ಅವ್ಯವಸ್ಥೆಯ ಆಗರವಾದ ಮೂಡುಬಿದರೆ ಕರಿಂಜೆಯ ಘನತ್ಯಾಜ್ಯ ವಿಲೇವಾರಿ ಘಟಕ

ಎಲ್ಲೆಲ್ಲೂ ಪ್ಲಾಸ್ಟಿಕ್, ಕೊಳೆತ ತ್ಯಾಜ್ಯಗಳ ರಾಶಿ, ವಿಲೇವಾರಿ ಆಗದೆ ಉಳಿದಿರುವ ಗೊಬ್ಬರದ ರಾಶಿ, ಸಿಯಾಳದ ಚಿಪ್ಪುಗಳ ರಾಶಿ, ಕೊಳೆತ ಪದಾರ್ಥಗಳಿಂದ ಹರಿಯುತ್ತಿರುವ ನೀರು, ಅದರ ಮೇಲಿನಿಂದ ಗುಂಯ್ ಎಂದು ಹಾರುತ್ತಾ ಡೆಂಗ್ಯೂ, ಮಲೇರಿಯಾ ರೋಗಕ್ಕೆ ಆಹ್ವಾನ ನೀಡುತ್ತಿರುವ ಸೊಳ್ಳೆಗಳು. ಇಂತಹ ಸನ್ನಿವೇಶ ಕಂಡು ಬಂದದ್ದು ಮೂಡುಬಿದಿರೆ ಪುರಸಭೆಯ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ.
moodabidre

ಪರಿಸರದ ಜನರ ವಿರೋಧದ ಮಧ್ಯೆ 2013 ರಲ್ಲಿ ದಿ. ರತ್ನಾಕರ ದೇವಾಡಿಗ ಅವರು ಪುರಸಭಾ ಅಧ್ಯಕ್ಷರಾಗಿದ್ದ ಸಮಯದಲ್ಲಿ ಕರಿಂಜೆಯ ಮಾರಿಂಜಗುಡ್ಡೆಯಲ್ಲಿ ಸಮರ್ಪಕವಾದ ಘನತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಮಿಸಲಾಗಿತ್ತು. ಇದಕ್ಕೂ ಮೊದಲು ಅಧ್ಯಕ್ಷರಾಗಿದ್ದ ಬೋಜ ಕೋಟ್ಯಾನ್ ಅವರ ಸಮಯದಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಮಿಸುವ ಬಗ್ಗೆ ನಿರ್ಣಯವಾಗಿತ್ತು.
ಪರಿಸರದ ಕೆಲವು ಜನರ ಒಪ್ಪಿಗೆ, ಕೃಷಿಕರ ಒಲ್ಲದ ಮನಸಿನ ಒಪ್ಪಿಗೆಯೊಂದಿಗೆ ನಿರ್ಮಾಣವಾಗಿರುವ ಘನತ್ಯಾಜ್ಯ ವಿಲೇವಾರಿ ಘಟಕವು ಮೊದ ಮೊದಲು ಅತ್ಯಂತ ಸಮರ್ಪಕ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿತ್ತು ಆದರೆ ನಂತರದ ದಿನಗಳಲ್ಲಿ ಸ್ವಲ್ಪ ಸ್ವಲ್ಪವೇ ಹದಗೆಡಲು ಆರಂಭಿಸಿತ್ತು.

ಮೂಡುಬಿದಿರೆಯು ಅತ್ಯಂತ ಅಭಿವೃದ್ಧಿಯನ್ನು ಕಾಣುತ್ತಾ ಬಂದಿದ್ದು ಫ್ಲ್ಯಾಟ್ ಗಳು, ಹೊಟೇಲ್ ಗಳ ಸಂಖ್ಯೆಯೂ ಹೆಚ್ಚಾಗಿದ್ದು ಪುರಸಭೆಯ ವಾಹನಕ್ಕೆ ಕಸವನ್ನು ನೀಡುವವರ ಸಂಖ್ಯೆಯೂ ಗಣನೀಯವಾಗಿ ಹೆಚ್ಚಾಗಿದೆ ಇದರಿಂದಾಗಿ ಕಸವೂ ಹೆಚ್ಚಾಗಿ ಸಂಗ್ರಹವಾಗುತ್ತಿದೆ ಆದರೆ ಗೊಬ್ಬರ, ಪ್ಲಾಸ್ಟಿಕ್ ಮಾರಾಟವಾಗದೆ ಹಾಗೇ ಉಳಿದಿರುವುದರಿಂದ ಘಟಕದಲ್ಲಿ ಕಸದ ರಾಶಿಯನ್ನು ಶೇಖರಣೆ ಮಾಡಿಡಲು ಜಾಗದ ಸಮಸ್ಯೆ ಎದುರಾಗಿದೆ.

moodabidre

ಕಳೆದೆರಡು ವರ್ಷಗಳಿಂದಲೇ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಸವು ಸಮರ್ಪಕವಾಗಿ ನಿರ್ವಹಣೆಯಾಗುವಲ್ಲಿ ಸೋತಿದೆ. ಇಲ್ಲಿ 46 ಮಂದಿ ಪೌರ ಕಾರ್ಮಿಕರು ದುಡಿಯುತ್ತಿದ್ದಾರೆ ಹಾಗೂ ಪ್ಲಾಸ್ಟಿಕ್ ಗಳನ್ನು ಶೇಖರಣೆ ಮಾಡಿಡಲು ಅಸ್ಸಾಂ ಮೂಲದ 10 ಜನ ಕಾರ್ಮಿಕರು ಇದ್ದಾರೆ.
ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಅಸ್ಸಾಂನವರನ್ನು ಹೊರತು ಪಡಿಸಿ 6 ಜನ ಪೌರ ಕಾರ್ಮಿಕರು ದುಡಿಯುತ್ತಿದ್ದು ಆ ಕೊಳೆತು ನಾರುತ್ತಿರುವ ತ್ಯಾಜ್ಯಗಳ ರಾಶಿಗಳ ಮಧ್ಯೆಯೇ ಊಟ, ತಿಂಡಿಯನ್ನು ಮುಗಿಸುತ್ತಿದ್ದಾರೆ.

