕಾರಿಕಟ್ಟೆ ಮನೆತನದವರ ಕೋಣಗಳು ಪ್ರತಿವರ್ಷ ತಗ್ಗರ್ಸೆ ಕಂಬಳ ಗದ್ದೆಗೆ ವಿಶೇಷ ವೇಷಭೂಷಣ, ವಾದ್ಯ, ಚೆಂಡೆ, ಡೋಲು ವಾದನಗಳ ಜೊತೆ ಹೆಜ್ಜೆ ಹಾಕಿ ಬರುವುದು ರೂಢಿ. ಕಳೆದ 37 ವರ್ಷಗಳಿಂದ ಬೈಂದೂರು ವಲಯ ಕಂಬಳ ಸಮಿತಿ ಅಧ್ಯಕ್ಷ ವೆಂಕಟ ಪೂಜಾರಿ ನೇತೃತ್ವದಲ್ಲಿ ಮನೆಯಲ್ಲಿ ಪೂಜಾ ವಿಧಿವಿಧಾನಗಳನ್ನು ನಡೆಸಿ ಕಂಬಳಗದ್ದೆಗೆ ಕೋಣಗಳನ್ನು ಕರೆತರಲಾಯಿತು.


ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಬಾಬು ಹೆಗ್ಡೆ ಅವರು ಮಾತನಾಡಿ
ಸಾಂಪ್ರದಾಯಿಕ ಕಂಬಳಕ್ಕೆ ಯಾವುದೇ ರೀತಿ ಸರಕಾರದಿಂದ ನೆರವು ನೀಡುವುದಿಲ್ಲ ಮುಂದಿನ ದಿನಗಳಲ್ಲಿ ಸರಕಾರಿ ಬಗ್ಗೆ ಗಮನ ಹರಿಸಬೇಕಾಗಿ ಕೇಳಿಕೊಂಡರು.


ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಅಧ್ಯಕ್ಷ ಎಸ್.ಪ್ರಕಾಶಚಂದ್ರ ಶೆಟ್ಟಿ ಮಾತನಾಡಿ ಬೈಂದೂರು ತಾಲೂಕಿನ ಅತಿ ದೊಡ್ಡ ಕಂಬಳ ಇದಾಗಿದ್ದು ಸಾವಿರಾರು ಜನ ಕಂಬಳದಲ್ಲಿ ಪಾಲ್ಗೊಂಡಿದ್ದರು ಎಂದರು.

ಈ ಸಂದರ್ಭದಲ್ಲಿ ಟಿ ನಾರಾಯಣ ಹೆಗ್ಡೆ ತಗ್ಗರ್ಸೆ,ತೆಗ್ಗರ್ಸೆ ಹೆಗ್ಡೆ ಕುಟುಂಬದವರು ಮತ್ತು ತಗ್ಗರ್ಸೆ ಗ್ರಾಮಸ್ಥರು ಕಂಬಳ ಅಭಿಮಾನಿಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments