ಮಂಗಳೂರಿನಲ್ಲಿ ಖಾಸಗಿ ಬಸ್ ಪ್ರಯಾಣ ದರ ಏರಿಕೆ ವಿರೋಧಿಸಿ ಪ್ರತಿಭಟನೆ
ಖಾಸಗಿ ಬಸ್ ಪ್ರಯಾಣ ದರವನ್ನು ಜಿಲ್ಲಾಡಳಿತ ಏಕಪಕ್ಷೀಯ ನಿರ್ಧಾರ ಮಾಡಿದೆ ಎಂದು ಆಕ್ಷೇಪಿಸಿ ಜಾತ್ಯಾತೀತ ಪಕ್ಷಗಳ ಹಾಗೂ ಸಮಾನ ಮನಸ್ಕ ಸಂಫಟನೆಗಳ ಒಕ್ಕೂಟ ದ.ಕ.ಜಿಲ್ಲೆ ವತಿಯಿಂದ ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಯಿತು. ಬಸ್ ಪ್ರಯಾಣ ದರ ಏರಿಕೆ ಹಾಗೂ ಜಿಲ್ಲಾಡಳಿತ ವಿರುದ್ಧ ಘೋಷಣೆ ಕೂಗಿದರು.
ಸಾರಿಗೆ ಪ್ರಾಧಿಕಾರದ ಸಭೆ ಕರೆಯದೆ ಜಿಲ್ಲಾಧಿಕಾರಿ ಬಸ್ ದರವನ್ನು ಏರಿಕೆ ಮಾಡಿ ಏಕಪಕ್ಷೀಯ ನಿರ್ಧಾರ ಮಾಡಿದ್ದಾರೆ ಎಂದು ಸಿಪಿಎಂ ಮುಖಂಡ ಸುನೀಲ್ ಕುಮಾರ್ ಬಜಾಲ್ ಆರೋಪಿಸಿದರು.
ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಸಿಪಿಎಂ ಮುಖಂಡ ವಸಂತ ಆಚಾರಿ, ಅವೈಜ್ಞಾನಿಕ ವಾಗಿ ಬಸ್ ಪ್ರಯಾಣ ದರವನ್ನು ಜಿಲ್ಲಾಡಳಿತ ಹೆಚ್ಚಳ ಮಾಡಿದೆ. ಇದರಿಂದ ದುಡಿದು ಬದುಕುವ ಜನ ಸಾಮಾನ್ಯರು, ಬಸ್ ಪ್ರಯಾಣ ಮಾಡುವವರು ತೊಂದರೆ ಅನುಭವಿಸುತ್ತಿದ್ದಾರೆ. ಟಿಕೆಟ್ ದರ ಶೇ.೫೦ರಷ್ಟು ಏರಿಕೆ ಮಾಡಲಾಗಿದೆ. ಜಿಲ್ಲಾಧಿಕಾರಿ ಜನ ಸಾಮಾನ್ಯರ ಪರ ವಹಿಸುವ ಬದಲು ಬಸ್ ಮಾಲಕರ ಪರ ವಹಿಸಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ವಿವಿಧ ಪಕ್ಷ, ಸಂಘಟನೆಗಳ ಮುಖಂಡರಾದ ಸದಾಶಿವ ಉಳ್ಳಾಲ್, ನೀರಜ್ ಪಾಲ್, ಮುಹಮ್ಮದ್ ಕುಂಜತ್ತಬೈಲ್, ಕೃಷ್ಣಪ್ಪ ಸಾಲ್ಯಾನ್, ವಿ.ಕುಕ್ಯಾನ್, ಸೀತಾರಾಂ ಬೇರಿಂಜ , ಸುಮತಿ ಹೆಗಡೆ, ಅಲ್ತಾಫ್ , ಎಂ. ದೇವದಾಸ್, ಬಾಬಿನ್ ಪ್ರೀತಮ್, ದುರ್ಗಾಪ್ರಸಾದ್ , ಜಯಂತಿ ಶೆಟ್ಟಿ, ಲತೀಫ್ ಬೆಂಗ್ರೆ, ಕರುಣಾಕರ್, ಪುಷ್ಪರಾಜ್ , ರಘು ಎಕ್ಕಾರು, ವಿಶುಕುಮಾರ್, ಸಂತೋಷ್ ಕುಮಾರ್ ಬಜಾಲ್, ಜೆರಾಲ್ಡ್ ಟವರ್, ಮೈಕಲ್ ಮೊದಲಾದವರು ಉಪಸ್ಥಿತರಿದ್ದರು.