ಉರ್ವಾ ಜಿಲ್ಲಾ ಡಾ. ಅಂಬೇಡ್ಕರ್ ಭವನದಲ್ಲಿ ಬ್ಯಾಂಕ್ ಆಫ್ ಬರೋಡಾದ 116ನೇ ಸಂಸ್ಥಾಪನಾ ದಿನಾಚರಣೆ

ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾದ 116ನೇ ಸಂಸ್ಥಾಪನಾ ದಿನದ ಕಾರ್ಯಕ್ರಮವು ಮಂಗಳೂರಿನ ಉರ್ವಾ ಜಿಲ್ಲಾ ಡಾ. ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕಾರಿ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್ ಅವರು ಮಾತನಾಡಿ, ಬ್ಯಾಂಕ್ ಸ್ವ ಸಹಾಯ ಸಂಘಗಳ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ತಲುಪಿದೆ. ಉತ್ತಮ ಮನೆ, ಉತ್ತಮ ಆಸ್ಪತ್ರೆಗಳ ಸೇವೆ ಈ ಎಲ್ಲಾ ಬೇಡಿಕೆಗಳನ್ನು ಸೇರಿದಂತೆ ಸೂಕ್ತ ಸ್ಪಂದನೆ ಬ್ಯಾಂಕಿನಿಂದ ದೊರೆಯುವಂತಾಗಲಿ ಎಂದರು.
ಬ್ಯಾಂಕ್ ಆಫ್ ಬರೋಡಾದ ಮಹಾ ಪ್ರಬಂಧಕಿ ಹಾಗೂ ಮಂಗಳೂರು ವಲಯದ ಮುಖ್ಯಸ್ಥೆ ಗಾಯತ್ರಿ ಆರ್. ಮಾತನಾಡಿ, 1908ರಲ್ಲಿ ಮಹಾರಾಜಾ ಮೂನೇ ಸಯ್ಯಾಜಿರಾವ್ ಗಾಯಕ್ವಾಡ್ ಅವರಿಂದ ಸ್ಥಾಪಿಸಲ್ಪಟ್ಟು ವಿಶಾಲವಾದ 17 ದೇಶಗಳು ಸೇರಿದಂತೆ 8200 ಶಾಖೆಗಳನ್ನು ಹೊಂದಿರುವ ಬಲಿಷ್ಠ ಬ್ಯಾಂಕ್ ಆಗಿ ಬೆಳೆದಿದೆ ಎಂದರು. ವಿಜಯ ಬ್ಯಾಂಕ್, ದೇನಾ ಬ್ಯಾಂಕ್ಗಳನ್ನೂ ಈಗ ಬ್ಯಾಂಕ್ ಆಫ್ ಬರೋಡ ಒಳಗೊಂಡಿದೆ. ಪ್ರಸ್ತುತ ಬ್ಯಾಂಕ್ 116ನೇ ಸಂಸ್ಥಾಪನಾ ದಿನವನ್ನು ಆಚರಿಸುತ್ತದ್ದು, ಈ ವರ್ಷ ಸಾಧಿಸು, ಸಹಯೋಗ ನೀಡು ಹಾಗೂ ಉತ್ಕೃಷ್ಟನಾಗು ಎನ್ನುವ ವಿಷಯವನ್ನು ಆರಿಸಿಕೊಂಡಿದೆ ಎಂದರು.
ಬ್ಯಾಂಕ್ ಆಫ್ ಬರೋಡದ ಮಾಜಿ ಕಾರ್ಯ ನಿರ್ವಾಹಕ ನಿರ್ದೇಶಕರಾದ ಕೆ.ಆರ್.ಶೆಣೈ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ, ಬ್ಯಾಂಕ್ ಆಫ್ ಬರೋಡದಲ್ಲಿನ ತಮ್ಮ ಅನುಭವ ವ್ಯಕ್ತಪಡಿಸಿ, ಬ್ಯಾಂಕ್ ಆಫ್ ಬರೋಡಾ ಸಧೃಡವಾಗಿದ್ದು, ಇದರಲ್ಲಿ ವಿಲೀನಗೊಂಡಿರುವ ಇತರ ಬ್ಯಾಂಕ್ಗಳ ಸಿಬ್ಬಂದಿ ಅದೃಷ್ಟವಂತರು ಎಂದರು.
ಬ್ಯಾಂಕ್ ಸಿಎಸ್ಆರ್ ಭಾಗವಾಗಿ ಮಂಗಳ ಸೇವಾ ಸಮಿತಿ ತೊಕ್ಕೊಟ್ಟು, ಸ್ನೇಹದೀಪ ಬಿಜೈ, ಸ್ವಾಮಿ ಶ್ರದ್ಧಾನಂದ ಸೇವಾಶ್ರಮಗಳಿಗೆ ನೆರವು ನೀಡಲಾಯಿತು. ಬ್ಯಾಂಕಿನವಲಯ ಉಪ ಮುಖ್ಯಸ್ಥ ರಮೇಶ್ ಕಾನಡೆ, ಡಿಜಿಎಂ ನೆಟ್ವರ್ಕ್ ಅಶ್ವಿನಿ ಕುಮಾರ್ ಉಪಸ್ಥಿತರಿದ್ದರು.
ಉಪವಲಯ ಮುಖ್ಯಸ್ಥರಾದ ರಮೇಶ್ ಕಾನಡೆ ಮತ್ತು ಡಿಜಿಎಂ ನೆಟ್ವರ್ಕ್ ಅಶ್ವಿನಿ ಕುಮಾರ್ ಅವರು ಧ್ವಜಾರೋಹಣ ಮಾಡಿದರು. ಪ್ರಾದೇಶಿಕ ವ್ಯವಸ್ಥಾಪಕ ಎಂ.ವಿ.ಎಸ್ ಪ್ರಸಾದ್ ಸ್ವಾಗತಿಸಿ, ಅನಿತಾ ನಿರೂಪಿಸಿದರು. ಪ್ರಾದೇಶಿಕ ಕಚೇರಿ ಉಪವಲಯ ವ್ಯವಸ್ಥಪಕ ರಾಜೇಶ್ ವಂದಿಸಿದರು.