ಆಳ್ವಾಸ್ನಲ್ಲಿ ಕೋವಿಶೀಲ್ಡ್ ಲಸಿಕೆ ಅಭಿಯಾನ : ಶಾಸಕ ಉಮಾನಾಥ ಕೋಟ್ಯಾನ್ ಚಾಲನೆ
ಮೂಡುಬಿದಿರೆ: ಜಸ್ಟಿಸ್ ಕೆ.ಎಸ್. ಹೆಗ್ಡೆ ಆಸ್ಪತ್ರೆ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ಕೋವಿಶೀಲ್ಡ್ ಲಸಿಕೆ ಅಭಿಯಾನವನ್ನು ಶಾಸಕ ಉಮಾನಾಥ್ ಕೋಟ್ಯಾನ್ ಉದ್ಘಾಟಿಸಿದರು. ಮೊದಲ ಹಂತದ ವ್ಯಾಕ್ಸಿನೇಶನ್ ಡ್ರೈವ್ ಆಳ್ವಾಸ್ ನುಡಿಸಿರಿ ವೇದಿಕೆಯಲ್ಲಿ ನಡೆಯಿತು.
ಲಸಿಕೆ ಅಭಿಯಾನದ ಭಾಗವಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಿಬ್ಬಂದಿ ವರ್ಗ ಹಾಗೂ ಅವರ ಕುಟುಂಬವರ್ಗದವರು ಸೇರಿ 500 ಜನರಿಗೆ ಕೋವಿಶೀಲ್ಡ್ ಲಸಿಕೆ ವಿತರಿಸಲಾಯಿತು. ನಾಲ್ಕು ಹಂತಗಳಲ್ಲಿ ಲಸಿಕೆ ವಿತರಣೆ ನಡೆಯಲಿದ್ದು, ಸುಮಾರು 2000 ಜನರಿಗೆ ವ್ಯಾಕ್ಸಿನೇಶನ್ ಮಾಡುವ ಗುರಿಯನ್ನು ಹೊಂದಲಾಗಿದೆ. ಇದೇ ಅಭಿಯಾನದ ಭಾಗವಾಗಿ ಮೂಡುಬಿದಿರೆಯ ಸಾರ್ವಜನಿಕರಿಗೆ ಶನಿವಾರದಂದು ಸ್ಕೌಟ್ಸ್-ಗೈಡ್ಸ್ ಕನ್ನಡ ಭವನದಲ್ಲಿ ಲಸಿಕೆ ನೀಡಲಾಗುವುದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ತಿಳಿಸಿದ್ದಾರೆ.
ಲಸಿಕೆ ಅಭಿಯಾನದಲ್ಲಿ ನಿಟ್ಟೆ ಮೆಡಿಕಲ್ ಅಕಾಡೆಮಿಯ ಕಮ್ಯುನಿಟಿ ಮೆಡಿಸಿನ್, ಅನಸ್ತೇಶಿಯಾ, ಸ್ಟಾಫ್ ನರ್ಸ್ಗಳು ಹಾಗೂ ಇಂಟರ್ನಿಗಳು ವೈದ್ಯಕೀಯ ಸೇವೆ ಒದಗಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿಗಳು ಅಭಿಯಾನದ ಪರಿವೀಕ್ಷಣೆ ಮಾಡಿದರು.
ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಸಿಎ ಉಮೇಶ್ ರಾವ್, ನಿಟ್ಟೆ ಮೆಡಿಕಲ್ ಅಕಾಡೆಮಿಯ ಕಮ್ಯುನಿಟಿ ಮೆಡಿಸಿನ್ ವಿಭಾಗದ ವೈದ್ಯ ಡಾ.ಪವನ್ ಕುಮಾರ್ ಉಪಸ್ಥಿತರಿದ್ದರು.