ಇಲ್ಲಿನ ಅವ್ಯವಸ್ಥೆಯ ಬಗ್ಗೆ ಪುರಸಭಾ ಸದಸ್ಯ ಕೊರಗಪ್ಪ ಅವರು ಪುರಸಭಾಧಿವೇಶಗಳಲ್ಲಿ ಪ್ರತಿಭಾರಿಯೂ ಅಧಿಕಾರಿಗಳ ಗಮನಕ್ಕೆ ತರುತ್ತಿದ್ದರು ಅಲ್ಲದೆ ಪರಿಸರ ಅಭಿಯಂತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ಹೇಳುತ್ತಿದ್ದರು ಆದರೂ ಇದೀಗ ತೀರಾ ಅವ್ಯವಸ್ಥೆಯಿಂದ ಕೂಡಿದ್ದು ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಕ್ರಮವನ್ನು ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ವಾಡ್ ಸದಸ್ಯ ಸುರೇಶ್ ಕೋಟ್ಯಾನ್ ಅವರು ಕಸ ವಿಲೇವಾರಿ ಕಳೆದೆರಡು ವರ್ಷಗಳಿಂದ ಸರಿಯಾಗಿ ಆಗುತ್ತಿಲ್ಲ. ಪರಿಸರದಲ್ಲಿ ಹತ್ತಾರು ಮನೆಗಳಿದ್ದು ಘಟಕದಲ್ಲಿರುವ ಕೊಳೆತ ಕೋಳಿ ಹಾಗೂ ಇತರ ಮಾಂಸದ ತ್ಯಾಜ್ಯಗಳನ್ನು ನಾಯಿಗಳು ಮನೆಯಂಗಳಕ್ಕೆ ಮತ್ತು ಬಾವಿಗಳಿಗೆ ಹಾಕುತ್ತಿವೆ ಈ ಜನರು ತಮ್ಮ ಬಳಿ ದೂರನ್ನು ನೀಡಿದ್ದಾರೆ. ಅವ್ಯವಸ್ಥೆಯ ತಾಣವಾಗಿರುವ ಇದನ್ನು ಕೂಡಲೇ ಇದನ್ನು ಸರಿಪಡಿಸಬೇಕು ಇಲ್ಲದಿದ್ದರೆ ವಾಮಂಜೂರಿನ ಡಂಪ್ಪಿಂಗ್ ಏರಿಯಾದಂತೆ ಕುಸಿಯುವುದು ಖಂಡಿತಾ ಎಂದು ಹೇಳಿರುವ ಅವರು ನಾವು ಜನರ ಪರವಾಗಿ ನಿಂತು ಪ್ರತಿಭಟನೆಯನ್ನು ಮಾಡುವುದಾಗಿ ಎಚ್ಚರಿಸಿದ್ದಾರೆ.

moodabidre

ಇಲ್ಲಿ ಕಳೆದ 6 ತಿಂಗಳಿನಿಂದ ನೀರಿನ ಸಮಸ್ಯೆಯು ಎದುರಾಗಿದ್ದು ಘಟಕದಲ್ಲಿ ತುಂಬಿರುವ ಕೊಳಚೆ ನೀರನ್ನು ಕ್ಲೀನ್ ಮಾಡಲು ಪೌರ ಕಾರ್ಮಿಕರಿಗೆ ಕಷ್ಟ ಸಾಧ್ಯವಾಗಿದೆ. ಅಲ್ಲದೆ ಮೊದಲಿಗೆ ಟೆಂಡರ್ ಆದವರು ಪ್ಲಾಸ್ಟಿಕ್ ಗಳನ್ನು ತೆಗೆದುಕೊಂಡು ಹೋಗದೆ ಇರುವುದರಿಂದ ಘಟಕದ ಸುತ್ತಮುತ್ತ ಪ್ಲಾಸ್ಟಿಕ್ ಗಳದ್ದೇ ರಾಶಿ ತುಂಬಿಕೊಂಡಿದೆ. ಇದಲ್ಲದೆ ಕೃಷಿಕರು ಗೊಬ್ಬರವನ್ನು ಖರೀದಿ ಮಾಡದೆ ಇರುವುದರಿಂದ ಅದೂ ಕೂಡಾ ರಾಶಿಯಾಗಿ ತುಂಬಿಕೊಂಡಿದೆ ಮತ್ತು ಸಿಯಾಳ ಚಿಪ್ಪುಗಳ ರಾಶಿ ಬಿದ್ದು ಒಳಗಡೆ ಮಳೆಯ ನೀರು ತುಂಬಿಕೊಂಡು ಸೊಳ್ಳೆಗಳು ಉತ್ಪತ್ತಿಯಾಗಲು ಕಾರಣವಾಗುತ್ತಿದೆ.

Related Posts

Leave a Reply

Your email address will not be published.